ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) (TMC), ತನ್ನ ಸ್ಥಾಪನೆಯ ನಂತರದ ಅತಿದೊಡ್ಡ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪಕ್ಷದೊಳಗಿನ ಬಂಡಾಯದಿಂದಾಗಿ ಟಿಎಂಸಿ ದುರ್ಬಲವಾಗುತ್ತಿರುವ ಹಿನ್ನೆಲೆ ಬಿಜೆಪಿಯ (BJP) ಒಂದು ವಲಯದಲ್ಲಿ ಹೊಸ ಆತಂಕ ಶುರುವಾಗಿದೆ. ಟಿಎಂಸಿಯಲ್ಲಿ ಉಂಟಾಗಿರುವ ಬಿರುಕನ್ನು ಸಿಪಿಐ(ಎಂ) (CPIM) ನೇತೃತ್ವದ ಎಡಪಕ್ಷಗಳು ಹಾಗೂ ಕಾಂಗ್ರೆಸ್ (Congress) ಲಾಭವಾಗಿ ಪಡೆದು ಬಲಿಷ್ಠ ವಿರೋಧ ಪಕ್ಷವಾಗಿ ಹೊರಹೊಮ್ಮಬಹುದು ಎಂಬ ಭೀತಿ ಕಾಡುತ್ತಿದೆ.
ಇತ್ತೀಚೆಗೆ ಟಿಎಂಸಿಯ 80 ಶಾಸಕರ ಪೈಕಿ 60 ಮಂದಿ ಬಂಡಾಯ ಎದ್ದು, ಮಮತಾ ಬ್ಯಾನರ್ಜಿ(Mamata Banerjee) ಆಯ್ಕೆ ಮಾಡಿದ ವಿರೋಧ ಪಕ್ಷದ ನಾಯಕನನ್ನು ತಿರಸ್ಕರಿಸಿ, ರಾಜ್ಯಸಭಾ ಸದಸ್ಯ ಹಾಗೂ ಉಲುಬೇರಿಯಾ ಪೂರ್ವ ಕ್ಷೇತ್ರದ ಶಾಸಕ ರಿತಬ್ರತ ಬ್ಯಾನರ್ಜಿ (Ritabrata Banerjee) ಅವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದಾರೆ. ಇದು ಪಕ್ಷದೊಳಗಿರುವ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ.
ಬಿಜೆಪಿಗೆ ಏಕೆ ಆತಂಕ?
2019ರ ಲೋಕಸಭೆ ಹಾಗೂ 2021ರ ವಿಧಾನಸಭೆ ಚುನಾವಣೆಯಲ್ಲಿ ಎಡಪಕ್ಷಗಳ ಮತದಾರರನ್ನು ಸೆಳೆದು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿತ್ತು. ಆದರೆ ಈಗ ಟಿಎಂಸಿ ದುರ್ಬಲವಾದರೆ ಅದೇ ರೀತಿಯಲ್ಲಿ ಎಡಪಕ್ಷಗಳು ಮತ್ತೆ ತಮ್ಮ ಹಳೆಯ ಮತಬ್ಯಾಂಕ್ನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕತ್ವದ ಒಂದು ವಲಯ ಆತಂಕ ವ್ಯಕ್ತಪಡಿಸಿದೆ.
ಈ ಕಾರಣದಿಂದಲೇ ಟಿಎಂಸಿ ಅಸಮಾಧಾನಿತ ಶಾಸಕರು ಹಾಗೂ ಸಂಸದರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಪ್ರಯತ್ನವನ್ನು ಪಕ್ಷ ತಾತ್ಕಾಲಿಕವಾಗಿ ದೂರವಿಟ್ಟಿದೆ ಎನ್ನಲಾಗಿದೆ.
ಶಿವಸೇನೆ ಮಾದರಿಯಲ್ಲಿ ವಿಭಜನೆಯತ್ತ ಟಿಎಂಸಿ? 59 ಶಾಸಕರ ಬೆಂಬಲದೊಂದಿಗೆ ವಿಧಾನಸಭೆಗೆ ರಿತಬ್ರತ ಬ್ಯಾನರ್ಜಿ ಆಗಮನ
ಎಡಪಕ್ಷಗಳ ಪುನರುತ್ಥಾನದ ಲಕ್ಷಣಗಳು
2016ರ ಬಳಿಕ ಮೊದಲ ಬಾರಿಗೆ ಸಿಪಿಐ(ಎಂ) ಡೊಂಕಲ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಫಾಲ್ಟಾ ಮರುಮತದಾನದಲ್ಲೂ 40 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೇರಿದೆ. ಜೊತೆಗೆ ಪಕ್ಷದ ಹಳೆಯ ಕಚೇರಿಗಳು ಪುನಃ ಕಾರ್ಯಾರಂಭ ಮಾಡುತ್ತಿದ್ದು, ಸಂಘಟನೆ ಮತ್ತೆ ಚುರುಕುಗೊಳ್ಳುತ್ತಿರುವ ಸೂಚನೆಗಳು ಕಂಡುಬರುತ್ತಿವೆ. ಎಬಿಟಿಎ (ABTA) ಹಾಗೂ ಸಿಐಟಿಯು (CITU) ಮೊದಲಾದ ಎಡಪಕ್ಷಗಳ ಸಂಘಟನೆಗಳೂ ಮತ್ತೆ ಬೀದಿಗಿಳಿದು ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ.
ಟಿಎಂಸಿಗೆ ಒಡಿಶಾ ಮಾದರಿ?
ರಾಜಕೀಯ ವಿಶ್ಲೇಷಕರ ಪ್ರಕಾರ, ಒಡಿಶಾದಲ್ಲಿ ಬಿಜೆಡಿ ಪಕ್ಷವನ್ನು ವಿಭಜನೆಯಿಂದ ರಕ್ಷಿಸಿ ಕಾಂಗ್ರೆಸ್ ಬಲಗೊಳ್ಳದಂತೆ ಬಿಜೆಪಿ ನೋಡಿಕೊಂಡಿತ್ತು. ಇದೇ ಮಾದರಿಯನ್ನು ಪಶ್ಚಿಮ ಬಂಗಾಳದಲ್ಲೂ ಅನುಸರಿಸಿ, ಟಿಎಂಸಿಯನ್ನು ಸಂಪೂರ್ಣವಾಗಿ ಒಡೆಯದಂತೆ ಕಾಯುವ ತಂತ್ರವನ್ನು ಬಿಜೆಪಿ ಅನುಸರಿಸಬಹುದು ಎನ್ನಲಾಗುತ್ತಿದೆ.
ಎಡಪಕ್ಷಗಳಿಗೆ ಸವಾಲು
ಆದರೆ ಎಡಪಕ್ಷಗಳ ಪುನರುತ್ಥಾನ ಅಷ್ಟು ಸುಲಭವಲ್ಲ. ಟಿಎಂಸಿ ಮತದಾರರನ್ನು ತಮ್ಮತ್ತ ಸೆಳೆಯುವುದು, ಬಿಜೆಪಿಯನ್ನು ಮುಖ್ಯ ಗುರಿಯನ್ನಾಗಿಸಿಕೊಳ್ಳುವುದು ಹಾಗೂ ರಾಜ್ಯವ್ಯಾಪಿ ಸಂಘಟನೆಯನ್ನು ಮತ್ತೆ ಬಲಪಡಿಸುವುದು ಎಡಪಕ್ಷಗಳ ಮುಂದಿರುವ ಪ್ರಮುಖ ಸವಾಲುಗಳಾಗಿವೆ.