ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೆಲಂಗಾಣ ವಿಧಾನಸಭೆ ಆವರಣದಲ್ಲಿ ಕುಸಿದ ಸರ್ಕಾರಿ ಅಧಿಕಾರಿ: ಸಚಿವ ವಾಕಿಟಿ ಶ್ರೀಹರಿ ಸಿಪಿಆರ್‌ ಮಾಡಿದರೂ ಬದುಕಿಸಲು ಸಾಧ್ಯವಾಗಿಲ್ಲ

Vakiti Srihari: ತೆಲಂಗಾಣ ವಿಧಾನಸಭೆ ಆವರಣದಲ್ಲಿ ಹಿರಿಯ ಐಎಎಸ್‌ ಅಧಿಕಾರಿಯ ಪಿಎಸ್‌ ಕೃಷ್ಣ ಮೋಹನ್‌ ರಾಜು (50) ಹಠಾತ್‌ ಕುಸಿದುಬಿದ್ದರು. ಸಚಿವ ವಾಕಿಟಿ ಶ್ರೀಹರಿ ಸ್ಥಳದಲ್ಲೇ ಸಿಪಿಆರ್‌ ನೀಡಿದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮೋಹನ್‌ ರಾಜು ಮೃತಪಟ್ಟಿದ್ದು, ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ

ತೆಲಂಗಾಣ ವಿಧಾನಸಭೆ ಆವರಣದಲ್ಲಿ ಕುಸಿದುಬಿದ್ದ ಅಧಿಕಾರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು

ಹೈದರಾಬಾದ್, ಸೆ. 8: ತೆಲಂಗಾಣ (Telangana) ವಿಧಾನಸಭೆ (Assembly) ಆವರಣದಲ್ಲಿ ಮಂಗಳವಾರ ಹಿರಿಯ ಐಎಎಸ್‌ ಅಧಿಕಾರಿಯ ವೈಯಕ್ತಿಕ ಕಾರ್ಯದರ್ಶಿಯೊಬ್ಬರು ಹಠಾತ್‌ ಕುಸಿದುಬಿದ್ದಿದ್ದು, ಅವರನ್ನು ರಕ್ಷಿಸಲು ರಾಜ್ಯ ಸಚಿವ ವಾಕಿಟಿ ಶ್ರೀಹರಿ ಸ್ಥಳದಲ್ಲೇ ಸಿಪಿಆರ್‌ (CPR) ನೆರವು ನೀಡಿದರು. ಆದರೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಅಧಿಕಾರಿ ಮೃತಪಟ್ಟಿದ್ದಾರೆ. ಮೃತರನ್ನು 50 ವರ್ಷದ ಕೃಷ್ಣ ಮೋಹನ್ ರಾಜು ಎಂದು ಗುರುತಿಸಲಾಗಿದೆ. ಅವರು ಹಿರಿಯ ಐಎಎಸ್‌ ಅಧಿಕಾರಿ ನವೀನ್ ಮಿತ್ತಲ್ ಅವರ ವೈಯಕ್ತಿಕ ಕಾರ್ಯದರ್ಶಿಯಾಗಿ (PS) ಕಾರ್ಯನಿರ್ವಹಿಸುತ್ತಿದ್ದರು. ಇಂಧನ ಇಲಾಖೆಯಲ್ಲಿ ಸೆಕ್ಷನ್‌ ಅಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು ಎಂದು ವರದಿಯಾಗಿದೆ.

ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದ ವೇಳೆ ಕಾರಿಡಾರ್‌ನಲ್ಲಿ ರಾಜು ಏಕಾಏಕಿ ಕುಸಿದುಬಿದ್ದರು. ಇದನ್ನು ಗಮನಿಸಿದ ಪಶುಸಂಗೋಪನೆ ಹಾಗೂ ಕ್ರೀಡಾ ಸಚಿವ ವಾಕಿಟಿ ಶ್ರೀಹರಿ ತಕ್ಷಣ ಸ್ಥಳಕ್ಕೆ ಧಾವಿಸಿ, ವೈದ್ಯರು ಬರುವ ಮುನ್ನವೇ ಅವರಿಗೆ ಸಿಪಿಆರ್‌ ನೀಡಲು ಆರಂಭಿಸಿದರು. ಬಳಿಕ ವಿಧಾನಸಭೆಯಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ಮುಂದುವರಿಸಿದರು.

ವಾಕಿಟಿ ಶ್ರೀಹರಿ ಸಿಪಿಆರ್‌ ನೀಡುತ್ತಿರುವ ದೃಶ್ಯ:



ರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಅವರಿಗೆ ಹೃದಯಾಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಬಳಿಕ ತೆಲಂಗಾಣ ಸೆಕ್ರೆಟರಿಯೇಟ್‌ ಅಸೋಸಿಯೇಷನ್‌ ಸಂತಾಪ ಸೂಚಿಸಿದೆ. ಸಚಿವರು ಕುಸಿದಿದ್ದ ಸರ್ಕಾರಿ ನೌಕರನಿಗೆ ಸ್ಥಳದಲ್ಲೇ ಸಿಪಿಆರ್‌ ನೀಡುತ್ತಿರುವ ದೃಶ್ಯ ಸೆರೆಯಾಗಿದೆ.

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ವಿವಾದ: ರಾಷ್ಟ್ರಪತಿಗೆ ಮನವಿ ಸಲ್ಲಿಸಲಿರುವ ಕಾಂಗ್ರೆಸ್‌ನ 32 ಸಂಸದರು

ವಿಧಾನಸಭೆ ಆವರಣದಲ್ಲಿ ರಾಜಕೀಯ ಗದ್ದಲ

ಇದೇ ವೇಳೆ, ವಿಧಾನಸಭೆ ಅಧಿವೇಶನದ ಮೊದಲ ದಿನವೇ ಬಿಆರ್‌ಎಸ್‌ ನಾಯಕರು ಮತ್ತು ಅಧಿಕಾರಿಗಳ ನಡುವೆ ವಿಧಾನಸಭೆ ಆವರಣದಲ್ಲಿ ವಾಗ್ವಾದ ನಡೆದಿದ್ದು, ಬಳಿಕ ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ನಡುವೆ ರಾಜಕೀಯ ಸಂಘರ್ಷದ ವಾತಾವರಣ ನಿರ್ಮಾಣವಾಯಿತು. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಹಾಗೂ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮಂಗಳವಾರ ವಿಧಾನಸಭಾ ಸ್ಪೀಕರ್‌ ಗಡ್ಡಂ ಪ್ರಸಾದ್‌ ಕುಮಾರ್‌ ಅವರನ್ನು ಅವರ ಕೊಠಡಿಯಲ್ಲಿ ಭೇಟಿಯಾಗಿ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.