ಪಾಟ್ನಾ: ಮತದಾರರ ಹಕ್ಕುಗಳ ಯಾತ್ರೆ (Voter rights march) ವೇಳೆ ಯುವಕನೊಬ್ಬ ಕಾಂಗ್ರೆಸ್ ನಾಯಕ (Congress leader) ರಾಹುಲ್ ಗಾಂಧಿಗೆ (Rahul Gandhi) ಮುತ್ತು ಕೊಟ್ಟು ಏಟು ತಿಂದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮಾಜಿ ಉಪಮುಖ್ಯಮಂತ್ರಿ (Former Deputy Chief Minister of Bihar) ಹಾಗೂ ಆರ್ಜೆಡಿ ನಾಯಕ ತೇಜಸ್ವಿ ಯಾದವ್ (RJD leader Tejashwi Yadav) ಜತೆಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ಈ ಘಟನೆ ನಡೆದಿದೆ. ಆಕ್ರೋಶಗೊಂಡ ನಾಯಕರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ರ್ಯಾಲಿಯ ವೇಳೆ ಏಕಾಏಕಿ ನುಗ್ಗಿ ಬಂದ ಯುವಕ ಕಾಂಗ್ರೆಸ್ ನಾಯಕ ರಾಹುಲ್ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಈ ವೇಳೆ ರಾಹುಲ್ ತಬ್ಬಿಬ್ಬಾಗಿದ್ದು, ಯುವಕನ ವರ್ತನೆಯಿಂದ ಆಕ್ರೋಶಗೊಂಡ ರ್ಯಾಲಿಯಲ್ಲಿದ್ದ ಇತರ ನಾಯಕರು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಶನಿವಾರ ಸಂಜೆ ಪೂರ್ಣಿಯಾ ತಲುಪಿದ್ದ ಯಾತ್ರೆಯು ಭಾನುವಾರ ಬೆಳಗ್ಗೆ ಅಲ್ಲಿಂದ ಹೊರಟು ಅರಾರಿಯಾ ತಲುಪಲಿದೆ. ಯಾತ್ರೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈ ಯಾತ್ರೆಗೆ ಶೀಘ್ರದಲ್ಲಿ ರಾಹುಲ್ ಗಾಂಧಿ ಸಹೋದರಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಸೇರಲಿದ್ದಾರೆ.
ಪೂರ್ಣಿಯಾದಲ್ಲಿ ಯಾತ್ರೆ ವೇಳೆ ರಾಹುಲ್ ತಮ್ಮ ಬೆಂಬಲಿಗರೊಂದಿಗೆ ಮೋಟಾರ್ ಸೈಕಲ್ ಸವರಿ ಮಾಡಿದರು. ಇವರನ್ನು ಹೆಚ್ಚಿನ ಬೆಂಬಲಿಗರು ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Sourav Ganguly: ಪ್ರಿಟೋರಿಯಾ ಕ್ಯಾಪಿಟಲ್ಸ್ಗೆ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ
ಯಾತ್ರೆ ವೇಳೆ ಮಾತನಾಡಿರುವ ರಾಹುಲ್ ಗಾಂಧಿ, ʼʼಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರ್ ಎಸ್ ಎಸ್ ಭಾರತ ಸಂವಿಧಾನ ನೀಡಿರುವ ಅಮೂಲ್ಯ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇವರು ಖಾಸಗೀಕರಣಕ್ಕೆ ಒತ್ತು ನೀಡಿ ಸಣ್ಣ ಉದ್ಯಮಿಗಳನ್ನು ವಿವಿಧ ಸೌಲಭ್ಯ ಪಡೆಯುವುದರಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆʼʼ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಅರಾರಿಯಾದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಮತ್ತು ಎಸ್ ಪಿ ಅಧಿಕಾರಿಗಳು ಉಸ್ತುವಾರಿ ವಹಿಸಿ ಭದ್ರತೆಯ ಪರಿಶೀಲನೆ ನಡೆಸಿದ್ದಾರೆ.