Haridwar Horror: ಅಳುತ್ತಾರೆಂದು 6 ತಿಂಗಳ ಅವಳಿ ಹೆಣ್ಣುಮಕ್ಕಳನ್ನು ಕೊಂದೇ ಬಿಟ್ಟ ಪಾಪಿ ತಾಯಿ
Haridwar Horror: ನಿರಂತರವಾಗಿ ಅಳುತ್ತಿದ್ದಾರೆಂದು 6 ತಿಂಗಳ ತನ್ನ ಅವಳಿ ಮಕ್ಕಳನ್ನು ತಾಯಿಯೊಬ್ಬಳು ಸಾಯಿಸಿರುವ ಘಟನೆ ಭಾನುವಾರ (ಮಾ. 9) ಉತ್ತರಖಂಡದ ಹರಿದ್ವಾರದಲ್ಲಿ ಬೆಳಕಿಗೆ ಬಂದಿದೆ. ಜಗತ್ತನ್ನು ಸರಿಯಾಗಿ ನೋಡುವ ಮೊದಲೇ ಅಮಾಯಕ ಹಸುಗೂಸುಗಳು ಇಹಲೋಕ ತ್ಯಜಿಸಿವೆ.

ಪೊಲೀಸರೊಂದಿಗೆ ಆರೋಪಿ ಶಿವಾಂಗಿ ಸಕ್ಲಾನಿ.

ಡೆಹ್ರಾಡೂನ್: ಜಗತ್ತಿನಲ್ಲಿ ಪಾಪಿ ಮಕ್ಕಳಿರಬಹುದು. ಆದರೆ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತು ಹಳೆಯದಾಯ್ತು. ಕಾಲ ಬದಲಾದಂತೆ ಜನರ ಮನಸ್ಥಿತಿಯೂ ಬದಲಾಗುತ್ತಿದ್ದು, ಇತ್ತೀಚೆಗೆ ಪಾಪಿ ತಾಯಂದಿರೂ ಕಾಣ ಸಿಗುತ್ತಿದ್ದಾರೆ (Haridwar Horror) ಎನ್ನುವಂತಾಗಿದೆ. ಅದಕ್ಕೆ ಉತ್ತಮ ಉದಾಹರಣೆಯಂತಿದೆ ಈ ಘಟನೆ. ನಿರಂತರವಾಗಿ ಅಳುತ್ತಿದ್ದಾರೆಂದು 6 ತಿಂಗಳ ತನ್ನ ಅವಳಿ ಮಕ್ಕಳನ್ನು ತಾಯಿಯೊಬ್ಬಳು ಸಾಯಿಸಿರುವ ಘಟನೆ ಭಾನುವಾರ (ಮಾ. 9) ಉತ್ತರಖಂಡದ ಹರಿದ್ವಾರದಲ್ಲಿ ಬೆಳಕಿಗೆ ಬಂದಿದೆ. ಜಗತ್ತನ್ನು ಸರಿಯಾಗಿ ನೋಡುವ ಮೊದಲೇ ಅಮಾಯಕ ಹಸುಗೂಸುಗಳು ಇಹಲೋಕ ತ್ಯಜಿಸಿವೆ. ಆರೋಪಿ 20 ವರ್ಷದ ಶಿವಾಂಗಿ ಸಕ್ಲಾನಿ (Shivangi Saklani)ಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಮಹಿಳೆಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಅವಳಿ ಹೆಣ್ಣುಮಕ್ಕಳು ನಿರಂತರವಾಗಿ ಅಳುತ್ತಿದ್ದುದು ತನಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಮೊದಲು ಅವರನ್ನು ಸುಮ್ಮನಾಗಿಸಲು ಯತ್ನಿಸಿದರೂ ಅಳು ನಿಲ್ಲಿಸಲಿಲ್ಲ. ಕೊನೆಗೆ ಅವರನ್ನು ಕೊಲೆ ಮಾಡಿರುವುದಾಗಿ ಶಿವಾಂಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Uttarakhand : हरिद्वार में दिल दहला देने वाली घटना ,नींद में ख़लल पड़ने पर गुस्साई मां ने जुड़वा अबोध बेटियों का तकिये से मुंह दबा कर मार डाला
— Vijay Upadhyay (@piovijay) March 9, 2025
Mother killed her twin innocent daughters by suffocating them with a pillow in #Haridwarhttps://t.co/2s1k2Yqeun pic.twitter.com/uENSzfhGEt
ಏನಿದು ಘಟನೆ?
ಘಟನೆ ಬಗ್ಗೆ ಮಾಹಿತಿ ನೀಡಿದ ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪ್ರಮೇಂದ್ರ ದೋಭಾಲ್, ʼʼಮಕ್ಕಳು ನಿರಂತರವಾಗಿ ಅಳುತ್ತಿರುವುದು ಶಿವಾಂಗಿಯ ವಿಶ್ರಾಂತಿಗೆ ಭಂಗ ತಂದಿದೆ. ಮೊದಲಿಗೆ ಅವಳು ಮಕ್ಕಳನ್ನು ಸುಮ್ಮನಾಗಲು ಯತ್ನಿಸಿದ್ದಾಳೆ. ಮೊದಲಿಗೆ ಅವರ ಬಾಯಿಗೆ ಹೊಡೆದಳು. ಅಳು ಮುಂದುವರಿದಾಗ ತಾಳ್ಮೆ ಕಳೆದುಕೊಂಡ ಆಕೆ ಕೊನೆಗೆ ಸ್ಕಾರ್ಫ್ನಿಂದ ಕತ್ತು ಹಿಸುಕಿ ಕೊಂದಿದ್ದಾಳೆʼʼ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: UP Horror: ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಹತ್ಯೆ; ಹೆದ್ದಾರಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ದುಷ್ಕರ್ಮಿಗಳು
ಕಥೆ ಕಟ್ಟಿದ ಶಿವಾಂಗಿ
ಮಕ್ಕಳನ್ನು ಕೊಂದ ಬಳಿಕ ಶಿವಾಂಗಿ ಸಂಶಯ ಬರದಿರಲು ಮಾ. 6ರಂದು ಅವರಿಗೆ ಹುಷಾರಿಲ್ಲ ಎಂದು ಹೇಳಿ ಆಸ್ಪತ್ರೆಗೆ ಕರೆದೊಯ್ದಿದ್ದಳು. ಪರಿಶೀಲಿಸಿದ ವೈದ್ಯರು ಮಕ್ಕಳು ಈಗಾಗಲೇ ಮೃತಪಟ್ಟಿವೆ ಎಂದಿ ಘೋಷಿಸಿದ್ದರು. ಸಂಶಯಗೊಂಡ ಅವಳಿ ಮಕ್ಕಳ ತಂದೆ ಮಹೇಶ್ ಜ್ವಾಲಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಮಕ್ಕಳ ಸಾವಿನ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದಾಗ ಪೊಲೀಸರು ತನಿಖೆಗೆ ಇಳಿದಿದ್ದರು. ಆಗ ರಹಸ್ಯ ಬಿಚ್ಚಿಕೊಂಡಿತ್ತು.
"ಮೃತ ಮಕ್ಕಳ ತಂದೆ ಮಹೇಶ್ ಸಕ್ಲಾನಿ ಮಾ. 6ರಂದು ಎಂದಿನಂತೆ ಕೆಲಸಕ್ಕೆ ತರಳಿದ್ದರು. ಅವರಿಗೆ ಕರೆ ಮಾಡಿದ ಶಿವಾನಿ ಮಕ್ಕಳ ಆರೋಗ್ಯ ಸರಿ ಇಲ್ಲ ಎಂದು ತಿಳಿಸಿದ್ದಳು. ಜತೆಗೆ ಮಕ್ಕಳನ್ನು ರಾಣಿಪುರದ ದೇವಭೂಮಿ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದ್ದಳು. ಮಹೇಶ್ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮಕ್ಕಳು ಬರುವ ಮೊದಲೇ ಮೃತಪಟ್ಟಿದ್ದರು ಎಂದು ತಿಳಿಸಿದ್ದರುʼʼ ಎಂದುದಾಗಿ ಪ್ರಮೇಂದ್ರ ದೋಭಾಲ್ ವಿವರಿಸಿದ್ದಾರೆ.
ವಿಚಾರಣೆ ವೇಳೆ ಆರಂಭದಲ್ಲಿ ಸುಳ್ಳು ಕಥೆ ಕಟ್ಟಿದ ಶಿವಾಂಗಿ, ಬೆಳಗ್ಗೆ 10 ಗಂಟೆಗೆ ಮಕ್ಕಳನ್ನು ಮಲಗಿಸಿ ಮನೆಯಿಂದ ಹೊರಹೋಗಿದ್ದಾಗಿಯೂ ಬಂದು ನೋಡಿದಾಗ ಪ್ರಜ್ಞೆ ತಪ್ಪಿದ್ದ ಅವರನ್ನು ನೆರೆ ಮನೆಯವರ ಸಹಾಯದಿಂದ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದಾಗಿ ಹೇಳಿದ್ದಳು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ ಪೊಲೀಸರಿಗೆ ಸಂಶಯಾಸ್ಪದ ವ್ಯಕ್ತಿಗಳು ಮನೆಯೊಳಗೆ ಪ್ರವೇಶಿಸಿದ್ದು ಕಂಡು ಬಂದಿರಲಿಲ್ಲ. ಕೊನೆಗೆ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ.
"ಅವಳಿ ಹೆಣ್ಣುಮಕ್ಕಳಿಬ್ಬರೂ ಹಗಲು ರಾತ್ರಿ ಅಳುತ್ತಿದ್ದರಿಂದ ಅವಳಿಗೆ ಸರಿಯಾದ ನಿದ್ರೆ ಇರಲಿಲ್ಲ. ಕುಟುಂಬದವರ ಯಾವುದೇ ಸಹಾಯವಿಲ್ಲದಿರುವುದೂ ಆಕೆಯ ಹತಾಶೆಯನ್ನು ಹೆಚ್ಚಿಸಿತ್ತು. ಅಳುತ್ತಿದ್ದ ಹುಡುಗಿಯರ ದವಡೆಗೆ ಹೊಡೆಯುವ ಮೂಲಕ ಶಾಂತಗೊಳಿಸಲು ಯತ್ನಿಸಿದ್ದಳು. ಕೊನೆಗೆ ಸ್ಕಾರ್ಫ್ನಿಂದ ಕತ್ತು ಹಿಸುಕಿ ಕೊಂದಳು" ಎಂದು ದೋಭಾಲ್ ವಿವರಿಸಿದ್ದಾರೆ.