BY Vijayendra: ಬೆಲೆ ಏರಿಕೆಯ ʼಗ್ಯಾರಂಟಿʼ ಕೊಟ್ಟ ಕಾಂಗ್ರೆಸ್ ಸರ್ಕಾರ- ಬಿ.ವೈ.ವಿಜಯೇಂದ್ರ
BY Vijayendra: ಬೆಲೆ ಏರಿಕೆಯ ಗ್ಯಾರಂಟಿಯನ್ನು ಈ ರಾಜ್ಯ ಸರ್ಕಾರ ಸರಿಯಾಗಿ ಅನುಷ್ಠಾನಕ್ಕೆ ತರುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ವಿಫಲವಾಗಿದೆ. ಬೆಲೆ ಏರಿಕೆಯಿಂದ ನಾಡಿನ ಸಾಮಾನ್ಯ ಜನರು, ಬಡವರು, ರೈತರು ಸೇರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ.

ಬೆಂಗಳೂರು: ರಾಜ್ಯದಲ್ಲಿ ದರಿದ್ರ, ಜನವಿರೋಧಿ, ಕೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ನಾಡಿನ ಜನತೆಗೆ ಕೊಟ್ಟ ಏಕೈಕ ಗ್ಯಾರಂಟಿ ಎಂದರೆ ಅದು ಬೆಲೆ ಏರಿಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜತೆ ಇಂದು ಮಾತನಾಡಿದ ಅವರು, ಬೆಲೆ ಏರಿಕೆಯ ಗ್ಯಾರಂಟಿಯನ್ನು ಈ ರಾಜ್ಯ ಸರ್ಕಾರ ಸರಿಯಾಗಿ ಅನುಷ್ಠಾನಕ್ಕೆ ತರುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ವಿಫಲವಾಗಿದೆ. ಬೆಲೆ ಏರಿಕೆಯಿಂದ ನಾಡಿನ ಸಾಮಾನ್ಯ ಜನರು, ಬಡವರು, ರೈತರು ಸೇರಿ ಎಲ್ಲರೂ ತತ್ತರಿಸಿ ಹೋಗಿದ್ದಾರೆ ಎಂದು ಟೀಕಿಸಿದರು.
ಇವರ ಹುಳುಕನ್ನು ಮುಚ್ಚಿ ಹಾಕಲು ಪದೇ ಪದೇ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ಕಡೆ ಪುಕ್ಕಟೆ ವಿದ್ಯುತ್ ಎನ್ನುತ್ತಾರೆ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. 3 ಫೇಸ್ ವಿದ್ಯುತ್ತನ್ನು 7 ತಾಸು ಕೊಡಲು ಸರ್ಕಾರಕ್ಕೆ ಆಗುತ್ತಿಲ್ಲ. ಮತ್ತೊಂದು ಕಡೆ ಪಿಡಬ್ಲ್ಯುಡಿ ಮತ್ತಿತರ ಇಲಾಖೆಗಳು 6500 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಜನರಿಗೆ ಬರೆ ಎಳೆಯುವ ಸರ್ಕಾರದ ಕ್ರಮ ಅಕ್ಷಮ್ಯ ಅಪರಾಧ. ಇದನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.
ಸ್ಮಾರ್ಟ್ ಮೀಟರ್, ವಿದ್ಯುತ್ ದರ ಏರಿಕೆ, ಮೆಟ್ರೋ ದರ ಮತ್ತಿತರ ಬೆಲೆ ಏರಿಕೆ ಮತ್ತಿತರ ವಿಚಾರವನ್ನು ಚರ್ಚಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ. ಅಲ್ಪಸಂಖ್ಯಾತರ ಓಲೈಕೆ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಮೇಕೆ ದಾಟು ಎಂದು ತಿಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಏನ್ಮಾಡಿದ್ದಾರೆಂದು ಡಿ.ಕೆ. ಶಿವಕುಮಾರರನ್ನು ಪ್ರಶ್ನಿಸಬೇಕಿದೆ ಎಂದು ತಿಳಿಸಿದರು. ಅಧಿಕಾರದ ಮದ, ಭ್ರಮೆ ಇವರ ನೆತ್ತಿಗೇರಿದೆ. ಹೇಳಿ ಕೇಳಿ ಡಿ.ಕೆ. ಶಿವಕುಮಾರ್ ಅವರು ದೇಶದ ಎರಡನೇ ಅತಿ ಶ್ರೀಮಂತ ಶಾಸಕ ಎಂದು ವ್ಯಂಗ್ಯವಾಡಿದರು.
ಇದು ಪಿಕ್ ಪಾಕೆಟ್ ಸರ್ಕಾರ
ಸಾರ್ವತ್ರಿಕ ಚುನಾವಣೆಯಲ್ಲಿ ಜನರ ಕಿವಿಗೆ ಹೂವು ಮುಡಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರು ಜನರಿಗೆ ಮೋಸ, ವಂಚನೆ ಮಾಡುತ್ತಿದ್ದಾರೆ. ನಾಡಿನ ಜನರು ಎಚ್ಚೆತ್ತುಕೊಳ್ಳಬೇಕಿದೆ. ಇದು ಪಿಕ್ ಪಾಕೆಟ್ ಸರ್ಕಾರ. ಒಂದೆಡೆ ಗ್ಯಾರಂಟಿ ಕೊಡುವುದಾಗಿ ಹೇಳಿಕೊಂಡು ಜನಸಾಮಾನ್ಯರಿಗೆ ಹೊರೆ ಹಾಕುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | International Space Station: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಬಗ್ಗೆ ನಿಮಗೆಷ್ಟು ಗೊತ್ತು? ಅದು ಎಲ್ಲಿದೆ?
ಮುಸಲ್ಮಾನರಿಗೆ ಸರ್ಕಾರಿ ಗುತ್ತಿಗೆಗಳು, ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ಮಸೂದೆ ಸದನದಲ್ಲಿ ತರುತ್ತಿದ್ದಾರೆ. ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ ಅವರು, ಇದು ಕಾಂಗ್ರೆಸ್ ಸರ್ಕಾರವೇ? ಸಿದ್ದರಾಮಯ್ಯರ ಸರ್ಕಾರವೇ ಅಥವಾ ನಿಜಾಮರ ಆಡಳಿತವೇ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಮುಸಲ್ಮಾನರ ಓಲೈಕೆ ಮತ್ತು ರಾಜ್ಯದ ಹಿಂದೂಗಳಿಗೆ ಅವಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯರ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ದೂರಿದರು.