ಓದುಗರ ಓಣಿ
ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಸರ್ವೇಸಾಮಾನ್ಯ ವಾಗಿರುವುದು ತುಂಬಾ ವಿಷಾದದ ಸಂಗತಿ. ನಮ್ಮ ದೇಶದಲ್ಲಿ ವೈದ್ಯಕೀಯ ಕೋರ್ಸುಗಳ ಪ್ರವೇಶ ಕ್ಕಾಗಿ ಮೇ 3ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ( NEET ) ಪ್ರಶ್ನೆ ಪತ್ರಿಕೆಗಳು ಸೋರಿಕೆ ಯ ಹಿನ್ನೆಲೆ, ಮೇ 3ರಂದು ನಡೆಸಿದ್ದ ಪರೀಕ್ಷೆ ರದ್ದಾಗಿ, ಜೂನ್ 21ಕ್ಕೆ ಮತ್ತೊಮ್ಮೆ ಪರೀಕ್ಷೆ ನಡೆಸುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಅದಾಗಿಯೂ ದೇಶದಲ್ಲಿ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಮತ್ತೊಮ್ಮೆ ಬರೆಯಬೇಕಾದ ಪರಿಸ್ಥಿತಿ ಉಂಟಾಗಲು ಕಾರಣಕರ್ತರಾದ ದುರುಳರ ಕೂಟವನ್ನು ಸದೆಬಡಿಯಲೇಬೇಕು.
ದೇಶದಲ್ಲಿ ಪದೇ ಪದೆ ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದಾಗಿ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಮಾನಸಿಕ ಒತ್ತಡ ಹೆಚ್ಚಾಗಿ, ಖಿನ್ನತೆಗೆ ಜಾರಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಪ್ರಸ್ತುತ ನಡೆದ NEET ಪರೀಕ್ಷೆ ಮುಂದೂಡಿದ್ದರ ಪರಿಣಾಮವಾಗಿ ಮನನೊಂದು 5 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಬೇಸರದ ಸಂಗತಿ ಈ ಸಾವಿಗೆ ಹೊಣೆ ಯಾರು? ದೇಶದಲ್ಲಿ ಇದುವರೆಗೆ NEET ಪ್ರಶ್ನೆ ಪತ್ರಿಕೆಗಳು ನಾಲ್ಕು ಬಾರಿ ಸೋರಿಕೆಯಾಗಿವೆ.
ಇದನ್ನೂ ಓದಿ: Roopa Gururaj Column: ಭಕ್ತ ಮಾರ್ಕಂಡೇಯ ಮತ್ತು ನಂಬಿಕೆಯ ಶಕ್ತಿ
ವಿವಿಧ ವೃತ್ತಿಪರ ಕೋರ್ಸುಗಳು, ಪೊಲೀಸ್, ಸೈನ್ಯ, ರೈಲ್ವೆ ಇನ್ನೂ ಮುಂತಾದ ಹುದ್ದೆಗಳಿಗೆ ಕಳೆದ ಹತ್ತು ವರ್ಷಗಳಲ್ಲಿ 89 ಬಾರಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಆಶ್ಚರ್ಯವಾದರೂ ನಿಜ. ನಮ್ಮ ರಾಜ್ಯದಲ್ಲೂ ಹಲವಾರು ಬಾರಿ ಕೆ-ಸಿಇಟಿ, ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ನಮ್ಮ ಕಣ್ಣ ಮುಂದೆಯೇ ಇದೆ.
ಇನ್ನೂ ಮುಂದಾದರು ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರಗಳು ತುಂಬಾ ಜಾಗರೂಕತೆ ಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ಯಾವುದೇ ಹಗರಣಗಳಿಂದ ಕೂಡಿರದ ಹಾಗೆ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಮುತುವರ್ಜಿ ವಹಿಸುವುದು ಸೂಕ್ತ.
- ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು
ಬಂಗಾರ ಕುರಿತ ಲೇಖನ
ತುಂಬಾ ಅರ್ಥಪೂರ್ಣ! ಮೇ 16 ರಂದು, ‘ಆತ್ಮ ನಿರ್ಭರ’ ಅಂಕಣ ವಿಭಾಗದಲ್ಲಿ ಲೀನಾ ಜೋಶಿ ಯವರ ಬಂಗಾರ ಖರೀದಿಗಿಂತ ಭಾರತವೇ ಬಂಗಾರವಾಗಲಿ ಎಂಬ ಬರಹ ಅತ್ಯಂತ ಪ್ರಸ್ತುತ, ಅರ್ಥಪೂರ್ಣ ಮತ್ತು ಚಿಂತನಾರ್ಹವಾಗಿ ಮೂಡಿಬಂದಿದೆ. ಹಬ್ಬ-ಹರಿದಿನಗಳು ಅಥವಾ ವಿಶೇಷ ದಿನಗಳಲ್ಲಿ ಕೇವಲ ಬಂಗಾರ ಖರೀದಿಸುವುದೇ ಅತಿ ದೊಡ್ಡ ಹೆಮ್ಮೆ, ಅದೊಂದೇ ಸುರಕ್ಷಿತ ಹೂಡಿಕೆ ಎಂದು ನಂಬಿರುವ ಇಂದಿನ ಗ್ರಾಹಕ ಸಂಸ್ಕೃತಿಗೆ ಈ ಲೇಖನ ಅತ್ಯುತ್ತಮ ಕನ್ನಡಿ ಹಿಡಿದಿದೆ. ಭೌತಿಕ ಚಿನ್ನವನ್ನು ಕೂಡಿಡುವ ಆಡಂಬರದ ವ್ಯಾಮೋಹದಿಂದ ಹೊರಬಂದು, ನಮ್ಮ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ನೈತಿಕವಾಗಿ ‘ಚಿನ್ನದಂತಹ ಭಾರತ’ವನ್ನಾಗಿ ರೂಪಿಸಲು ಪ್ರತಿಯೊಬ್ಬ ನಾಗರಿಕನೂ ಶ್ರಮಿಸಬೇಕಿದೆ ಎಂಬ ಲೇಖಕರ ಆಶಯ ನಿಜಕ್ಕೂ ಶ್ಲಾಘನೀಯ. ಯುದ್ಧ ಪಿಪಾಸು ರಾಷ್ಟ್ರಗಳ ಯುದ್ಧದಿಂದಾಗಿ ಜಗತ್ತಿನಲ್ಲಿ ಅನೇಕ ದೇಶಗಳು ಆರ್ಥಿಕ ದುಸ್ಥಿತಿ ಯಲ್ಲಿವೆ.
ಕೊಲ್ಲಿ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿ ಅವುಗಳನ್ನು ಆಮದು ಮಾಡಿ ಕೊಳ್ಳುವ ಎಲ್ಲ ರಾಷ್ಟ್ರಗಳೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಡಾಲರ್ ಎದುರು ರುಪಾಯಿಯ ಮೌಲ್ಯ ಸ್ಥಿರವಾಗಿ ಡುವ ಹಾಗೂ ವಿದೇಶಿ ವಿನಿಮಯ ನಿಧಿ ಕಾಪಾಡುವ ಉದ್ದೇಶದಿಂದ ನಮ್ಮ ಪ್ರಧಾನ ಮಂತ್ರಿ ಮೋದಿ ಯವರು ಬಂಗಾರ ಖರೀದಿ ಕಡಿಮೆ ಮಾಡುವಂತೆ ಹಾಗೂ ಪೆಟ್ರೋಲ್, ಡೀಸೆಲ್ ಮಿತ ಬಳಕೆ ಮಾಡುವಂತೆ ಜನತೆಗೆ ಕರೆ ನೀಡಿದ್ದಾರೆ.
ಸ್ವಾವಲಂಬನೆ, ಶ್ರಮಸಂಸ್ಕೃತಿ ಮತ್ತು ದೇಶಪ್ರೇಮದ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿ ಕೊಂಡಾಗ ಮಾತ್ರ ಭಾರತವು ಜಾಗತಿಕ ಮಟ್ಟದಲ್ಲಿ ಬಂಗಾರದಂತೆ ಮಿನುಗಲು ಸಾಧ್ಯ. ಇಂತಹ ದೊಂದು ಪ್ರಬುದ್ಧ ಮತ್ತು ಸಕಾಲಿಕ ಲೇಖನವನ್ನು ಓದುಗರಿಗೆ ಉಣಬಡಿಸಿದ ಪತ್ರಿಕೆಗೆ ಹಾಗೂ ಲೇಖಕರಿಗೆ ಹೃತ್ಪೂರ್ವಕ ಧನ್ಯವಾದಗಳು.
- ಬಾಲಚಂದ್ರ ಹೆಗಡೆ, ಬೆಂಗಳೂರು