ಓದುಗರ ಓಣಿ
‘ನೋಟ್ ಬ್ಯಾನ್ ನೆನಪಿಸಿದ ಧುರಂಧರ್’ ಶೀರ್ಷಿಕೆಯ ಮೋಹನ್ ವಿಶ್ವ ಅವರ ಅಂಕಣ ಬರಹ (ಮಾ.21) ತುಂಬಾ ಪ್ರಸ್ತುತವಾಗಿದೆ. ಭಾರತದ ಆರ್ಥಿಕತೆಯನ್ನು ಅಭದ್ರಗೊಳಿಸುವ ಯೋಜನೆಗಳು ನೆರೆಯ ಪಾಕಿಸ್ತಾನದಲ್ಲಿ ಬಹಳ ವರ್ಷಗಳಿಂದ ರೂಪುಗೊಳ್ಳುತ್ತಲೇ ಇವೆ.
ಅವುಗಳಲ್ಲಿ ಮುಖ್ಯವಾದುದು ನಕಲಿ ನೋಟಿನ ದಂಧೆ. ಅಧಿಕ ಮುಖಬೆಲೆಯ ನೋಟು ಗಳನ್ನು ಯಥಾವತ್ ನಕಲುಗೊಳಿಸಿ, ನೇಪಾಳ ಹಾಗೂ ಬಾಂಗ್ಲಾದೇಶಗಳ ಮೂಲಕ ಭಾರತ ದೊಳಗೆ ಚಲಾವಣೆಗೊಳಿಸಿ ಹಣದುಬ್ಬರವನ್ನು ಉಂಟು ಮಾಡುವುದು ಈ ಶತ್ರುರಾಷ್ಟ್ರದ ಅಜೆಂಡಾ. ಇದನ್ನು ತಡವಾಗಿಯಾದರೂ ಮನಗಂಡ ಹಿಂದಿ ಚಿತ್ರರಂಗ ತನ್ನ ‘ಎಡಬಗೆ’ ನೀತಿಯಿಂದ ಹೊರಬಂದು ‘ಭಾರತ-ನಿಷ್ಠ’ ಚಲನಚಿತ್ರಗಳನ್ನು ಹೆಚ್ಚೆಚ್ಚು ತಯಾರಿಸು ತ್ತಿರುವುದು ಶ್ಲಾಘನೀಯ ಬೆಳವಣಿಗೆ.
ಬಾಲಿವುಡ್ ಮಂದಿಯ ಹಾಗೂ ಪ್ರೇಕ್ಷಕರ ಆಲೋಚನಾಲಹರಿಗಳು ಸಾಕಷ್ಟು ಬದಲಾಗಿವೆ ಎಂಬುದಕ್ಕೆ ‘ಧುರಂಧರ್’ನಂಥ ಒಂದಷ್ಟು ಚಿತ್ರಗಳೇ ಸಾಕ್ಷಿ. ಭಾರತೀಯರ ದೇಶಪ್ರೇಮದ ಬಗ್ಗೆ ಹಾಗೂ ಪಾಕಿಸ್ತಾನದಲ್ಲಿ ನಡೆದಿದ್ದ, ನಡೆಯುತ್ತಿರುವ ದುಷ್ಟ ಯೋಜನೆಗಳ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಿದೆ ಎನ್ನಲಡ್ಡಿಯಿಲ್ಲ.
370ನೇ ವಿಧಿಯನ್ನು ತೆಗೆದಾಗಿನಿಂದ ಜಮ್ಮು-ಕಾಶ್ಮೀರದಲ್ಲಿ ಬಿಟ್ಟಿ ಸವಲತ್ತುಗಳು ತೊಲಗಿ, ಭಯೋತ್ಪಾದನಾ ಕೃತ್ಯಗಳು, ಕಲ್ಲು ತೂರಾಟಗಳು ಸಾಕಷ್ಟು ಕ್ಷೀಣಿಸಿವೆ. ಹೀಗಾಗಿ ಭಾರತವು ಹೊಸ ಮನ್ವಂತರಕ್ಕೆ ತೆರೆದುಕೊಂಡಿದೆ.
ಇದನ್ನೂ ಓದಿ: Mohan Vishwa Column: ನೋಟ್ ಬ್ಯಾನ್ ನೆನಪಿಸಿದ ದುರಂಧರ್
- ರಾ. ರಾಮಾರಾಧ್ಯ, ಮೈಸೂರು
ಚುನಾವಣೆ ಅಗತ್ಯವೇ?
ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಇತರ ಕೆಲವು ಉಪ ಚುನಾವಣೆ ಗಳಿಗೆ ಆಯೋಗವು ದಿನಾಂಕಗಳನ್ನು ಘೋಷಿಸಿದ್ದು ರಾಜಕೀಯ ಪಕ್ಷಗಳಲ್ಲಿ ಉತ್ಸಾಹ ಗರಿಗೆದರಿದೆ. ಆದರೆ, ಮಧ್ಯಪ್ರಾಚ್ಯ ವಲಯದಲ್ಲಿ ಸಾಕಷ್ಟು ದಿನಗಳಿಂದ ನಡೆಯುತ್ತಿರುವ ಯುದ್ಧದ ಪರೋಕ್ಷ ಪರಿಣಾಮಗಳನ್ನು ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಎದುರಿಸು ತ್ತಿವೆ. ಪ್ರಮುಖವಾಗಿ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಮುಂತಾದ ತೈಲೋತ್ಪನ್ನಗಳ ಕೊರತೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಇಂಧನಗಳ ಬೆಲೆಗಳು ಏರಿವೆ. ಇಂಥ ಹಾಹಾಕಾರದ ಸಂದರ್ಭದಲ್ಲಿ ಚುನಾವಣೆ ಅಗತ್ಯವೇ? ಬದಲಾಗಿ ಆಯಾ ರಾಜ್ಯ ಗಳಲ್ಲಿರುವ ಮಂತ್ರಿಮಂಡಲಗಳು ಕೆಲವು ತಿಂಗಳವರೆಗೆ ‘ಆಡಳಿತಾತ್ಮಕ ನಿರ್ಧಾರವನ್ನು ಮಾತ್ರ’ ಕೈಗೊಳ್ಳುವಂತೆ ಹಾಗೂ ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಆಯಾ ಜಿಲ್ಲಾಧಿಕಾರಿಯು ಕರ್ತವ್ಯವನ್ನು ನಿರ್ವಹಿಸುವಂತೆ ಮಾಡಬಹುದಲ್ಲವೇ? ಈ ಕುರಿತು ದೇಶದ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರ ಆಲೋಚನೆಯನ್ನು ಮಾಡಬಾರ ದೇಕೆ?
- ಪತ್ತಂಗಿ ಎಸ್. ಮುರಳಿ, ಬೆಂಗಳೂರು
‘ಕಳಪೆ’ ಕ್ರೀಡಾಸ್ಪೂರ್ತಿ
ವಿನಾಯಕ ವೆಂ.ಭಟ್ಟ ಅವರು ತಮ್ಮ ‘ವಿದ್ಯಮಾನ’ ಅಂಕಣದಲ್ಲಿ (ಮಾ. 22) ಕ್ರೀಡಾ ಮನೋಭಾವದ ವಿಷಯವನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಆಗ ನನಗೆ ನೆನಪಾಗಿದ್ದು ಸುಮಾರು 50 ವರ್ಷಗಳ ಹಿಂದೆ ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡೀಸ್ ನಡುವೆ ನಡೆದ ಪಂದ್ಯ. ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡುವಾಗ, ಬ್ಯಾಟ್ಸ್ಮನ್ ಔಟಾಗಿಲ್ಲವೆಂದು ಗೊತ್ತಾದ ತಕ್ಷಣ, ಅಂಪೈರ್ ಔಟ್ ಕೊಟ್ಟಿದ್ದರೂ ಬ್ಯಾಟ್ಸ್ಮನ್ಗೆ ಮತ್ತೊಮ್ಮೆ ಬ್ಯಾಟಿಂಗ್ ಅವಕಾಶ ನೀಡಿದರು ವೆಸ್ಟ್ಇಂಡೀಸ್ ತಂಡದ ನಾಯಕ (ಅವರು ಗ್ಯಾರಿ ಸೋಬರ್ಸ್ ಅಂತ ನೆನಪು).
ಅದೇ ಪಂದ್ಯದಲ್ಲಿ ಕೊನೆಯ ಚೆಂಡಿನಲ್ಲಿ ಗೆಲ್ಲಲು ವೆಸ್ಟ್ಇಂಡೀಸ್ ತಂಡಕ್ಕೆ 1-2 ರನ್ ಬೇಕಿದ್ದಾಗ, ‘ಅಂಡರ್ಆರ್ಮ್’ ಬೌಲ್ ಮಾಡುವಂತೆ ಬೌಲರ್ ಗ್ರೆಗ್ ಚಾಪೆಲ್ಗೆ ಸೂಚಿಸಿದ್ದು ಆಸ್ಟ್ರೇಲಿಯಾ ತಂಡದ ನಾಯಕ ಇಯಾನ್ ಚಾಪೆಲ್. ಇದರಿಂದಾಗಿ ಬ್ಯಾಟ್ಸ್ಮನ್ಗೆ ರನ್ ತೆಗೆಯಲು ಆಗಲಿಲ್ಲ. ಆಸ್ಟ್ರೇಲಿಯಾ ತಂಡ ಇಂಥ ‘ಕಳಪೆ’ ಕ್ರೀಡಾ ಸ್ಪೂರ್ತಿಗೆ ಹೆಸರುವಾಸಿಯಾಗಿತ್ತು!
- ದಾವಣಗೆರೆ ಮುಕುಂದ, ಬೆಂಗಳೂರು