Ahmedabad plane crash: ಅಹಮದಾಬಾದ್ ವಿಮಾನ ದುರಂತ; ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದ ಟಾಟಾ ಗ್ರೂಪ್
Tata Group: ಗುಜರಾತ್ನ ಅಹಮದಾಬಾದ್ನಿಂದ 242 ಮಂದಿಯನ್ನು ಹೊತ್ತುಕೊಂಡು ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 241 ಮಂದಿ ಮೃತಪಟ್ಟಿದ್ದಾರೆ. ಇದೀಗ ಟಾಟಾ ಗ್ರೂಪ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಜತೆಗೆ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಗಭರವಸೆ ನೀಡಿದೆ.


ಗಾಂಧಿನಗರ: ಗುಜರಾತ್ನ ಅಹಮದಾಬಾದ್ನಿಂದ 242 ಮಂದಿಯನ್ನು ಹೊತ್ತುಕೊಂಡು ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 241 ಮಂದಿ ಮೃತಪಟ್ಟು ಓರ್ವ ಪವಾಡ ಸದೃಶ ಪಾರಾಗಿದ್ದಾನೆ (Ahmedabad plane crash). ಇದೀಗ ಟಾಟಾ ಗ್ರೂಪ್ (Tata Group) ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಏರ್ ಇಂಡಿಯಾ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ (N.Chandrasekaran) ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಸಮಯದಲ್ಲಿ ಏರ್ ಇಂಡಿಯಾವು ಸಂತ್ರಸ್ತರ ಕುಟುಂಬಗಳ ಬೆಂಬಲಕ್ಕೆ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ. "ಸ್ಥಳದಲ್ಲಿ ತುರ್ತು ಪ್ರತಿಕ್ರಿಯೆ ತಂಡಗಳಿಗೆ ಸಹಾಯ ಮಾಡಲು ಮತ್ತು ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ಬೆಂಬಲ ಮತ್ತು ನೆರವನ್ನು ಒದಗಿಸಲು ನಾವು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆʼʼ ಎಂದು ಚಂದ್ರಶೇಖರನ್ ಹೇಳಿದ್ದಾರೆ.
ಮಾಹಿತಿಯನ್ನು ಪಡೆದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಏರ್ ಇಂಡಿಯಾ ಅಧ್ಯಕ್ಷ ಚಂದ್ರಶೇಖರನ್ ತಿಳಿಸಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿಯನ್ನು ತಲುಪಿಸಲು ತುರ್ತು ಕೇಂದ್ರ ತಂಡವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ಟಾಟಾ ಗ್ರೂಪ್ನ ಎಕ್ಸ್ ಪೋಸ್ಟ್:
We are deeply anguished by the tragic event involving Air India Flight 171.
— Tata Group (@TataCompanies) June 12, 2025
No words can adequately express the grief we feel at this moment. Our thoughts and prayers are with the families who have lost their loved ones, and with those who have been injured.
Tata Group will…
ಈ ಸುದ್ದಿಯನ್ನೂ ಓದಿ: ಸಾವನ್ನೇ ಗೆದ್ದ ರಮೇಶ್ ಎಂಬ ದೇವರ ಮಗ: ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದಿದ್ದೇ ಪವಾಡ; ಪಾರಾಗಿದ್ದು ಹೇಗೆ?
ಹಾಸ್ಟೆಲ್ನ ಪುನರ್ನಿರ್ಮಾಣಕ್ಕೆ ನೆರವು
“ಈ ದುರಂತದಲ್ಲಿ ಮೃತರ ಕುಟುಂಬಗಳಿಗೆ ಟಾಟಾ ಗ್ರೂಪ್ ತಲಾ 1 ಕೋಟಿ ರೂ. ಹಾಗೂ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಸಹ ಭರಿಸುತ್ತೇವೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲ ಆರೈಕೆ ಮತ್ತು ಬೆಂಬಲ ದೊರೆಯುವಂತೆ ನೋಡಿಕೊಳ್ಳುತ್ತೇವೆ. ವಿಮಾನ ಪತನಗೊಂಡ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನ ಪುನರ್ನಿರ್ಮಾಣಕ್ಕೆ ನೆರವು ನೀಡುತ್ತೇವೆ” ಎಂದು ಅವರು ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ.
204ಕ್ಕೂ ಹೆಚ್ಚು ಶವ
ಅಪಘಾತದ ಸ್ಥಳದಿಂದ 204ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ರಾಯಿಟರ್ಸ್ಗೆ ತಿಳಿಸಿದ್ದಾರೆ. ಸಂತ್ರಸ್ತರ ಕುಟುಂಬ ಮತ್ತು ಸಿಬ್ಬಂದಿಗಾಗಿ ಏರ್ ಇಂಡಿಯಾ 2 ಪರಿಹಾರ ವಿಮಾನಗಳನ್ನು ನಿಯೋಜಿಸಿದೆ. ಈ ವಿಮಾನಗಳು ಗುರುವಾರ (ಜೂ. 12) ರಾತ್ರಿ 11 ಗಂಟೆಗೆ ದಿಲ್ಲಿಯಿಂದ ಅಹಮದಾಬಾದ್ಗೆ ಮತ್ತು ಮುಂಬೈನಿಂದ ಅಹಮದಾಬಾದ್ಗೆ ತೆರಳಲಿದೆ.
ಲಂಡನ್ ಗ್ಯಾಟ್ವಿಕ್ಗೆ ತೆರಳುತ್ತಿದ್ದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನ ಎಐ 171, ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಯಿತು. ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಇದ್ದರು. ಈ ಪೈಕಿ ರಮೇಶ್ ವಿಶ್ವಕುಮಾರ್ ಎಂಬವರೊಬ್ಬರು ಮಾತ್ರ ಬದುಕುಳಿದಿದ್ದಾರೆ. ವಿಮಾನ ಅಪಘಾತಕ್ಕೀಡಾಗುತ್ತದ್ದಂತೆ ಅವರು ತುರ್ತು ನಿರ್ಮನ ದ್ವಾರದಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಸದ್ಯ ಅವರಿಗೆ ಅಹಮದಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.