ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಜಯ್‌ ಪದಗ್ರಹಣ ವೇಳೆ 'ವಂದೇ ಮಾತರಂ' ಗೀತೆಗೆ ಆದ್ಯತೆ ವಿವಾದ; ರಾಜ್ಯಪಾಲರನ್ನೇ ದೂಷಿಸಿದ ಟಿವಿಕೆ: ತಮಿಳುನಾಡಿಗೆ ಸೂಕ್ತವಾದುದಲ್ಲ ಎಂದ ನೂತನ ಸರ್ಕಾರ

TVK blamed the Governor: ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸದ್ಯ ವಿವಾದದ ಕೇಂದ್ರಬಿಂದು ಎನಿಸಿಕೊಂಡಿದೆ. ತಮಿಳು ರಾಜ್ಯಗೀತೆ ಮತ್ತು ರಾಷ್ಟ್ರಗೀತೆಗೂ ಮುನ್ನ ʼವಂದೇ ಮಾತರಂʼ ಹಾಡಿರುವ ಬಗ್ಗೆ ಗದ್ದಲ ಎದ್ದಿದ್ದು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರನ್ನೇ ಟಿವಿಕೆ ದೂಷಿಸಿದೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೊದಲಿಗೆ ವಂದೇ ಮಾತರಂ ನುಡಿಸಲಾಗಿತ್ತು.

ಚೆನ್ನೈಯಲ್ಲಿ ನಡೆದ ವಿಜಯ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಚೆನ್ನೈ, ಮೇ 11: ತಮಿಳುನಾಡಿನಲ್ಲಿ ದಳಪತಿ ವಿಜಯ್ (Vijay) ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ತಮಿಳು ರಾಜ್ಯಗೀತೆ ಮತ್ತು ರಾಷ್ಟ್ರಗೀತೆಗೂ ಮುನ್ನ ʼವಂದೇ ಮಾತರಂʼ (Vande Mataram) ನುಡಿಸಿರುವ ಬಗ್ಗೆ ಗದ್ದಲ ಎದ್ದಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರನ್ನೇ ಟಿವಿಕೆ ದೂಷಿಸಿದೆ. ರಾಜ್ಯಪಾಲರ ಕಚೇರಿಯ ನಿರ್ದೇಶನದಂತೆ ಈ ಅನುಕ್ರಮವನ್ನು ಅನುಸರಿಸಲಾಗಿದೆ ಎಂದು ತಮಿಳು ವೆಟ್ರಿ ಕಳಗಂ (TVK) ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ತಮಿಳು ಗೀತೆಗೆ ಮೊದಲ ಆದ್ಯತೆ ನೀಡುವ ಮತ್ತು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸುವ ಹಳೆಯ ಸಂಪ್ರದಾಯವನ್ನೇ ಮುಂದುವರಿಸುವುದಾಗಿ ಟಿವಿಕೆ ಸಚಿವ ಆಧವ್ ಅರ್ಜುನ ಹೇಳಿದರು.

ತಮಿಳುನಾಡಿನ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ನೇತೃತ್ವದಲ್ಲಿ ನಡೆದ ಮುಖ್ಯಮಂತ್ರಿ ಮತ್ತು ಇತರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ಮೊದಲು ʼವಂದೇ ಮಾತರಂʼ, ನಂತರ ರಾಷ್ಟ್ರಗೀತೆ ಮತ್ತು ಮೂರನೆಯದಾಗಿ ತಮಿಳು ಗೀತೆಯನ್ನು ನುಡಿಸಲಾಯಿತು. ಈ ಹೊಸ ಪದ್ಧತಿ ತಮಿಳುನಾಡಿಗೆ ಸೂಕ್ತವಾದುದಲ್ಲ ಎಂದು ಅರ್ಜುನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಟಿವಿಕೆಯ ಎರಡು ಸಮ್ಮಿಶ್ರ ಮಿತ್ರಪಕ್ಷಗಳಾದ ಸಿಪಿಐ ಮತ್ತು ವಿಸಿಕೆ ಸೇರಿದಂತೆ ಇತರರು ಈ ಹೊಸ ಕ್ರಮದ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದರು. ಹೀಗಾಗಿ ಮೈತ್ರಿಕೂಟದ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಮತ್ತು ತನ್ನ ನಿಲುವನ್ನು ಸ್ಪಷ್ಟಪಡಿಸಲು ಟಿವಿಕೆ ಈ ರೀತಿ ಸ್ಪಷ್ಟೀಕರಣವನ್ನು ನೀಡಿದೆ.

ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ ವಿಜಯ್‌?

ಹೊಸ ಸರ್ಕಾರವು ಕೊನೆಯದಾಗಿ ತಮಿಳು ಗೀತೆಯನ್ನು ನುಡಿಸುವುದನ್ನು ಬೆಂಬಲಿಸುವುದಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಹೊಸ ಸುತ್ತೋಲೆಯ ಪ್ರಕಾರ ಕಾರ್ಯನಿರ್ವಹಿಸುವ ಜವಾಬ್ದಾರಿ ತನ್ನದು ಎಂದು ರಾಜ್ಯಪಾಲರು ತಿಳಿಸಿದರು. ಅನಿವಾರ್ಯ ಪರಿಸ್ಥಿತಿಗಳಿಂದಾಗಿ ರಾಜ್ಯ ಗೀತೆ ತಮಿಳು ಥಾಯ್ ವಾಜ್ತುವನ್ನು ಮೂರನೇ ಹಾಡಾಗಿ ನುಡಿಸಲಾಯಿತು. ಇನ್ನು ಮುಂದೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಈ ಹೊಸ ಪದ್ಧತಿಯನ್ನು ಅನುಸರಿಸಲಾಗುವುದಿಲ್ಲ ಎಂದು ಟಿವಿಕೆ ಸ್ಪಷ್ಟಪಡಿಸಿದೆ.

ರಾಜ್ಯಗೀತೆ ತಮಿಳು ತಾಯಿ ವಾಜ್ತುಗಿಂತ ʼವಂದೇ ಮಾತರಂʼ ಮತ್ತುʼ ಜನ ಗಣ ಮನʼಕ್ಕೆ ನೀಡಲಾದ ಪ್ರಾಮುಖ್ಯತೆಯು ರಾಜ್ಯದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಟಿವಿಕೆ ಮಿತ್ರಪಕ್ಷಗಳಾದ ಸಿಪಿಐ ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಸಹ ಈ ಕ್ರಮವನ್ನು ಸಾರ್ವಜನಿಕವಾಗಿ ಪ್ರಶ್ನಿಸಿವೆ.

ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಈ ನಿರ್ಧಾರವನ್ನು ಖಂಡಿಸಿ ರಾಜ್ಯ ಸರ್ಕಾರದಿಂದ ವಿವರಣೆಯನ್ನು ಕೋರಿದರು. ಸಾಂಪ್ರದಾಯಿಕವಾಗಿ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ತಮಿಳು ಗೀತೆಯನ್ನು ಹಾಡಲಾಗುತ್ತದೆ. ಅದಕ್ಕೆ ಸೂಕ್ತ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು. ವಿಸಿಕೆ ಮುಖ್ಯಸ್ಥ ಥೋಲ್ ತಿರುಮಾವಲವನ್ ಕೂಡ ಈ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ.