ಅಗರ್ತಲಾ, ಮೇ 11: ತ್ರಿಪುರಾದ ಸೆಪಹಿಜಲಾ ಜಿಲ್ಲೆಯ ಭಾರತ-ಬಾಂಗ್ಲಾದೇಶ (India-Bangladesh) ಅಂತಾರಾಷ್ಟ್ರೀಯ ಗಡಿಯ ಝೀರೋ ಪಾಯಿಂಟ್ ಬಳಿ ರಾತ್ರಿಯಿಡೀ ನಡೆದ ಗುಂಡಿನ ದಾಳಿಯಲ್ಲಿ ಸತ್ತ ಇಬ್ಬರು ಶಂಕಿತ ಬಾಂಗ್ಲಾದೇಶಿ ಕಳ್ಳಸಾಗಣೆದಾರರ ಮೃತದೇಹಗಳನ್ನು ಗಡಿ ಭದ್ರತಾ ಪಡೆ (BSF), ಶನಿವಾರ (ಮೇ 9) ಬಾಂಗ್ಲಾದೇಶ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಗಡಿಯಲ್ಲಿ ಕಾವಲು ಕಾಯುತ್ತಿದ್ದ ಬಿಎಸ್ಎಫ್ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಕಳ್ಳಸಾಗಣೆದಾರರು ಗುಂಡೇಟಿನಿಂದ ಸತ್ತ ನಂತರ ಈ ಘಟನೆ ಗಡಿ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು. ಹತರಾದವರನ್ನು ನಬೀರ್ ಹುಸೇನ್ (40) ಮತ್ತು ಎಂ.ಡಿ. ಮುರ್ಸಲಿನ್ (22) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ರಾತ್ರಿ ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ಪಡೆಗಳು, ಶಂಕಿತ ಬಾಂಗ್ಲಾದೇಶಿ ಕಳ್ಳಸಾಗಣೆದಾರರ ಗುಂಪೊಂದು ಭಾರತದ ಕಡೆಯಿಂದ ಬಾಂಗ್ಲಾದೇಶಕ್ಕೆ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದವು. ಆ ಗುಂಪನ್ನು ತಡೆದ ಬಿಎಸ್ಎಫ್ ಯೋಧರು ಗಡಿಯತ್ತ ಮುಂದೆ ಸಾಗದಂತೆ ಪದೇ ಪದೇ ಎಚ್ಚರಿಕೆ ನೀಡಿದರು. ಆದರೆ ಆ ಶಂಕಿತ ಕಳ್ಳಸಾಗಣೆದಾರರು ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ, ಬಿಎಸ್ಎಫ್ ಸಿಬ್ಬಂದಿಯ ಮೇಲೆ ಕಲ್ಲು ಮತ್ತು ಇಟ್ಟಿಗೆಗಳಿಂದ ದಾಳಿ ಮಾಡಿದರು ಎನ್ನಲಾಗಿದೆ.
ಗುಂಡೇಟಿಗೆ ಬಲಿಯಾದ ಬಾಂಗ್ಲಾದೇಶಿಗರು:
ಮೂಲಗಳ ಪ್ರಕಾರ, ಬಿಎಸ್ಎಫ್ ಪಡೆಗಳು ಆರಂಭದಲ್ಲಿ ಸಂಯಮವನ್ನು ಪ್ರದರ್ಶಿಸಿದವು. ಗುಂಪು ಚದುರಿಹೋಗುವಂತೆ ಪದೇ ಪದೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಪರಿಸ್ಥಿತಿಯು ಹಿಂಸಾತ್ಮಕವಾಗಿ ಬದಲಾದಾಗ ಮತ್ತು ಹತೋಟಿ ಮೀರಿ ಹೋದಾಗ, ಯೋಧರು ಆತ್ಮರಕ್ಷಣೆಗಾಗಿ ಪಂಪ್ ಆ್ಯಕ್ಷನ್ ಗನ್ಗಳಿಂದ (PAG) ಕೆಲವು ಸುತ್ತು ಗುಂಡು ಹಾರಿಸಿದರು. ಇದರಿಂದಾಗಿ ಇಬ್ಬರು ಗಾಯಗೊಂಡರು.
ಬಿಜೆಪಿ ಭರ್ಜರಿ ಗೆಲುವು: ಬಾಂಗ್ಲಾದೇಶ, ಬಂಗಾಳ ಗಡಿಯಲ್ಲಿ ಢಾಕಾ ಎಚ್ಚರಿಕೆ
ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಗಳ ನಂತರ, ಗಡಿಯ ಎರಡೂ ಬದಿಗಳ ಅಧಿಕಾರಿಗಳ ಸಮ್ಮುಖದಲ್ಲಿ ಮೃತದೇಹಗಳನ್ನು ಔಪಚಾರಿಕವಾಗಿ ಬಾಂಗ್ಲಾದೇಶ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಇತ್ತೀಚಿನ ಘಟನೆಯು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಿರಂತರ ಭದ್ರತಾ ಸವಾಲುಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ತ್ರಿಪುರಾ ನೆರೆಯ ದೇಶದೊಂದಿಗೆ ಹಂಚಿಕೊಂಡಿರುವ 856 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಗಡಿಯೂ ಸೇರಿದಂತೆ 4,000 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ಕಣ್ಗಾವಲು ಮತ್ತು ವ್ಯಾಪಕವಾದ ಬೇಲಿಯನ್ನು ಬಲಪಡಿಸಲು ನಿರಂತರ ಪ್ರಯತ್ನಗಳ ಹೊರತಾಗಿಯೂ, ಒಳನುಸುಳುವಿಕೆ, ಮಾನವ ಕಳ್ಳಸಾಗಣೆ ಮತ್ತು ಮಾದಕವಸ್ತು ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಮುಖ ಸವಾಲಾಗಿಯೇ ಉಳಿದಿದೆ.
ಪ್ರತಿ ವರ್ಷ, ಅಂತಾರಾಷ್ಟ್ರೀಯ ಗಡಿಯ ವಿವಿಧ ವಲಯಗಳಲ್ಲಿ ಗಡಿ ಭದ್ರತಾ ಪಡೆಗಳು ನಡೆಸುವ ಗುಂಡಿನ ದಾಳಿಯಿಂದ ಹಲವಾರು ಸಾವುಗಳು ಸಂಭವಿಸುತ್ತಿರುವ ಬಗ್ಗೆ ವರದಿಯಾಗುತ್ತಿವೆ.