ದೆಹಲಿ, ನ. 14: ದೇಶದ ಕುತೂಹಲ ಕೆರಳಿಸಿದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ (Bihar Election 2025 Results) ಹೊರ ಬರುತ್ತಿದ್ದು, ಎನ್ಡಿಎ (NDA) ಸ್ಪಷ್ಟ ಬಹುಮತದತ್ತ ಸಾಗಿದೆ. ಅಧಿಕಾರ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ ಎನ್ಡಿಎ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಮಹಾಘಟಬಂಧನ್ ಕೇವಲ 39 ಸೀಟ್ಗಳಲ್ಲಿ ಮುಂದಿದೆ. ಎನ್ಡಿಎ ಮುನ್ನಡೆ ಸಾಧಿಸುತ್ತಿದ್ದಂತೆ ಮಿತ್ರ ಪಕ್ಷಗಳಾದ ಬಿಜೆಪಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇದರ ಬೆನ್ನಲ್ಲೇ ಶುಕ್ರವಾರ (ನವೆಂಬರ್ 14) ಸಂಜೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡುವ ನಿರೀಕ್ಷೆ ಇದ್ದು, ಭರ್ಜರಿ ಗೆಲುವಿಗಾಗಿ ಕಾರ್ಯಕರ್ತರನ್ನು ಅಭಿನಂದಿಸಲಿದ್ದಾರೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದಾಗಿನಿಂದಲೇ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮ್ಯಾಜಿಕ್ ಸಂಖ್ಯೆ 122.
ಬಿಹಾರ ಚುನಾವಣೆ ಫಲಿತಾಂಶ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿಕೆ:
ಇದೀಗ ಬಂದ ಮಾಹಿತಿ ಪ್ರಕಾರ ಎನ್ಡಿಎ ಮೈತ್ರಿಕೂಟದ ಬಿಜೆಪಿ-91, ಜೆಡಿಯು-81, ಎಲ್ಜೆಪಿ (ಆರ್ವಿ)-21 ಕ್ಷೇತ್ರಗಳಲ್ಲಿ ಮುಂದಿವೆ. ಇನ್ನು ಮಹಾಘಟಬಂಧನ್ನ ಕಾಂಗ್ರೆಸ್-5, ಆರ್ಜೆಡಿ-25 ಕಡೆ ಮುನ್ನಡೆ ಸಾಧಿಸಿವೆ. ಆ ಮೂಲಕ ಎನ್ಡಿಎ ತನ್ನ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನವೆಂಬರ್ 11ರಂದು ಹೊರ ಬಂದಿದ್ದ ಚುನಾವಣೋತ್ತರ ಸಮೀಕ್ಷೆ ವರದಿಗಳು ಎನ್ಡಿಎ ಅಧಿಕಾರಕ್ಕೆ ಬರುವ ಬಗ್ಗೆ ಭವಿಷ್ಯ ನುಡಿದಿದ್ದವು. ಬಹುತೇಕ ಎಲ್ಲ ಸಮೀಕ್ಷೆಗಳು ಎನ್ಡಿಎ ಜಯ ಗಳಿಸಲಿದೆ ಎಂದಿದ್ದವು. ಆದರೆ ಇಷ್ಟು ಬೃಹತ್ ಪ್ರಮಾಣ ಸೀಟ್ ಸಿಗುತ್ತದೆ ಎನ್ನುವ ಬಗ್ಗೆ ಯಾವ ಸಮೀಕ್ಷೆಯೂ ಊಹಿಸಿರಲಿಲ್ಲ.
ಈ ಸುದ್ದಿಯನ್ನೂ ಓದಿ: Bihar Election Result 2025: ಎನ್ಡಿಎ ಭಾರೀ ಮುನ್ನಡೆ; JDU ಕಮಾಲ್, ನಿತೀಶ್ ಸಿಎಂ ಆಗೋದು ಫಿಕ್ಸ್!
ಬಿಜೆಪಿ ನೇತೃತ್ವದ ಎನ್ಡಿಎ ಮಿತ್ರಪಕ್ಷದೊಳಗಿನ ಸೀಟ್ ಹಂಚಿಕೆಯನ್ನು ಅಳೆದೂ ತೂಗಿ ನಿರ್ವಹಿಸಿತ್ತು. ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ತಲಾ 101 ಕಡೆ ಕಣಕ್ಕಿಳಿದಿದ್ದವು. ಇನ್ನು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ಎನ್ಡಿಎಯ ಮಿತ್ರ ಪಕ್ಷಗಳಾದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ತಲಾ 6 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು. 2020ರ ಚುನಾವಣೆಯಲ್ಲಿ ಜೆಡಿಯು 115 ಸ್ಥಾನಗಳಲ್ಲಿ ಮತ್ತು ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಪ್ರತೇಕವಾಗಿ ಕಣಕ್ಕಿಳಿದಿತ್ತು.
ನಡೆಯಲಿಲ್ಲ ಮಹಾಘಟಬಂಧನ್ ಮ್ಯಾಜಿಕ್
ಮಹಾಘಟಬಂಧನ್ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿಗಣಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದಾದ್ಯಂತ ಓಡಾಡಿ ಪ್ರಚಾರ ನಡೆಸಿದ್ದರು. ಆರ್ಜೆಡಿ ಕೂಡ ಈ ಬಾರಿಯಾದರೂ ಅಧಿಕಾರಕ್ಕೆ ಬರಲೇಬೇಕೆಂಬ ಪಣ ತೊಟ್ಟಿತ್ತು. ಅದಾಗ್ಯೂ ಈ ಬಾರಿಯೂ ಮ್ಯಾಜಿಕ್ ನಡೆದಿಲ್ಲ.