ಬೆಂಗಳೂರು: ಆಚಾರ್ಯ ಚಾಣಕ್ಯನು(Acharya Chanakya) ರಚಿಸಿದ ಪ್ರಾಚೀನ ಭಾರತೀಯ ರಾಜಕೀಯ ಗ್ರಂಥ ಅರ್ಥಶಾಸ್ತ್ರವು ಇಂದು ಕೂಡ ಮಾರ್ಗದರ್ಶಕವಾಗಿಯೇ ಪರಿಗಣಿಸಲಾಗಿದೆ. ರಾಜಕೀಯ, ಆರ್ಥಿಕತೆ ಮಾತ್ರವಲ್ಲದೆ, ಮದುವೆ, ಹಣಕಾಸು ಹಾಗೂ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ಸ್ಪಷ್ಟವಾದ ಮಾರ್ಗದರ್ಶನ ನೀಡಿದ್ದಾನೆ.
ಶತಮಾನಗಳು ಕಳೆದರೂ ಚಾಣಕ್ಯನ ಚಿಂತನೆಗಳು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ.
ಹೀಗೆ ಆಚಾರ್ಯ ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ(Chanakya Niti) ಮನುಷ್ಯನ ಬದುಕಿನ ಪ್ರತಿಯೊಂದು ಹಂತಕ್ಕೂ ಮಾರ್ಗದರ್ಶನ ನೀಡಿದ್ದಾನೆ. ಚಾಣಕ್ಯನ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೂ ಶತ್ರುಗಳು ಇರುವುದು ಸಹಜ. ಆದರೆ ಅವರನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ನಿಮ್ಮ ನಾಶಕ್ಕೆ ಕಾರಣವಾಗಬಹುದು, ಇದು ಜೀವನದ ಅತಿದೊಡ್ಡ ತಪ್ಪುಆಗಲಿದೆ ಎನ್ನುತ್ತಾರೆ ಚಾಣಕ್ಯರು. ಏಕೆಂದರೆ, ಅವಕಾಶ ಸಿಕ್ಕ ತಕ್ಷಣ ಶತ್ರುಗಳು ನಿಮ್ಮ ವಿರುದ್ಧ ತಂತ್ರ ಮಾಡಲು ಮಾಡಲು ಅಣಿಯಾಗುತ್ತಾರೆ. ಅದಕ್ಕಾಗಿಯೇ ಚಾಣಕ್ಯನು ಶತ್ರುಗಳನ್ನು ಎದುರಿಸಿ ಜಯ ಸಾಧಿಸಲು ಕೆಲವು ಮಹತ್ವದ ನಿಯಮಗಳನ್ನು ತಿಳಿಸಿದ್ದಾನೆ. ಅವು ಯಾವುವು ಎಂಬುದನ್ನು ನೋಡೋಣ…
ಯಾರೊಂದಿಗೆ ಸಹವಾಸ ಮಾಡುತ್ತಿದ್ದೀರಾ ಎಂಬ ಎಚ್ಚರಿಕೆ ಇರಲಿ:
ಚಾಣಕ್ಯ ನೀತಿ ಪ್ರಕಾರ, ಮನುಷ್ಯನ ಯಶಸ್ಸು ಮತ್ತು ಭವಿಷ್ಯವನ್ನು ಅವನ ಸಹವಾಸವೇ ನಿರ್ಧರಿಸುತ್ತದೆ. ಕುಟುಂಬದ ಹೊರತಾಗಿ ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ನೀವು ಹೆಚ್ಚು ಸಮಯ ಕಳೆಯುವ ಕಾರಣ, ಯಾರು ನಮ್ಮ ಹಿತೈಷಿಗಳು ಮತ್ತು ಯಾರು ಶತ್ರುಗಳು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ತಪ್ಪು ಸಹವಾಸದ ಆಯ್ಕೆ ಶತ್ರುಗಳಿಗೆ ನಿಮ್ಮ ದುರ್ಬಲತೆಯನ್ನು ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆದ್ದರಿಂದ ಯಾರೊಂದಿಗೆ ನೀವು ಕಾಲ ಕಳೆಯುತ್ತೀರಿ ಎಂಬುದರ ಬಗ್ಗೆ ಸದಾ ಜಾಗ್ರತೆ ವಹಿಸಬೇಕು.
Chanakya Niti: ಈ ಗುಣಗಳು ಇರುವವರು ಜೀವನದಲ್ಲಿ ಎಂತಹ ಸಂಕಷ್ಟಗಳು ಎದುರಾದರೂ ಗೆದ್ದು ಬರುತ್ತಾರೆ!
ಮಾತಿನ ಮೇಲೆ ನಿಯಂತ್ರಣ ಇರಲಿ:
ಮನುಷ್ಯನ ಮಾತೇ ಅವನ ಶಕ್ತಿ ಮತ್ತು ದುರ್ಬಲತೆಯ ಮೂಲ. ಕಠಿಣ ಅಥವಾ ಅಸಮಂಜಸವಾದ ಮಾತುಗಳು ಸಂಬಂಧಗಳನ್ನು ಹಾಳುಮಾಡುತ್ತವೆ. ಚಾಣಕ್ಯನ ಪ್ರಕಾರ, ಶತ್ರುಗಳು ನಮ್ಮ ಮಾತನ್ನೇ ಆಯುಧವಾಗಿ ಬಳಸಬಹುದು. ಮಧುರ, ವಿನಮ್ರ ಮಾತು ಸ್ನೇಹವನ್ನು ಗಟ್ಟಿ ಮಾಡುತ್ತದೆ ಮತ್ತು ಶತ್ರುಗಳ ದಾಳಿಯಿಂದ ರಕ್ಷಿಸುತ್ತದೆ.
ದುಷ್ಚಟಗಳನ್ನು ತ್ಯಜಿಸಿ:
ವ್ಯಸನಗಳು ಮನುಷ್ಯನ ವಿವೇಕವನ್ನು ಕುಂದಿಸುತ್ತವೆ. ಅಮಲಿನ ಸ್ಥಿತಿಯಲ್ಲಿರುವ ವ್ಯಕ್ತಿ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಅಸಮರ್ಥನಾಗುತ್ತಾನೆ. ಇದನ್ನೇ ಶತ್ರುಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಹೀಗಾಗಿ, ಕೆಟ್ಟ ಅಭ್ಯಾಸಗಳಿಂದ ದೂರವಿರುವುದೇ ಶತ್ರುಗಳ ಮೇಲೆ ಗೆಲುವು ಸಾಧಿಸುವ ಮೊದಲ ಹೆಜ್ಜೆ ಎಂದು ಚಾಣಕ್ಯನು ಹೇಳುತ್ತಾನೆ.
ಶತ್ರುವಿನ ಬಗ್ಗೆ ಸಂಪೂರ್ಣ ತಿಳುವಳಿಕೆ ಇರಲಿ:
ಯಾವುದೇ ಯುದ್ಧದಲ್ಲಿ ಜಯ ಸಾಧಿಸಲು ಎದುರಾಳಿಯ ಶಕ್ತಿಯ ಅರಿವು ಅಗತ್ಯ. ನಿಮ್ಮ ಶತ್ರುಗಳ ಸ್ವಭಾವ, ಸಾಮರ್ಥ್ಯ ಮತ್ತು ದುರ್ಬಲತೆಗಳನ್ನು ತಿಳಿದಿದ್ದರೆ, ಅವರನ್ನು ಎದುರಿಸುವುದು ಸುಲಭವಾಗುತ್ತದೆ. ಚಾಣಕ್ಯನ ಪ್ರಕಾರ, ಜ್ಞಾನವೇ ಶತ್ರುಗಳ ವಿರುದ್ಧದ ಅತ್ಯಂತ ಬಲವಾದ ಆಯುಧ.
ಚಾಣಕ್ಯ ನೀತಿಯ ಪ್ರಕಾರ, ಶತ್ರುಗಳನ್ನು ನಿರ್ಲಕ್ಷ್ಯ ಮಾಡಬಾರದು. ಎಚ್ಚರಿಕೆ, ವಿವೇಕ ಮತ್ತು ಜ್ಞಾನ ಇದ್ದರೆ ಯಾವ ಶತ್ರುವನ್ನಾದರೂ ಸೋಲಿಸಲು ಸಾಧ್ಯ. ಸದಾ ಜಾಗ್ರತೆಯಿಂದಿರುವವನೇ ಜೀವನದಲ್ಲಿ ಜಯಶೀಲನಾಗುತ್ತಾನೆ ಎನ್ನುವುದು ಚಾಣಕ್ಯನ ಸ್ಪಷ್ಟ ಸಂದೇಶ.