ನವದೆಹಲಿ, ಫೆ. 18: ಚೀನಾದ ಚೀನಾದ ಯುನಿಟ್ರೀ ರೋಬೋಡಾಗ್ ಅನ್ನು ತಾವೇ ತಯಾರಿಸಿದ್ದಾಗಿ ಹೇಳಿ ವಿವಾದ ಹುಟ್ಟುಹಾಕಿದ ಗ್ರೇಟರ್ ನೋಯ್ಡಾದಲ್ಲಿರುವ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ (Galgotias University) ದೆಹಲಿಯ ಭಾರತ ಮಂಟಪಂನಲ್ಲಿ ನಡೆಯುತ್ತಿರುವ ʼಎಐ ಇಂಪ್ಯಾಕ್ಟ್ ಎಕ್ಸ್ಪೋ-26' ಪ್ರದರ್ಶನ ಮೇಳದಿಂದ ಕಾಲ್ಕಿತ್ತಿದೆ. ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತಮ್ಮ ಸ್ಟಾಲ್ ಖಾಲಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾದ ರೋಬೋಡಾಗ್ ಬಗ್ಗೆ ಶುರುವಾದ ಗದ್ದಲದ ಮಧ್ಯೆ ಈ ಘಟನೆ ಸಂಭವಿಸಿದೆ. ಎಕ್ಸ್ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತಮ್ಮ ಸ್ಟಾಲ್ನಿಂದ ಹೊರ ನಡೆಯುತ್ತಿರುವುದು ಕಂಡು ಬಂದಿದೆ. ಎಲ್ಲ ಅನುಮಾನಗಳನ್ನು ಸ್ಪಷ್ಟಪಡಿಸಲು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
ಚೀನಾದ ಯುನಿಟ್ರೀ ರೋಬೋಡಾಗ್ ಅನ್ನು ತಾವೇ ನಿರ್ಮಿಸಿರುವುದು ಎಂದು ಹೇಳುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಎಕ್ಸ್ಪೋ ಸ್ಟಾಲ್ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಪ್ರತಿಕ್ರಿಯಿಸಿ ತಮ್ಮ ಸಂಸ್ಥೆಗೆ ಅಂತಹ ಯಾವುದೇ ನಿರ್ದೇಶನ ಬಂದಿಲ್ಲ ಎಂದು ತಿಳಿಸಿದರು.
ಇಲ್ಲಿದೆ ವಿಡಿಯೊ:
ʼʼನಮಗೆ ಅಂತಹ ಯಾವುದೇ ನಿರ್ದೇಶನ ಬಂದಿಲ್ಲ. ಗಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯವು ಬಹಳ ಜವಾಬ್ದಾರಿಯುತ ಸಂಸ್ಥೆʼʼ ಎಂದು ಸಿಂಗ್ ಹೇಳಿದರು. ವಿಶ್ವವಿದ್ಯಾನಿಲಯದ ಸ್ಟಾಲ್ಗೆ ವಿದ್ಯುತ್ ಕಡಿತಗೊಳಿಸಲಾಗಿದ್ದ ವಿಡಿಯೊಗಳು ಹರಿದಾಡಿದ್ದವು. ವಿವಾದಕ್ಕೆ ಕಾರಣವಾದ ವೈರಲ್ ವಿಡಿಯೊದಲ್ಲಿ ಪ್ರೊಫೆಸರ್ ನೇಹಾ ಸಿಂಗ್, ರೋಬೋಡಾಗ್ ಬಗ್ಗೆ ಉಲ್ಲೇಖಿಸುತ್ತ, ʼʼನೀವು ಓರಿಯನ್ ಅನ್ನು ಭೇಟಿಯಾಗಬೇಕು. ಇದನ್ನು ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆʼʼ ಎಂದು ತಿಳಿಸಿದ್ದಾರೆ.
AI ಆ್ಯಕ್ಷನ್ ಶೃಂಗಸಭೆಗೆ ಭಾಗವಹಿಸಲು ಫ್ರಾನ್ಸ್ಗೆ ತೆರಳಿದ ಪ್ರಧಾನಿ; ಮಹತ್ವದ ಚರ್ಚೆ ಸಾಧ್ಯತೆ
ʼʼಈ ಯಂತ್ರವು ಸಿಸಿಟಿವಿಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆʼʼ ಎಂದು ಅವರು ಹೇಳಿದರು. ಅಲ್ಲದೆ ಇದು ಕ್ಯಾಂಪಸ್ನಲ್ಲಿ ಮುಕ್ತವಾಗಿ ಚಲಿಸುತ್ತದೆ ಎಂದು ವಿವರಿಸಿದರು. ಆದರೆ ಅಲ್ಲಿದ್ದ ವೀಕ್ಷಕರು ಅನುಮಾನಗೊಂಡು ಆನ್ಲೈನ್ನಲ್ಲಿ ಯಂತ್ರವನ್ನು ಹುಡುಕಿದರು. ರೋಬೋಡಾಗ್ ಅನ್ನು ವಾಸ್ತವವಾಗಿ ಚೀನಾದ ರೋಬೋಟಿಕ್ಸ್ ಕಂಪನಿ ಯುನಿಟ್ರೀಯಿಂದ ಪಡೆಯಲಾಗಿದೆ ಎನ್ನುವುದು ತಿಳಿದು ಬಂದಿದೆ.
ಈ ವಿಚಾರ ಗದ್ದಲಕ್ಕೆ ಕಾರಣವಾಗುತ್ತಿದ್ದಂತೆ, ಗಾಲ್ಗೋಟಿಯಸ್ ವಿವಿಯು ರೋಬೋಟ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಎಂದಿಗೂ ಹೇಳಿಕೊಂಡಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿದೆ. ಗ್ಯಾಲ್ಗೋಟಿಯಾಸ್ ವಿವಿಯು ಈ ರೋಬೋಡಾಗ್ ಅನ್ನು ನಿರ್ಮಿಸಿಲ್ಲ, ಅಥವಾ ನಾವು ತಯಾರು ಮಾಡಿದ್ದಾಗಿ ಹೇಳಿಕೊಂಡಿಲ್ಲ ಎಂದು ವಿಶ್ವವಿದ್ಯಾನಿಲಯವು ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ಎಐ ಶೃಂಗಸಭೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಐ ಶೃಂಗಸಭೆ ಮಾಡುವ ಮೂಲಕ ಭಾರತ ಜಗತ್ತಿನ ಗಮನಸೆಳೆದಿದೆ. ದೆಹಲಿಯಲ್ಲಿ ಆಯೋಜಿಸಿರುವ ಉನ್ನತ ಮಟ್ಟದ ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಜಾಗತಿಕ ಮಹತ್ವಾಕಾಂಕ್ಷೆಗಳ ಜತೆಗೆ ಪುನರುಜ್ಜೀವನವನ್ನು ಪ್ರದರ್ಶಿಸುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಫ್ರಾನ್ಸ್ ಮತ್ತು ಬ್ರೆಜಿಲ್ ಸೇರಿದಂತೆ ಅನೇಕ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಟೆಕ್ ಜಗತ್ತಿನ ಕೆಲವು ಪ್ರಭಾವಿ ನಾಯಕರು ಭಾಗವಹಿಸುತ್ತಿದ್ದಾರೆ. ಈ ಶೃಂಗಸಭೆಯು ಎಐ ಜಗತ್ತಿನಲ್ಲಿ ಭಾರತಕ್ಕೆ ಬಲವಾದ ನೆಲೆಯನ್ನು ಪಡೆಯಲು ಒಂದು ಪ್ರಮುಖ ವೇದಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.