ಅಮರಾವತಿ, ಜೂ. 8: ಆಂಧ್ರ ಪ್ರದೇಶದ (Andra Pradesh) ವಿಶಾಖಪಟ್ಟಣಂನಲ್ಲಿರುವ (Visakhapatnam) ಪ್ರಸಿದ್ಧ ಉಕ್ಕಿನ ಕಾರ್ಖಾನೆಯಲ್ಲಿ ಸೋಮವಾರ (ಜೂನ್ 8) ಅತ್ಯಂತ ಭೀಕರ ದುರಂತವೊಂದು ಸಂಭವಿಸಿದೆ (Steel Explodes in Vizag). ಕರಗಿದ ಉಕ್ಕನ್ನು ಸಾಗಿಸುತ್ತಿದ್ದ ದೊಡ್ಡ ಪಾತ್ರೆಯು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಹಲವು ಉದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಉಕ್ಕಿನ ಕಾರ್ಖಾನೆಯ ಎಸ್ಎಂಎಸ್-2 ಮತ್ತು ಎಸ್ಟಿಸಿ-3 ಹೀಟ್ ಸೌಲಭ್ಯದ ಘಟಕದಲ್ಲಿ ಈ ಅಪಘಾತ ನಡೆದಿದೆ. ಅತ್ಯಂತ ಹೆಚ್ಚಿನ ತಾಪಮಾನದಲ್ಲಿದ್ದ ದ್ರವರೂಪದ ಉಕ್ಕನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದ್ದು, ಭಾರಿ ಪ್ರಮಾಣದ ಕರಗಿದ ಉಕ್ಕು ಸುತ್ತಲೂ ಸೋರಿಕೆಯಾಗಿದೆ. ಹಠಾತ್ ಆದ ಈ ಸ್ಫೋಟದಿಂದಾಗಿ ಇಡೀ ಕಾರ್ಖಾನೆಯ ಆವರಣದಲ್ಲಿ ತಲ್ಲಣ ಮತ್ತು ಭೀತಿ ಸೃಷ್ಟಿಯಾಯಿತು. ಅಲ್ಲಿದ್ದ ಕಾರ್ಮಿಕರು ಹಾಗೂ ಸಿಬ್ಬಂದಿ ತಮ್ಮ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದರು. ವಿಷಯ ತಿಳಿಯುತ್ತಿದ್ದಂತೆ ಸ್ಟೀಲ್ ಪ್ಲಾಂಟ್ನ ಭದ್ರತಾ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣವೇ ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದರು.
ವಿಶಾಖಪಟ್ಟಣಂನಲ್ಲಿರುವ ಸ್ಫೋಟ:
ಮೃತಪಟ್ಟ ಎಂಟು ದುರ್ದೈವಿಗಳಲ್ಲಿ ಐವರು ಕಾಯಂ ಉದ್ಯೋಗಿಗಳು ಮತ್ತು ಮೂವರು ಗುತ್ತಿಗೆ ಕಾರ್ಮಿಕರಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮೃತಪಟ್ಟ ಕಾಯಂ ಉದ್ಯೋಗಿಗಳನ್ನು ತಂತ್ರಜ್ಞರಾದ ಗೊಂಥಿನ ಭಾನು ಕುಮಾರ್, ಜಿವಿ ಅಪ್ಪಾರಾವ್, ಜನರಲ್ ಫೋರ್ಮನ್ ಎಂ ಕೃಷ್ಣ ನಾಗು ಕೆ ಪ್ರಭಾಕರ್ ಮತ್ತು ಮಷೀನ್-2ರ ಉಸ್ತುವಾರಿ ಮ್ಯಾನೇಜರ್ ಆದ ಗೋಲ್ಡ್ ಕುಮಾರ್ ಎಂದು ಗುರುತಿಸಲಾಗಿದೆ. ಹಾಗೆಯೇ ಮೃತಪಟ್ಟ ಗುತ್ತಿಗೆ ಕಾರ್ಮಿಕರನ್ನು ರಮಣ, ತ್ರಿನಾಥ್ ಮತ್ತು ಎನ್. ಅಪ್ಪಲ ರಾಜು ಎಂದು ಗುರುತಿಸಲಾಗಿದೆ.
ಆಂಬ್ಯುಲೆನ್ಸ್ ಕೊರತೆ; ಸುಡು ಬಿಸಿಲಿನಲ್ಲೇ ಬಾಲಕನನ್ನು ಆಸ್ಪತ್ರೆಗೆ ಸ್ಟ್ರೆಚರ್ನಲ್ಲಿ ಸಾಗಿಸಿದ ಕುಟುಂಬಸ್ಥರು
ಈ ಭೀಕರ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ಕಚೇರಿ ಹಂಚಿಕೊಂಡಿರುವ ಸಂದೇಶದಲ್ಲಿ, "ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ನಲ್ಲಿ ನಡೆದ ಅಪಘಾತದಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸ್ಥಳೀಯ ಅಧಿಕಾರಿಗಳು ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ನೆರವು ನೀಡುತ್ತಿದ್ದಾರೆ" ಎಂದು ಮೋದಿ ತಿಳಿಸಿದ್ದಾರೆ. ಇದೇ ವೇಳೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತ ಕಾರ್ಮಿಕರ ವಾರಸುದಾರರಿಗೆ ತಲಾ 2 ಲಕ್ಷ ರುಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರುಪಾಯಿ ಪರಿಹಾರವನ್ನು ಪ್ರಕಟಿಸಲಾಗಿದೆ.
ಘಟನಾ ಸ್ಥಳಕ್ಕೆ ಆಂಧ್ರ ಪ್ರದೇಶದ ಗೃಹ ಸಚಿವೆ ವಂಗಲಪುಡಿ ಅನಿತಾ ಮತ್ತು ಟಿಡಿಪಿ ಸಂಸದ ಎಂ. ಶ್ರೀಭರತ್ ತುರ್ತಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ತೊಂದರೆಗೊಳಗಾದ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ವೈದ್ಯಕೀಯ ನೆರವು ಹಾಗೂ ಅಗತ್ಯವಿರುವ ಎಲ್ಲ ಸಹಾಯ ಕ್ರಮಗಳನ್ನು ಮುಂದುವರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.