ಮುಂಬೈ, ಮೇ 13: ಖಾಸಗಿ ಕಂಪನಿಯ ತರಬೇತಿ ವಿಮಾನ ಅಪಘಾತಕ್ಕೀಡಾದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ (Baramati Plane crash) ಬುಧವಾರ (ಮೇ 13) ಬೆಳಗ್ಗೆ ಸಂಭವಿಸಿದೆ. ಜನವರಿಯಲ್ಲಿ ಅಜಿತ್ ಪವಾರ್ (Ajith Pawar) ಅವರ ವಿಮಾನ ಪತನಗೊಂಡು ದುರ್ಮರಣಕ್ಕೀಡಾದ ಅದೇ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ವಿಮಾನದಲ್ಲಿ ಏಕಾಂಗಿಯಾಗಿ ತರಬೇತಿ ಪೈಲಟ್ ಪ್ರಯಾಣಿಸುತ್ತಿದ್ದರು. ಬಾರಾಮತಿ ವಾಯುನೆಲೆಯ ಪಕ್ಕದಲ್ಲಿರುವ ಗೋಜುಬಾವಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅವರು ಸುರಕ್ಷಿತವಾಗಿ ಹೊರ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 8.50ಕ್ಕೆ ಈ ಘಟನೆ ನಡೆದಿದೆ ಎಂದು ಪುಣೆ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ, ನೆಲಕ್ಕೆ ಅಪ್ಪಳಿಸುವ ಸ್ವಲ್ಪ ಮೊದಲು, ವಿಮಾನದ ಒಂದು ಭಾಗವು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಕಡಿಮೆ ಎತ್ತರದಲ್ಲಿ ಹಾರುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಲ್ಯಾಂಡಿಂಗ್ ಸಮಯದಲ್ಲಿ, ವಿಮಾನದ ಒಂದು ಬದಿಯು ನೆಲಕ್ಕೆ ಅಪ್ಪಳಿಸುವ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆ ವಿಮಾನವು ರೆಡ್ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರಿದೆ.
ವಿಮಾನ ಲ್ಯಾಂಡಿಂಗ್ ವೇಳೆ ಟೈರ್ನಲ್ಲಿ ಹೊತ್ತಿಕೊಂಡ ಬೆಂಕಿ: ಎಲ್ಲಾ ಪ್ರಯಾಣಿಕರು ಪಾರು
ಚೆನ್ನೈನಲ್ಲಿ ತಪ್ಪಿದ ದುರಂತ
ಇನ್ನು ತಮಿಳುನಾಡಿನ ಚೆನ್ನೈಯಲ್ಲಿ ಬಹುದೊಡ್ಡ ವಿಮಾನ ದುರಂತ ತಪ್ಪಿದ ಘಟನೆ ಮಂಗಳಾರ ನಡೆದಿತ್ತು. ಸುಮಾರು 280 ಪ್ರಯಾಣಿಕರನ್ನು ಅಬುಧಾಬಿಗೆ ಹೊತ್ತೊಯ್ಯುತ್ತಿದ್ದ ಎತಿಹಾದ್ ಏರ್ವೇಸ್ ವಿಮಾನಕ್ಕೆ ಹೈಡ್ರಾಲಿಕ್ ಸೋರಿಕೆಯಿಂದಾಗಿ ಟೇಕ್ಆಫ್ ಆಗಲು ಸಾಧ್ಯವಾಗಲಿಲ್ಲ. ಏರ್ಬಸ್ A320 (A6-EIT) ನಿರ್ವಹಿಸುತ್ತಿದ್ದ ಎತಿಹಾದ್ನ ಚೆನ್ನೈ-ಅಬುಧಾಬಿ (Chennai-Abu Dhabi) ವಿಮಾನವನ್ನು ತಾಂತ್ರಿಕ ಸಮಸ್ಯೆ ಪತ್ತೆಯಾದ ನಂತರ ಟೇಕ್ ಆಫ್ ಆಗುವ ಮೊದಲು ಹಾರಾಟ ರದ್ದುಗೊಳಿಸಲಾಯಿತು.
ಬಳಿಕ ಪ್ರಯಾಣಿಕರನ್ನು ಕೆಳಗಿಳಿಸಿ ವಿಮಾನವನ್ನು ಮತ್ತೆ ನಿಲ್ದಾಣಕ್ಕೆ ತಂದು ನಿಲ್ಲಿಸಲಾಯಿತು. ಈ ಘಟನೆಯಲ್ಲಿ ವಿಮಾನದ ಮಾರ್ಗ ಬದಲಾವಣೆ ಅಥವಾ ಬೆಂಕಿ ಅವಘಡದಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.