ನವದೆಹಲಿ, ಫೆ.1: 2026-27ರ ಕೇಂದ್ರ ಬಜೆಟ್ (Union Budget 2026) ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Niramala Sitharaman) ಮಂಡಿಸಿದ್ದು, ರಾಜ್ಯಗಳಿಗೆ 41% ತೆರಿಗೆ ಹಣದ ಹಂಚಿಕೆ ಮಾಡಿದ್ದಾರೆ. ಇದು ಹಣಕಾಸಿನ ಹಂಚಿಕೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ರಾಜ್ಯಗಳು ಹೆಚ್ಚಿನ ಪಾಲಿಗಾಗಿ ಬೇಡಿಕೆ ಇಟ್ಟಿದ್ದವು. ಈ ಬೇಡಿಕೆಯನ್ನು ಕೇಂದ್ರ ಪೂರೈಸಿಲ್ಲ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬಜೆಟ್ 2026 ಮಂಡಿಸುವ ವೇಳೆ, 16ನೇ ಹಣಕಾಸು ಆಯೋಗ ರಾಜ್ಯಗಳಿಗೆ ಕೇಂದ್ರ ತೆರಿಗೆ ಆದಾಯದಲ್ಲಿ 41% ಹಂಚಿಕೆಯನ್ನು ಶಿಫಾರಸು ಮಾಡಿದೆ ಎಂದು ಘೋಷಿಸಿದರು. ಇದು ಇದುವರೆಗಿನ ಅತ್ಯಧಿಕ ತೆರಿಗೆ ವಹಿವಾಟು ಹಂಚಿಕೆ. 2026– 27 ಹಣಕಾಸು ವರ್ಷದ (FY27) ಅವಧಿಗೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ರೂ. 1.40 ಲಕ್ಷ ಕೋಟಿ ಹಣವನ್ನು ಹಣಕಾಸು ಆಯೋಗದ ಅನುದಾನವಾಗಿ ನೀಡಿದೆ ಎಂದು ಸಚಿವೆ ತಿಳಿಸಿದರು.
ಈ ನಿರ್ಧಾರವು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ರಾಜ್ಯಗಳ ಅಭಿವೃದ್ಧಿ ಅಗತ್ಯಗಳಿಗೆ ಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. 2025–26 ಅವಧಿಗೆ ರಾಜ್ಯಗಳ ತೆರಿಗೆ ಹಂಚಿಕೆಯನ್ನು 41% ಎಂದು ನಿಗದಿಪಡಿಸಲಾಗಿತ್ತು. ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ, ಹಿಂದಿನ 42% ಹಂಚಿಕೆಯಿಂದ ಸ್ವಲ್ಪ ಕಡಿತ ಮಾಡಲಾಗಿತ್ತು.
16ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಅರವಿಂದ್ ಪನಗಾರಿಯಾ ಅವರ ನೇತೃತ್ವದಲ್ಲಿ ಆಯೋಗವು ಎಲ್ಲಾ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚೆ ನಡೆಸಿ, ಕಳೆದ ವರ್ಷದ ನವೆಂಬರ್ನಲ್ಲಿ ತನ್ನ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತ್ತು. ಹಲವು ರಾಜ್ಯಗಳು ಕೇಂದ್ರ ತೆರಿಗೆಯಲ್ಲಿ ಹೆಚ್ಚಿನ ಪಾಲು ನೀಡುವಂತೆ ಒತ್ತಾಯಿಸಿದ್ದವು.
ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆಗಳಲ್ಲಿ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಕಸ್ಟಮ್ಸ್, ಎಕ್ಸೈಸ್ ಮತ್ತು ಜಿಎಸ್ಟಿ ಸೇರಿವೆ. ಆದರೆ ಸೆಸ್ಸ್ ಮತ್ತು ಸರ್ಚಾರ್ಜ್ಗಳು ಈ ನಿಧಿಗೆ ಸೇರದೆ, ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಬಳಿಯೇ ಉಳಿಯುತ್ತವೆ. ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 22 ರಾಜ್ಯಗಳು ತೆರಿಗೆ ಪಾಲನ್ನು 50%ಕ್ಕೆ ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದವು. ಆದರೆ ಕೇಂದ್ರ ಸರ್ಕಾರವು ತೆರಿಗೆ ವಹಿವಾಟಿನಲ್ಲಿ ಎಚ್ಚರಿಕೆಯಿಂದ ನಡೆದುಕೊಂಡಿದೆ.
ಶೀರ್ಷಿಕೆಯ ಮಟ್ಟದಲ್ಲಿ ರಾಜ್ಯಗಳ ಪಾಲು ಉನ್ನತವಾಗಿದ್ದರೂ, ಸೆಸ್ಸ್ ಮತ್ತು ಸರ್ಚಾರ್ಜ್ಗಳ ಮೂಲಕ ಹೆಚ್ಚುತ್ತಿರುವ ಕೇಂದ್ರ ಆದಾಯದ ಕಾರಣ, ವಾಸ್ತವಿಕ ತೆರಿಗೆ ಹಂಚಿಕೆ ಪ್ರಮಾಣ ಕ್ರಮೇಣ ಇಳಿಯುತ್ತಿದೆ ಎಂಬ ಅಂಶವೂ ಗಮನ ಸೆಳೆಯುತ್ತಿದೆ.