ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Astro Tips: ಉಪ್ಪು ಕೈಜಾರಿ ಚೆಲ್ಲಿದರೆ ದುರಾದೃಷ್ಟವೇ? ಜ್ಯೋತಿಷ್ಯ ಶಾಸ್ತ್ರ ಹೇಳೋದೇನು?

ಉಪ್ಪು ಕೈಜಾರಿ ನೆಲಕ್ಕೆ ಚೆಲ್ಲಿದರೆ ದುರಾದೃಷ್ಟ ಬರುತ್ತದೆ ಎಂಬ ನಂಬಿಕೆ ಹಲವು ಸಂಸ್ಕೃತಿಗಳಲ್ಲಿದೆ. ಜ್ಯೋತಿಷ್ಯ ಪ್ರಕಾರ ಇದು ಚಂದ್ರ ಮತ್ತು ಶುಕ್ರ ಗ್ರಹಗಳ ಅಸಮತೋಲನದ ಸಂಕೇತವೆಂದು ಹೇಳಲಾಗುತ್ತದೆ. ಆದರೆ ಇದರ ಹಿಂದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಉಪ್ಪು ಚೆಲ್ಲಿದರೆ ಏನು ಮಾಡಬೇಕು ಎಂಬ ಪರಿಹಾರಗಳನ್ನೂ ಜ್ಯೋತಿಷ್ಯ ಸೂಚಿಸಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 31: ಉಪ್ಪು ಅಡುಗೆಯ ಪ್ರಮುಖ ಪದಾರ್ಥ ಮಾತ್ರವಲ್ಲ, ಅನೇಕ ಸಂಸ್ಕೃತಿಗಳಲ್ಲಿ ಅದನ್ನು ಶುಭ ಮತ್ತು ಸಮೃದ್ಧಿಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಉಪ್ಪು ಕೈಜಾರಿ ನೆಲಕ್ಕೆ ಚೆಲ್ಲಿದರೆ ಅದು ಅಶುಭದ ಸೂಚನೆ ಎಂದು ಹಲವರು ನಂಬುತ್ತಾರೆ. ಕೆಲವರ ಪ್ರಕಾರ ಇದು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳು, ಜಗಳಗಳು ಅಥವಾ ಆರ್ಥಿಕ ನಷ್ಟದ ಮುನ್ಸೂಚನೆಯಾಗಿರಬಹುದು. ಆದರೆ ಈ ನಂಬಿಕೆಯ ಹಿಂದಿನ ಇತಿಹಾಸ ಮತ್ತು ಜ್ಯೋತಿಷ್ಯಶಾಸ್ತ್ರದ ವ್ಯಾಖ್ಯಾನಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಕುತೂಹಲಕಾರಿ.

ಹಾಗಾದ್ರೆ ಬನ್ನಿ ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ(Astro Tips)ಏನು ಉಲ್ಲೇಖವಾಗಿದೆ? ಪರಿಹಾರ ಏನು? ಎಂಬುದನ್ನು ತಿಳಿದುಕೊಳ್ಳೋಣ.

ಉಪ್ಪು ಚೆಲ್ಲುವುದರ ಹಿಂದಿನ ಹಿನ್ನೆಲೆ

ಹಿಂದಿನ ಕಾಲದಲ್ಲಿ ಉಪ್ಪು ಬಹಳ ಅಮೂಲ್ಯ ವಸ್ತುವಾಗಿತ್ತು. ಅದನ್ನು ಪಡೆಯುವುದು ಸುಲಭವಾಗಿರಲಿಲ್ಲ ಮತ್ತು ಅದರ ಬೆಲೆಯೂ ಹೆಚ್ಚಾಗಿತ್ತು. ಹೀಗಾಗಿ ಉಪ್ಪನ್ನು ವ್ಯರ್ಥ ಮಾಡುವುದು ಸಂಪತ್ತಿನ ನಷ್ಟವೆಂದು ಪರಿಗಣಿಸಲಾಗುತ್ತಿತ್ತು. ಇದೇ ಕ್ರಮೇಣ ದುರಾದೃಷ್ಟದ ಸಂಕೇತ ಎಂಬ ನಂಬಿಕೆಗೆ ಕಾರಣವಾಯಿತು. ಕೆಲವು ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಉಪ್ಪು ಚೆಲ್ಲುವುದು ಕೆಟ್ಟ ಶಕ್ತಿಗಳನ್ನು ಆಹ್ವಾನಿಸುವುದಕ್ಕೆ ಸಮಾನ ಎಂದು ನಂಬಲಾಗುತ್ತಿತ್ತು. ಈ ದುರಾದೃಷ್ಟವನ್ನು ದೂರ ಮಾಡಲು ಎಡ ಭುಜದ ಹಿಂದೆ ಸ್ವಲ್ಪ ಉಪ್ಪು ಎಸೆಯುವ ಪದ್ಧತಿಯೂ ಇತ್ತು. ಇನ್ನೂ ಕೆಲವು ನಂಬಿಕೆಗಳ ಪ್ರಕಾರ ಉಪ್ಪು ಚೆಲ್ಲುವುದು ಜಗಳ, ಸಂಬಂಧಗಳಲ್ಲಿ ಬಿರುಕು ಅಥವಾ ಅನಿರೀಕ್ಷಿತ ಸಮಸ್ಯೆಗಳ ಸೂಚಕವೆಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯದಲ್ಲಿ ಉಪ್ಪು ಚೆಲ್ಲುವುದರ ಅರ್ಥ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಕಸ್ಮಿಕವಾಗಿ ಉಪ್ಪು ನೆಲಕ್ಕೆ ಬೀಳುವುದು ಚಂದ್ರ ಮತ್ತು ಶುಕ್ರ ಗ್ರಹಗಳ ಅಶುಭ ಪ್ರಭಾವವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನಸ್ಸಿನ ಅಶಾಂತಿ, ಒತ್ತಡ, ಭಾವನಾತ್ಮಕ ತೊಂದರೆಗಳು ಅಥವಾ ಕೆಲವು ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ ಎಂದು ನಂಬಲಾಗುತ್ತದೆ.

ಭಾನುವಾರ ಸೂರ್ಯಾರಾಧನೆ ಮಾಡಿದರೆ ಉದ್ಯೋಗದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ಪರಿಹಾರವಾಗಿ ಏನು ಮಾಡಬಹುದು?

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಶುಭವೆಂದು ಹೇಳಲಾಗುತ್ತದೆ:

  • "ಶ್ರೀಂ ಚಂದ್ರಾಯ ಕ್ಷಪಾಕರಾಯ ನಮಃ" ಮಂತ್ರವನ್ನು 108 ಬಾರಿ ಜಪಿಸುವುದು.
    ಹಸುವಿಗೆ ಅಕ್ಕಿ, ಹಾಲು ಅಥವಾ ಇತರ ಬಿಳಿ ಆಹಾರ ಪದಾರ್ಥಗಳನ್ನು ನೀಡುವುದು.
  • "ಓಂ ದ್ರಂ ದ್ರೀಂ ದ್ರೋಂ ಸಹ ಶುಕ್ರಾಯ ನಮಃ" ಮಂತ್ರವನ್ನು 108 ಬಾರಿ ಪಠಿಸುವುದು.
    ಹಸುವಿಗೆ ಹಸಿರು ಹುಲ್ಲು ನೀಡುವುದು.

ಆದಾಗ್ಯೂ, ಉಪ್ಪು ಚೆಲ್ಲುವುದು ದುರಾದೃಷ್ಟವನ್ನು ತರುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಇವು ಮುಖ್ಯವಾಗಿ ಸಾಂಸ್ಕೃತಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪರಂಪರೆಗಳ ಭಾಗ.