ಬೆಂಗಳೂರು, ಜ.20: ರಾಜಕಾರಣದಲ್ಲಿ ಇದ್ದ ಮೇಲೆ, ಯಾವುದೂ ಶಾಶ್ವತವಲ್ಲ. ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ. ಅಧಿಕಾರ ಯಾರಿಗೂ ಸುಲಭವಾಗಿ ಬರುವುದಿಲ್ಲ. ನಮ್ಮ ಅಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗುತ್ತಾರೆ. ಈ ಮೊದಲು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವಂಥದ್ದಲ್ಲ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ತಾಳ್ಮೆಗೆ ಅಂತಿಮ ಗಡುವು ಇದೆಯೇ ಎಂದು ಕೇಳಿದಾಗ, ನಮ್ಮ ಗುರಿ 2028 ರ ಚುನಾವಣೆ. ಈ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕು. ಈ ದೃಷ್ಟಿಯಿಂದ ಶಾಸಕರು, ಕಾರ್ಯಕರ್ತರ ಹಿತದೃಷ್ಟಿಯಿಂದ ತಾಳ್ಮೆಯಿಂದಲೇ ಇರಬೇಕಾಗುತ್ತದೆ, ತಾಳ್ಮೆಯಿಂದಲೇ ನೋಡಬೇಕು. ಅವರು ಪಕ್ಷದ ಅಧ್ಯಕ್ಷರಾಗಿದ್ದು, ಮೊದಲು ಅವರಲ್ಲಿ ಶಿಸ್ತು ಕಾಣಬೇಕು? ಹಾಗಾಗಿ ಅವರು ಶಿಸ್ತು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
ಎಷ್ಟು ದಿನ ತಾಳ್ಮೆಯಿಂದ ಇರಬೇಕು ಎಂಬ ಪ್ರಶ್ನೆ ಶಿವಕುಮಾರ್ ಅವರ ಬೆಂಬಲಿಗ ಶಾಸಕರಲ್ಲಿದೆ ಎಂದು ಕೇಳಿದಾಗ, ಅನಿವಾರ್ಯವಾಗಿ ವಿಶೇಷ ಅಧಿವೇಶನ ಕರೆಯಲಾಗಿದೆ. ರಾಷ್ಟ್ರದಲ್ಲಿ ಉದ್ಯೋಗ ಖಾತರಿ ಯೋಜನೆಯ ಹಕ್ಕು ಕಸಿಯುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ. ಕಳೆದ ಆರು ತಿಂಗಳಿಂದ ಈ ಯೋಜನೆ ಪ್ರಗತಿ ಸಾಧಿಸುತ್ತಿಲ್ಲ. ಬೇಸಿಗೆ ಪ್ರಾರಂಭವಾಗುತ್ತಿದ್ದು, ಈಗ ಹೆಚ್ಚು ಉದ್ಯೋಗ ಬೇಕು. ಈ ಸಂದರ್ಭದಲ್ಲಿ ಕೇಂದ್ರದ ನಿರ್ಧಾರ ರೈತರು, ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ. ಇದು ನಮ್ಮ ಮೊದಲ ಆದ್ಯತೆ. ಹೀಗಾಗಿ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕೈಗೊಳ್ಳಬೇಕು. ವಿರೋಧ ಪಕ್ಷಗಳು ಮನರೇಗಾ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದರು. ಇದೆಲ್ಲಾ ಆದ ಬಳಿಕ ಏನು ತೀರ್ಮಾನ ಮಾಡುತ್ತಾರೆ ಕಾದು ನೋಡೋಣ ಎಂದರು.
ಅಧಿಕಾರ ಹಂಚಿಕೆ ವಿಚಾರವಾಗಿ ನೀವು ಎರಡು ವರ್ಷದಿಂದ ಕಾಯುತ್ತಿದ್ದೀರಿ ಎಂದಾಗ, ಭಗವಂತನ ಇಚ್ಛೆ, ಏನೇನು ತೀರ್ಮಾನವಾಗುತ್ತದೋ ಕಾದು ನೋಡೋಣ, ಎಲ್ಲದಕ್ಕೂ ಅಂತ್ಯ ಇದ್ದೇ ಇರುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಸಂಕ್ರಾಂತಿ ಸಂಭ್ರಮ ಮುಂದಕ್ಕೆ ಹೋಗಿದೆ ಎಂದು ಕೇಳಿದಾಗ, ಪಕ್ಷ ತಾಳ್ಮೆಯಿಂದ ಇರಲು ಹೇಳಿದೆ. ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಭೇಟಿ ಮಾಡಿದಾಗ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಶಿವಕುಮಾರ್ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಗುರಿಯೊಂದಿಗೆ ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದರು.
ಜಾತಿ ಮೇಲೆ ನಡೆಯುವ ರಾಜಕಾರಣ ಅಭಿವೃದ್ಧಿಗೆ ಮಾರಕ
ನಾಯಕತ್ವ ಬದಲಾವಣೆಯಾದರೆ ಒಂದು ವರ್ಗದ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲ್ಲ ಎಂದು ಬಿಂಬಿಸುತ್ತಿರುವ ಬಗ್ಗೆ ಕೇಳಿದಾಗ, ಆ ವರ್ಗ, ಈ ವರ್ಗ ಎಂಬುದಿಲ್ಲ. ಎಲ್ಲಾ ವರ್ಗದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೇಕು. ರಾಜಕಾರಣಿಗೆ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರ ಮತಗಳು ಬೇಕು. ಕೇವಲ ಒಬ್ಬರನ್ನು ಓಲೈಸಿಕೊಳ್ಳುವುದಲ್ಲ. ಎಲ್ಲರ ಮತಗಳು ಮುಖ್ಯವಾಗುತ್ತದೆ. ಜಾತಿ ಮೇಲೆ ನಡೆಯುವ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ಕುಂಠಿತ ಮಾಡಲಿದೆ. ಶಿವಕುಮಾರ್ ಅವರು ಪಕ್ಷಕ್ಕೆ ನಿಷ್ಠರಾಗಿದ್ದಾರೆಯೇ ಹೊರತು, ವ್ಯಕ್ತಿಗೆ ಅಲ್ಲ. ಕೆಲವರು ವ್ಯಕ್ತಿಗೆ ನಿಷ್ಠರಾಗಿದ್ದಾರೆ. ಅವರು ಅಧಿಕಾರಕ್ಕಾಗಿಯೇ ಇರುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದ ಪಕ್ಷ ಅಧಿಕಾರದಲ್ಲಿ ಇದ್ದಾಗ, ಇಲ್ಲದಿದ್ದಾಗ ಎಲ್ಲಾ ತರಹದ ನೋವು, ಕಷ್ಟಗಳನ್ನು ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.
ಪಂಚಾಯಿತಿ ಚೇರ್ಮನ್ಗಳೇ ತಮ್ಮ ಸ್ಥಾನ ಬಿಡಲು ಬಯಸುವುದಿಲ್ಲ. ಮದುವೆಯಾಗಲಿ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳುತ್ತೇನೆ, ಮಾರ್ಚ್ ಅಂತ್ಯ ಮುಗಿಯಲಿ - ಎಂದೆಲ್ಲಾ ನೆಪ ಹೇಳಿ ಮುಂದಕ್ಕೆ ಹಾಕುತ್ತಾರೆ. ಅಧ್ಯಕ್ಷ ಸ್ಥಾನ ಕೊಡುವಾಗ ನನಗೆ ಮೂರು ದಿನ ಅಧಿಕಾರ ಸಾಕು, ಮಾಜಿ ಎಂದು ಕರೆಸಿಕೊಳ್ಳುತ್ತೇನೆ ಸಾಕು ಎನ್ನುತ್ತಾರೆ. ಈ ರೀತಿ ಇದ್ದಾಗ ಏನು ಮಾಡಲು ಆಗುತ್ತೆ. ರಾಜಕಾರಣದಲ್ಲಿ ನಂಬಿಕೆ ಬಹಳ ಮುಖ್ಯವಾಗುತ್ತದೆ. ಶಿವಕುಮಾರ್ ಅವರು ಬಹಳ ಚಿಕ್ಕ ವಯಸ್ಸಿನಿಂದ ಇದೆಲ್ಲವನ್ನು ನೋಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಮಾತು ಕೊಟ್ಟಿದ್ದೀರಿ ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ
ಮಾರ್ಚ್ ಅಂತ್ಯಕ್ಕೆ ಆಗಬಹುದೇ ಎಂದು ಕೇಳಿದಾಗ, ನಾನು ಸಿಎಂ ವಿಚಾರವಾಗಿ ಹೇಳಿಲ್ಲ, ಹಳ್ಳಿಗಳಲ್ಲಿ ಹೇಳುವ ನೆಪವನ್ನು ಹೇಳಿದ್ದೇನೆ. ನಾನು ಅಧಿಕಾರ ಹಂಚಿಕೆ ವಿಚಾರವಾಗಿ ಈ ಮಾತು ಹೇಳಿಲ್ಲ. ನೀವುಗಳೇ ಇದನ್ನು ಹೇಳುತ್ತಿದ್ದೀರಿ. ನಮ್ಮ ಊರಿನಲ್ಲಿ ನಡೆಯುವ ಪ್ರಕ್ರಿಯೆ ಬಗ್ಗೆ ಹೇಳಿದೆ ಅಷ್ಟೇ. ಮಾತು ಕೊಟ್ಟಿದ್ದೀರಿ ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ ಎಂದು ಸ್ಪಷ್ಟಪಡಿಸಿದರು.
ಎಲ್ಲಾ ದೃಷ್ಟಿಕೋನದಲ್ಲಿ ರಾಹುಲ್ ಗಾಂಧಿ ಚಿಂತನೆ
ಡಿ.ಕೆ. ಶಿವಕುಮಾರ್ ಅವರ ಶಿಸ್ತು, ಅನಿವಾರ್ಯತೆ ರಾಹುಲ್ ಗಾಂಧಿ ಅವರಿಗೆ ಮನವರಿಕೆಯಾಗಿದೆಯೇ ಎಂದು ಕೇಳಿದಾಗ, ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರು, ಎಲ್ಲಾ ದೃಷ್ಟಿಕೋನದಲ್ಲಿ ಅವರು ಚಿಂತನೆ ಮಾಡುತ್ತಾರೆ. ದೇಶದ ರಾಜಕೀಯ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಮಾಡುತ್ತಾರೆ. ನಾನು ಕೇವಲ ಶಿವಕುಮಾರ್ ಅವರ ದೃಷ್ಟಿಕೋನದಲ್ಲಿ ನೋಡಬಹುದು, ನೀವು (ವರದಿಗಾರರು) ನಿಮ್ಮ ವಾಹಿನಿ ದೃಷ್ಟಿಯಿಂದ ನೋಡುತ್ತೀರಿ, ಮತ್ತೊಬ್ಬರು ಅವರ ದೃಷ್ಟಿಯಲ್ಲಿ ನೋಡುತ್ತಾರೆ. ಮಂತ್ರಿಯಾಗಲು ಬಯಸುವವರು ಮಂತ್ರಿಗಿರಿ ದೃಷ್ಟಿಯಿಂದ ನೋಡುತ್ತಾರೆ. ಆದರೆ ರಾಹುಲ್ ಗಾಂಧಿ ದೇಶದ ಎಲ್ಲಾ ಬೆಳವಣಿಗೆಗಳ ದೃಷ್ಟಿಯಿಂದ ನೋಡಬೇಕು. ಹೀಗಾಗಿ ಎಲ್ಲರ ವಿಶ್ವಾಸ ಗಳಿಸಿ ತೀರ್ಮಾನ ಮಾಡಬೇಕು ಎಂಬುದು ಪಕ್ಷದ ನಾಯಕರ ತೀರ್ಮಾನವಾಗಿದೆ ಎಂದು ತಿಳಿಸಿದರು.
ಜಾರ್ಜ್ ಅವರು ಹಿರಿಯರು, ಪ್ರಭಾವಿ, ಹೀಗಾಗಿ ಭೇಟಿ
ಕೆ.ಜೆ ಜಾರ್ಜ್ ಜತೆ ನೇರಾನೇರ ಮಾತನಾಡಲು ಅವಕಾಶ ಸಿಗುತ್ತದೆ, ಶಿವಕುಮಾರ್ ಅವರ ಜತೆ ರಾಹುಲ್ ಒಬ್ಬರೇ ಚರ್ಚೆ ಮಾಡಿಲ್ಲ ಎಂಬ ಚರ್ಚೆ ಬಗ್ಗೆ ಕೇಳಿದಾಗ, ಚರ್ಚೆಗಳು ಆಗಬೇಕು. ಚರ್ಚೆಗಳು ಆಗಲಿ. ಜಾರ್ಜ್ ಅವರು ಅತ್ಯಂತ ಹಿರಿಯ ಹಾಗೂ ಪ್ರಭಾವಿ ನಾಯಕರು. ಹೀಗಾಗಿ ಅವರಿಗೆ ಅವಕಾಶ ಸಿಕ್ಕಿದೆ. ಅವರು ಕೇರಳ ಚುನಾವಣೆ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ನೇರಾನೇರ ಭೇಟಿ ಮಾಡಿದ್ದಾರೆ ಎಂದು ತಿಳಿಸಿದರು.
ಈ ಗೊಂದಲವನ್ನು ಹೈಕಮಾಂಡ್ ನಾಯಕರು ಗೊಂದಲವನ್ನು ಬೇಗ ಬಗೆಹರಿಸಬೇಕು ಎಂದು ಹೇಳಿರುವ ಬಗ್ಗೆ ಕೇಳಿದಾಗ, ಅವರು ಹಿರಿಯರಿದ್ದಾರೆ, ಅವರಿಗೆ ಸಾಕಷ್ಟು ವಿಚಾರ ಗೊತ್ತಿದೆ. ಹೀಗಾಗಿ ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದವರೇ ಆಗಿದ್ದು, ಅವರು ಈ ವಿಚಾರದಲ್ಲಿ ಮೌನ ವಹಿಸಿರುವುದು ಗೊಂದಲ ಹೆಚ್ಚಾಗಿದೆಯೇ ಎಂದು ಕೇಳಿದಾಗ, ಎಐಸಿಸಿ ಅಧ್ಯಕ್ಷರು ನಿಮಗೂ ಬಹಳ ಹತ್ತಿರವಿದ್ದಾರೆ. ನೀವು ಈ ವಿಚಾರವನ್ನು ಅವರ ಬಳಿಯೇ ಕೇಳಬೇಕು ಎಂದರು. ಅವರು ಬಾಯಿ ಬಿಡುವುದಿಲ್ಲ ಎಂದಾಗ, ಅವರು ನಮಗೇ ಬಾಯಿ ಬಿಡುವುದಿಲ್ಲ, ನಿಮಗೆ ಬಿಡುತ್ತಾರಾ ಎಂದರು.
ಮೊನ್ನೆ ಅವರನ್ನು ಭೇಟಿ ಮಾಡಿದಾಗ ಏನೂ ಮಾತನಾಡಲಿಲ್ಲವೇ ಎಂದು ಕೇಳಿದಾಗ, ಇದು ನಮ್ಮ ಅವರ ನಡುವಣ ಮಾತುಕತೆ. ಖರ್ಗೆ ಸಾಹೇಬರು ನಮಗೆ ಹೊಸಬರಲ್ಲ ಎಂದರು.
ಜ.29ರಂದು ಸಿಎಂ ಹಾಗೂ ಡಿಸಿಎಂ ಅವರನ್ನು ದೆಹಲಿಗೆ ಕರೆದಿದ್ದಾರಾ ಎಂದು ಕೇಳಿದಾಗ, 31ರವರೆಗೂ ವಿಶೇಷ ಅಧಿವೇಶನವಿದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ನಾಲ್ಕು ದಿನ ಅವಕಾಶ ನೀಡಿದ್ದು, ಕೊನೆಯ ಮೂರು ದಿನ ಮನರೇಗಾ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಲಾಗಿದೆ. ಇದು ಮುಗಿದ ನಂತರ ಇತರೆ ವಿಚಾರ. ಬಜೆಟ್ ತಯಾರಿ ಬೇರೆ ನಡೆಯುತ್ತಿದೆ ಎಂದರು.
ರಾಜಕೀಯ ನಿರಂತರವಾದುದು. ರಾಜಕಾರಣಿಗಳಿಗೆ ನಿದ್ರೆ, ಊಟ, ನೆಮ್ಮದಿ ಇರುವುದಿಲ್ಲ. ಎಲ್ಲವನ್ನು ಮಾಡುವವರಿಗೆ ಎಲ್ಲವೂ ಸಿಗುತ್ತದೆ ಎಂದರು.
ಮತಪತ್ರ ಅವಶ್ಯಕತೆ ಇಲ್ಲ
ಜಿಬಿಎ ಪಾಲಿಕೆ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ತೀರ್ಮಾನಿಸಿರುವ ಬಗ್ಗೆ ಕೇಳಿದಾಗ, “ಅದು ಅವಶ್ಯಕತೆ ಇಲ್ಲ ಎಂದು ಅನಿಸುತ್ತದೆ. ರಾಜ್ಯ ಚುನಾವಣಾ ಆಯೋಗ ಈ ಚುನಾವಣೆ ನಡೆಸುತ್ತಿರುವುದರಿಂದ ಇದನ್ನು ತಿರುಚಲು ಆಗುವುದಿಲ್ಲ. ಇವಿಎಂ ಬಳಕೆ ಬೇರೆ ವಿಚಾರ. ನಾವು ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ” ಎಂದರು.
ಶಿಸ್ತು ಹಾಗೂ ಕರ್ನಾಟಕ ಪೊಲೀಸ್ ಘನತೆ ಬಹಳ ಮುಖ್ಯ
ಡಿಜಿಪಿ ರಾಮಚಂದ್ರ ರಾವ್ ಅವರ ಪ್ರಕರಣದ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ಸಿಎಂ ಹಾಗೂ ಗೃಹ ಸಚಿವರನ್ನು ಕೇಳಿ. ಅವರು ಗೃಹಸಚಿವರಿಗೆ ಆತ್ಮೀಯರು ಎಂದು ಹೇಳುತ್ತಾರೆ, ಈ ಬಗ್ಗೆ ಅವರು ಈಗಾಗಲೇ ತೀರ್ಮಾನ ಕೈಗೊಂಡಿರಬೇಕು. ಇದು ಆತ್ಮೀಯತೆಯ ವಿಚಾರವಲ್ಲ, ಶಿಸ್ತಿನ ವಿಚಾರ. ನನಗೂ ಅನೇಕ ಆತ್ಮೀಯರು ಇರುತ್ತಾರೆ. ಶಿಸ್ತು ಹಾಗೂ ಕರ್ನಾಟಕ ಪೊಲೀಸ್ ಘನತೆ ಬಹಳ ಮುಖ್ಯ. ಇದನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ” ಎಂದರು.
ಕರ್ನಾಟಕ ಪೊಲೀಸ್ಗೆ ಇತಿಹಾಸವಿದೆ. ಬಹಳಷ್ಟು ಶಕ್ತಿಶಾಲಿ ಇದೆ. ಈ ಘನತೆಗೆ ಧಕ್ಕೆಯಾಗದಂತೆ ಸರ್ಕಾರದ ತೀರ್ಮಾನವಿರಲಿದೆ ಎಂದರು.
ಬಜೆಟ್ ಮುಗಿದ ಬಳಿಕ ಅಧಿಕಾರ ಹಂಚಿಕೆ ಆಗುತ್ತದೆಯೇ ಎಂದು ಕೇಳಿದಾಗ, ಅದಕ್ಕೆ ಇನ್ನು ಸಮಯವಿದೆಯಲ್ಲಾ ಮಾತಡೋಣ ಬಿಡಿ. ಕ್ಷಣ ಕ್ಷಣದ ಮಾಹಿತಿಗೆ ಕಾಯಿರಿ ಎಂದು ಚಟಾಕಿ ಹಾರಿಸಿದರು. ಇದು ಸಾಧ್ಯವಾಗಬೇಕಾದರೆ, ಯಾರಾದರೂ ಆರಂಭಿಸಬೇಕಲ್ಲ ಎಂದಾಗ, ಅದಕ್ಕೆ ನೀವಿದ್ದೀರಲ್ಲಾ (ಮಾಧ್ಯಮಗಳು). ನಿಮ್ಮ ನೇತೃತ್ವದಲ್ಲಿ ಎಲ್ಲವೂ ನಡೆಯಲಿ” ಎಂದರು.
ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದ ಬಗ್ಗೆ ಕೇಳಿದಾಗ, ಅವರು ರಾಮೋತ್ಸವ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದರು. ಅವರು ದಿನಾಂಕ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದಾಗ, ಅದು ನನಗೆ ಗೊತ್ತಿಲ್ಲ, ನಿನಗೆ ಯಾರು ಹೇಳಿದರು ಎಂದು ಅವರನ್ನೇ ಕೇಳಿದೆ ನಾನು ಎಂದರು.
ಕುಮಾರಸ್ವಾಮಿ ಅವರಿಗೆ ಸ್ವಾಗತ
ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ ಎಂದಾಗ, ನಾನು ಸ್ವಾಗತ ಮಾಡುತ್ತೇನೆ. ನಾವ್ಯಾರೂ ಅವರನ್ನು ಹೋಗು ಎಂದಿಲ್ಲ, ಬರುವವರನ್ನು ಬೇಡ ಎಂದು ಹೇಳುವುದಿಲ್ಲ. ಅವರು ಸರ್ವ ಸ್ವತಂತ್ರರು. ಅವರ ಪಕ್ಷಕ್ಕೆ ಅವರೇ ಅಧಿಪತಿ. ಅವರು ಏನೇ ತೀರ್ಮಾನ ಕೈಗೊಂಡರು ನಾನು ಅದನ್ನು ಸ್ವಾಗತಿಸುತ್ತೇನೆ ಎಂದರು.
ಇದು ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, ಕಾಂಗ್ರೆಸ್ ಗೂ ಜೆಡಿಎಸ್ ಗೂ ಸಂಬಂಧವಿಲ್ಲ. ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಎರಡೂಕಾಲು ವರ್ಷವಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ ಆಯ್ಕೆ
ಅಣ್ಣ ತಮ್ಮ ದಿನಬೆಳಗಾದರೆ ಯಾರದ್ದಾದರು ತಲೆ ಹೊಡೆಯಲು ನೋಡುತ್ತಾರೆ ಅಂತಹವರಿಗೆ ಒಕ್ಕಲಿಗ ಸಮುದಾಯ ಬೆಂಬಲ ನೀಡುತ್ತದೆಯೇ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, ಕುಮಾರಸ್ವಾಮಿ ಬಗ್ಗೆ ಬೇರೆ ದಿನ ಮಾತನಾಡೋಣ. ಮತ್ತೊಂದು ದಿನ ಬನ್ನಿ ಅವರ ವಿಚಾರವನ್ನೇ ಮಾತನಾಡೋಣ. ನಿಮಗೆ ಅವರ ಮೇಲೆ ಅಷ್ಟೋಂದು ಪ್ರೀತಿಯೇ? ಅಷ್ಟೋಂದು ಪ್ರೀತಿ ಇದ್ದರೆ ಹೇಳುವೆ ಎಂದರು.
ಸಿಎಂ ಬಜೆಟ್ ತಯಾರಿ ನಡೆಸುತ್ತಿದ್ದಾರೆ ಎಂದು ಕೇಳಿದಾಗ, ರಾಜ್ಯಕ್ಕೆ ಬಜೆಟ್ ಕೊಡಲೇಬೇಕಲ್ಲವೇ? ಈಗ ಅವರಿಗೆ ಅತಿ ಹೆಚ್ಚು ಬಜೆಟ್ ನೀಡಿರುವ ಕೀರ್ತಿ ಇದೆ. ಈಗ ಅದಕ್ಕೆ ಮತ್ತೊಂದು ಗರಿ ಎಂದರು.