ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬರೋಬ್ಬರಿ 167 ಕೋಟಿ ರುಪಾಯಿಗೆ ಮಾರಾಟವಾಯ್ತು ರಾಜಾ ರವಿ ವರ್ಮ ಕಲಾಕೃತಿ; ದಾಖಲೆ ಬರೆದ ಯಶೋದಾ-ಕೃಷ್ಣ ಪೇಟಿಂಗ್‌

ರಾಜಾ ರವಿ ವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ ಚಿತ್ರವು 167 ಕೋಟಿ ರುಪಾಯಿಗೆ ಮಾರಾಟವಾಗಿ, ಹರಾಜಿನಲ್ಲಿ ಅತಿ ದುಬಾರಿ ಭಾರತೀಯ ಕಲಾಕೃತಿಯಾಗಿ ದಾಖಲೆ ನಿರ್ಮಿಸಿದೆ. ಈ ಅಪರೂಪದ ಆಯಿಲ್ ಪೇಂಟಿಂಗ್ ಅನ್ನು ಖ್ಯಾತ ಉದ್ಯಮಿ ಹಾಗೂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕರೂ ಆದ ಸೈರಸ್ ಎಸ್. ಪೂನವಾಲಾ ಖರೀದಿಸಿದ್ದಾರೆ.

ರಾಜಾ ರವಿ ವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ ವರ್ಣಚಿತ್ರ

ದೆಹಲಿ, ಏ. 2: ಭಾರತೀಯ ಚಿತ್ರಕಲೆಯ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದ್ದು, ರಾಜಾ ರವಿ ವರ್ಮ (Raja Ravi Varma) ಅವರ ಪ್ರಸಿದ್ಧ ‘ಯಶೋದಾ ಮತ್ತು ಕೃಷ್ಣ’ (Yashoda Krishna) ವರ್ಣಚಿತ್ರವು ಅಚ್ಚರಿ ಮೂಡಿಸುವಂತೆ ಬರೋಬ್ಬರಿ 167 ಕೋಟಿ ರುಪಾಯಿಗೆ ಹರಾಜಿನಲ್ಲಿ (Auction) ಮಾರಾಟವಾಗಿದೆ. ಈ ಅಪರೂಪದ ಆಯಿಲ್ ಪೇಂಟಿಂಗ್ ಅನ್ನು ಖ್ಯಾತ ಉದ್ಯಮಿ ಹಾಗೂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕರೂ ಆದ ಸೈರಸ್ ಎಸ್. ಪೂನವಾಲಾ ಖರೀದಿಸಿದ್ದು, ಇದು ಹರಾಜಿನಲ್ಲಿ ಮಾರಾಟವಾದ ಅತಿ ದುಬಾರಿ ಭಾರತೀಯ ಕಲಾಕೃತಿಯಾಗಿ ಹೊರಹೊಮ್ಮಿದೆ.

ಯುರೋಪಿಯನ್ ಚಿತ್ರಕಲೆ ತಂತ್ರ ಮತ್ತು ಭಾರತೀಯ ಸಾಂಸ್ಕೃತಿಕ ಸಂವೇದನೆಯನ್ನು ಅದ್ಭುತವಾಗಿ ಸಂಯೋಜಿಸುವ ಮೂಲಕ ಜನಪ್ರಿಯರಾಗಿದ್ದ ರಾಜಾ ರವಿ ವರ್ಮ 1890ರ ದಶಕದಲ್ಲಿ ಈ ಕಲಾಕೃತಿಯನ್ನು ರಚಿಸಿದ್ದರು. ‘ಯಶೋದಾ ಮತ್ತು ಕೃಷ್ಣ’ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ತಾಯಿಯ ಮಮತೆ ಮತ್ತು ಬಾಲಕೃಷ್ಣನ ದೈವಿಕತೆ ಜೀವಂತವಾಗಿ ಮೂಡಿಬಂದಿದ್ದು, ಕಲಾವಿದರ ಸಹಿ ಸಹ ಇದರಲ್ಲಿಗಿದೆ.

167 ಕೋಟಿ ರುಪಾಯಿಗೆ ಮಾರಾಟವಾದ ಕಲಾಕೃತಿ:



ಈ ಕಲಾಕೃತಿ 80 ಕೋಟಿ ರುಪಾಯಿಂದ 120 ಕೋಟಿ ರುಪಾಯಿವರೆಗೆ ಮಾರಾಟವಾಗಬಹುದು ಎಂಬ ಅಂದಾಜಿತ್ತು. ಅಂತಿಮವಾಗಿ ನಿರೀಕ್ಷೆಗೂ ಮೀರಿ ದ್ವಿಗುಣ ಬೆಲೆಗೆ ಮಾರಾಟವಾಗಿರುವುದು ಭಾರತೀಯ ಕಲಾ ಮಾರುಕಟ್ಟೆಯ ವೇಗವಾದ ಬೆಳವಣಿಗೆಯನ್ನ ಪ್ರತಿಬಿಂಬಿಸಿದೆ.

ಮರ್ಯಾದಾ ಪುರುಷೋತ್ತಮ ʻರಾಮʼನ ಅವತಾರದಲ್ಲಿ ರಣಬೀರ್‌ ಕಪೂರ್

ತಿರುವಾಂಕೂರು ರಾಜವಂಶದಲ್ಲಿ ಜನಿಸಿದ ರವಿ ವರ್ಮ ಅವರನ್ನು ಆಧುನಿಕ ಭಾರತೀಯ ಚಿತ್ರಕಲೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಹಿಂದೂ ದೇವರು ಮತ್ತು ದೇವತೆಗಳ ಚಿತ್ರಣವನ್ನು ನೈಜತೆಯಿಂದ, ಜೀವಂತತೆಯಿಂದ ಕ್ಯಾನ್ವಾಸ್ ಮೇಲೆ ಮೂಡಿಸುವಲ್ಲಿ ಅವರು ತೋರಿದ ನೈಪುಣ್ಯವೇ ಅವರನ್ನು ವಿಶ್ವಪ್ರಸಿದ್ಧರನ್ನಾಗಿಸಿದೆ. ಅವರ ಕಲಾಕೃತಿಗಳು ಚಿತ್ರವೆಂಬುದನ್ನೇ ಮೀರಿದ ಅನುಭವ ನೀಡುತ್ತದೆ.

ದೆಹಲಿ ಮೂಲದ ಖ್ಯಾತ ಸ್ಯಾಫ್ರನ್‌ಆರ್ಟ್ ಹರಾಜು ಸಂಸ್ಥೆಯು ಏಪ್ರಿಲ್ 1ರಂದು ನಡೆಸಿದ ತನ್ನ ‘ಸ್ಪ್ರಿಂಗ್ ಲೈವ್ ಸೇಲ್’ ಕಾರ್ಯಕ್ರಮದಲ್ಲಿ ಈ ಅಪರೂಪದ ಚಿತ್ರವನ್ನು ಹರಾಜಿಗೆ ಇಟ್ಟಿತ್ತು. ಈ ಮಾರಾಟವು ಭಾರತೀಯ ಕಲಾ ಮೌಲ್ಯಮಾಪನದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ.

ಇದೇ ವೇಳೆ ಕಳೆದ ವರ್ಷ ಸೆಪ್ಟೆಂಬರ್ 27ರಂದು ಭಾರತೀಯ ಅಮೂರ್ತ ಕಲಾವಿದ ವಾಸುದೇವ್ ಎಸ್. ಗೈತೊಂಡೆ ಅವರ ಚಿತ್ರವು 67 ಕೋಟಿ ರು.ಗೆ ಮಾರಾಟವಾಗಿದ್ದು, ಅದು ಕೂಡ ದೊಡ್ಡ ಮಟ್ಟದ ಗಮನ ಸೆಳೆದಿತ್ತು. ಇದೀಗ ರವಿ ವರ್ಮ ಅವರ ಈ ಕಲಾಕೃತಿ ಅದಕ್ಕಿಂತಲೂ ಹೆಚ್ಚಿನ ಮೌಲ್ಯಕ್ಕೆ ಮಾರಾಟವಾಗಿ ಇತಿಹಾಸ ಸೃಷ್ಟಿಸಿದೆ.