ನವದೆಹಲಿ, ಜೂ.14: ಇತ್ತೀಚೆಗೆ ವಿಚ್ಛೇದನಗಳು ತುಂಬಾ ಸಾಮಾನ್ಯ ಎಂಬಂತಾಗಿದೆ. ಒಮ್ಮೆ ಡಿವೋರ್ಸ್ (divorce) ಸಿಕ್ಕರೆ ಸಾಕು ಗಂಡ-ಹೆಂಡತಿ ಪರಸ್ಪರರ ಮುಖವನ್ನೇ ನೋಡದೆ ಹೊರಟುಬಿಡುತ್ತಾರೆ. ಆದರೆ, ಇಲ್ಲೊಂದೆಡೆ ದಂಪತಿಗಳು ತಮ್ಮ ಐದು ವರ್ಷದ ಕಾನೂನು ಹೋರಾಟವನ್ನು ಕೊನೆಗೊಳಿಸಿದರು. ಐದು ವರ್ಷಗಳ ಕಾನೂನು ಹೋರಾಟ, ನೋವು ಮತ್ತು ಕಹಿ ಭಾವನೆಗಳು ಕೆಲವೇ ಕ್ಷಣಗಳಲ್ಲಿ ಕರಗಿಹೋದವು. ದೆಹಲಿಯ (Delhi) ನ್ಯಾಯಾಲಯದ ಒಳಗೆ ಪತ್ನಿಯೊಬ್ಬರು ತಮ್ಮ ವಿಚ್ಛೇದನ ಅರ್ಜಿಯ ದಾಖಲೆಗಳನ್ನು ಹರಿದು ಹಾಕಿ, ತಮ್ಮ ಪತಿಯನ್ನು ಅಪ್ಪಿಕೊಂಡರು.
ಸುಮಾರು ಐದು ವರ್ಷಗಳಿಂದ, ಶಿಖಾ ಮತ್ತು ಸೌರಭ್ ತಮ್ಮ ದಾಂಪತ್ಯ ಜೀವನ್ನು ಕೊನೆಗೊಳಿಸುವತ್ತ ಕಾನೂನು ಹೋರಾಟ ನಡೆಸುತ್ತಿದ್ದರು. 2020 ರಲ್ಲಿ ವಿವಾಹ ಸಂಭ್ರಮದೊಂದಿಗೆ ಪ್ರಾರಂಭವಾದ ಅವರ ದಾಂಪತ್ಯವು ಶೀಘ್ರದಲ್ಲೇ ವಿವಾದಗಳು, ಆರೋಪಗಳು ಮತ್ತು ದೀರ್ಘಕಾಲದ ನ್ಯಾಯಾಲಯದ ಹೋರಾಟಕ್ಕೆ ಕಾರಣವಾಯಿತು. ದಂಪತಿಗಳು ತಮ್ಮ ವಿವಾಹಕ್ಕೆ ಕಾನೂನುಬದ್ಧ ಅಂತ್ಯವನ್ನು ಕೋರಿ ನ್ಯಾಯಾಲಯದ ಮುಂದೆ ನಿಂತಿದ್ದರು.
ಈ ಪ್ರಕರಣವು ಅನೇಕ ವಿಚಾರಣೆಗಳು, ಕಾನೂನು ವಾದಗಳು ಹಾಗೂ ಹೆಚ್ಚುತ್ತಿರುವ ಭಾವನಾತ್ಮಕ ಮತ್ತು ಆರ್ಥಿಕ ಒತ್ತಡಗಳ ನಡುವೆ ವರ್ಷಗಳ ಕಾಲ ಮುಂದುವರಿದಿತ್ತು. ಈ ದೀರ್ಘಕಾಲದ ಕಾನೂನು ಹೋರಾಟವು ಶಿಖಾ ಅವರ ಕುಟುಂಬದ ಮೇಲೆ ಭಾರಿ ಪರಿಣಾಮ ಬೀರಿತ್ತು. ತಮ್ಮ ಮಗಳ ಭವಿಷ್ಯದ ಬಗ್ಗೆ ಚಿಂತಿಸುತ್ತಾ, ಕಾನೂನು ಹೋರಾಟಕ್ಕೆ ಶಿಖಾ ಅವರ ತಂದೆ ತಮ್ಮ ಉಳಿತಾಯದ ಬಹುಪಾಲನ್ನು ಖರ್ಚು ಮಾಡಿದ್ದರು ಎಂದು ತಿಳಿದುಬಂದಿದೆ.
ವಿಡಿಯೊ ಇಲ್ಲಿದೆ:
ಶಿಖಾಳ ತಂದೆಗೆ ಹೃದಯಾಘಾತವಾದಾಗ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಯಿತು. ಆರ್ಥಿಕ ಸಂಕಷ್ಟವನ್ನು ಎದುರಿಸಿದ ಕುಟುಂಬವು ಆರಂಭದಲ್ಲಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿತು. ಈ ಹಂತದಲ್ಲಿ, ವಿವಾದ ನಡೆಯುತ್ತಿದ್ದರೂ, ಸೌರಭ್ ಸಹಾಯಹಸ್ತ ಚಾಚಿದರು.
ತನ್ನ ಮಾವನ ಸ್ಥಿತಿಯ ಬಗ್ಗೆ ತಿಳಿದ ನಂತರ, ಸೌರಭ್ ಅವರನ್ನು ಗುರುಗ್ರಾಮದ ಉತ್ತಮ ಸುಸಜ್ಜಿತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ಅವರು ಸಕಾಲಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಕಹಿ ಕಾನೂನು ಸಂಘರ್ಷದ ಮಧ್ಯೆ ಮಾಡಿದ ಈ ನಡೆ ಅಂತಿಮವಾಗಿ ಎಲ್ಲವನ್ನೂ ಬದಲಾಯಿಸಿತು.
ಮರುದಿನವೇ ದಂಪತಿಗಳು ತಮ್ಮ ವಿಚ್ಛೇದನ ಪ್ರಕರಣದ ಮತ್ತೊಂದು ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾದರು. ವಕೀಲರು ತಮ್ಮ ವಾದಗಳನ್ನು ಮಂಡಿಸುತ್ತಲೇ ಇದ್ದರು. ನ್ಯಾಯಾಧೀಶರು ಸೌರಭ್ ಅವರನ್ನು ಇನ್ನೂ ವಿಚ್ಛೇದನ ಬಯಸುತ್ತೀರಾ ಎಂದು ಕೇಳಿದಾಗ, ಅವರು ಶಿಖಾಳತ್ತ ನೋಡಿ ಮಂದವಾದ ನಗು ಬೀರಿದರು.
ಭಾವೋದ್ವೇಗಕ್ಕೊಳಗಾದ ಪತ್ನಿಯು ನ್ಯಾಯಾಲಯದಲ್ಲೇ ವಿಚ್ಛೇದನ ಪತ್ರಗಳನ್ನು ಹರಿದು ತನ್ನ ಪತಿಯ ಕಡೆಗೆ ಧಾವಿಸಿ ಅಪ್ಪಿದಳು. ಇಬ್ಬರೂ ಕೂಡ ಕಣ್ಣೀರಿಡುತ್ತಾ ಪರಸ್ಪರ ಅಪ್ಪಿದರು. ನ್ಯಾಯಾಲಯದ ಕೋಣೆಯಲ್ಲಿ ಮೌನ ಆವರಿಸಿತು. ದಂಪತಿಗಳು ಬೇರ್ಪಡುವ ಕಾನೂನು ಹೋರಾಟವು ಅನಿರೀಕ್ಷಿತ ಅಂತ್ಯವನ್ನು ತಂದುಕೊಟ್ಟಿತು. ಬೇರ್ಪಡುವ ದಿನವನ್ನು ಪುನರ್ಮಿಲನದ ದಿನವಾಗಿ ಪರಿವರ್ತಿಸಿತು.