ಬಿಡದಿ ಟೌನ್ಶಿಪ್ ವಿರೋಧದ ಹಿಂದೆ ಜೆಡಿಎಸ್ ರಾಜಕೀಯ ಹಿತಾಸಕ್ತಿಯಿದೆ: ಎಂ.ಬಿ. ಪಾಟೀಲ್ ಆರೋಪ
MB Patil: ವಿಜಯಪುರದಲ್ಲಿ ಬಿಡದಿ ಟೌನ್ಶಿಪ್ ವಿಚಾರ ಕುರಿತು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಅವರಿಂದಲೇ ಬಿಡದಿ ಟೌನ್ಶಿಪ್ ಘೋಷಣೆಯಾಗಿತ್ತು. ಅವರು ಆಗಲೇ ನೋಟಿಫಿಕೇಷನ್ ಕೈಬಿಡಬೇಕಿತ್ತು. ಆದರೆ ಆಗ ಏನೂ ಮಾಡದೇ ಈಗ ಹೋರಾಟ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. -
ವಿಜಯಪುರ, ಜೂ.23: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗಲೇ ಬಿಡದಿ ಟೌನ್ಶಿಪ್ ಘೋಷಣೆಯಾಗಿತ್ತು. ಆಗ ಕುಮಾರಸ್ವಾಮಿ ನಿಲುವು ಬೇರೆ ಇತ್ತು, ಈಗೊಂದು ನಿಲುವು ಇದೆ. ಎಚ್.ಡಿ.ಕೆ. ಅವರದು ರಾಜಕೀಯ ನಿಲುವಾಗಿದೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ (MB Patil) ತಿರುಗೇಟು ನೀಡಿದ್ದಾರೆ. ನಗರದಲ್ಲಿ ಬಿಡದಿ ಟೌನ್ಶಿಪ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗಲೇ ನೋಟಿಫಿಕೇಷನ್ ಕೈಬಿಡಬೇಕಿತ್ತು. ಆದರೆ, ಆಗ ಏನೂ ಮಾಡದೇ ಈಗ ಹೋರಾಟ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಪಾದಯಾತ್ರೆ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಇದೆಲ್ಲಾ ನಾಟಕೀಯ. ಜನತೆಗೆ ಗೊತ್ತಾಗಿದೆ. ಜೆಡಿಎಸ್, ಕುಮಾರಸ್ವಾಮಿ ಅವರದು ರಾಜಕೀಯ ಇದೆ. ನಾನು ರೈತರ ಬಗ್ಗೆ ಮಾತನಾಡುವುದಿಲ್ಲ. ರೈತರು ಹೆಚ್ಚಿನ ಪರಿಹಾರ ಬೇಕು, ಜಮೀನು ಕೊಡಲ್ಲ ಎಂದು ಅಧಿಕಾರ ಇರುತ್ತದೆ. ಆದರೆ ಕುಮಾರಸ್ವಾಮಿ, ಜೆಡಿಎಸ್ನವರು ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟ ಎಂದು ಆರೋಪಿಸಿದರು.
ಬಿಡದಿ ಟೌನ್ಶಿಪ್ ಬೇಡವಾಗಿತ್ತು ಎಂದರೆ ಆಗ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗಲೇ ನೋಟಿಫಿಕೇಷನ್ ಡ್ರಾಪ್ ಮಾಡಬಹುದಿತ್ತು ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಕೆಎಸ್ಐಐಡಿಸಿಯಿಂದ 143 ಕೋಟಿ ಲಾಭಾಂಶ ಹಸ್ತಾಂತರ: ಎಂ.ಬಿ. ಪಾಟೀಲ್
ಬಿಡದಿ ಟೌನ್ಶಿಪ್ ಯೋಜನೆ ವಿರೋಧದಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಏನು ಆಗಲ್ಲ. ಜನರಿಗೆ ಗೊತ್ತಿದೆ, ಜೆಡಿಎಸ್ನವರು ಏನು ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನು ರೈತರ ಬಗ್ಗೆ ಮಾತನಾಡುವುದಿಲ್ಲ. ರೈತರಿಗೆ ಹಕ್ಕಿದೆ, ಹೆಚ್ಚಿನ ಪರಿಹಾರ ಕೇಳಬಹುದು, ಜಮೀನು ಕೊಡದೇ ಇರಬಹುದು. ಆದರೆ ಬಿಡದಿ ಟೌನ್ಶಿಪ್ ವಿರೋಧದ ಹಿಂದೆ ಜೆಡಿಎಸ್ ರಾಜಕೀಯ ಹಿತಾಸಕ್ತಿಯಿದೆ ಎಂದು ಆರೋಪಿಸಿದರು.