ಬೆಂಗಳೂರು: ಹಿಂದೂ ಧರ್ಮದಲ್ಲಿ ದೇವರ ಕೋಣೆಗೆ ಅತ್ಯಂತ ಪವಿತ್ರ ಸ್ಥಾನಮಾನ ನೀಡಲಾಗಿದೆ. ಮನೆಯಲ್ಲಿನ ದೇವರ ಕೋಣೆ ಕೇವಲ ಪೂಜೆ ಮಾಡುವ ಸ್ಥಳವಷ್ಟೇ ಅಲ್ಲ, ಅದು ಸಕಾರಾತ್ಮಕ ಶಕ್ತಿ, ನೆಮ್ಮದಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವರ ಕೋಣೆಯನ್ನು ಸ್ವಚ್ಛವಾಗಿ ಹಾಗೂ ಶಾಸ್ತ್ರೋಕ್ತ ನಿಯಮಗಳಿಗೆ ಅನುಗುಣವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ದೇವರ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ನಂಬಲಾಗಿದ್ದು, ಇವುಗಳಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಮಾನಸಿಕ ಅಶಾಂತಿ ಮತ್ತು ಕುಟುಂಬದ ಕಲಹಗಳು ಉಂಟಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.
ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ(Astro Tips)
ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು? ಇಟ್ಟರೆ ಏನಾಗುತ್ತದೆ ? ಎಂಬುದನ್ನು ತಿಳಿದುಕೊಳ್ಳೋಣ.
ಬೆಂಕಿಕಡ್ಡಿ ಮತ್ತು ಖಾಲಿ ಬೆಂಕಿಪೊಟ್ಟಣ
ಪೂಜೆಯ ಸಮಯದಲ್ಲಿ ದೀಪ, ಧೂಪ ಮತ್ತು ಅಗರಬತ್ತಿ ಹಚ್ಚುವುದು ಸಾಮಾನ್ಯ. ಆದರೆ ಅವುಗಳನ್ನು ಹಚ್ಚಿದ ನಂತರ ಬಳಸಿದ ಬೆಂಕಿಕಡ್ಡಿಗಳು ಅಥವಾ ಖಾಲಿ ಬೆಂಕಿಪೊಟ್ಟಣವನ್ನು ದೇವರ ಕೋಣೆಯಲ್ಲೇ ಬಿಟ್ಟುಬಿಡುವುದು ಶಾಸ್ತ್ರದ ಪ್ರಕಾರ ಸೂಕ್ತವಲ್ಲ. ಪೂಜೆ ಮುಗಿದ ಬಳಿಕ ಇಂತಹ ವಸ್ತುಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಹೇಳಲಾಗಿದೆ.
ಬಾಡಿದ ಅಥವಾ ಒಣಗಿದ ಹೂವುಗಳು
ದೇವರಿಗೆ ಅರ್ಪಿಸಿದ ಹೂವುಗಳು ಒಣಗಿದ ನಂತರ ಅವುಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಾರದು. ಬಾಡಿದ ಹೂವುಗಳು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಒಮ್ಮೆ ಪೂಜೆಗೆ ಬಳಸಿದ ಹೂವುಗಳನ್ನು ಮತ್ತೊಮ್ಮೆ ಬಳಸುವುದು ಸಹ ಶ್ರೇಯಸ್ಕರವಲ್ಲ ಎಂದು ನಂಬಲಾಗಿದೆ.
ಮುರಿದ ಅಥವಾ ಹಾನಿಗೊಳಗಾದ ವಿಗ್ರಹಗಳು
ದೇವರ ಕೋಣೆಯಲ್ಲಿ ಮುರಿದ, ಬಿರುಕು ಬಿದ್ದ ಅಥವಾ ಹಾನಿಗೊಳಗಾದ ದೇವರ ವಿಗ್ರಹಗಳನ್ನು ಇಡುವುದನ್ನು ತಪ್ಪಿಸಬೇಕು. ಇಂತಹ ವಿಗ್ರಹಗಳು ಮನೆಯ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಅವುಗಳನ್ನು ವಿಧಿ ವಿಧಾನಗಳೊಂದಿಗೆ ವಿಸರ್ಜಿಸುವುದು ಉತ್ತಮ.
ಅತಿಯಾದ ವಿಗ್ರಹಗಳು ಮತ್ತು ಪೂರ್ವಜರ ಫೋಟೋ
ಪೂಜಾ ಕೋಣೆಯಲ್ಲಿ ಅನಗತ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಗ್ರಹಗಳನ್ನು ಇಡುವುದನ್ನು ಕೆಲ ಶಾಸ್ತ್ರಗಳು ನಿರುತ್ಸಾಹಗೊಳಿಸುತ್ತವೆ. ಹಾಗೆಯೇ ಪೂರ್ವಜರ ಚಿತ್ರಗಳನ್ನು ದೇವರ ವಿಗ್ರಹಗಳ ಜೊತೆಗೆ ಇಡುವುದನ್ನು ಸಹ ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಪೂರ್ವಜರ ಚಿತ್ರಗಳಿಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಡುವುದು ಉತ್ತಮ.
ಅಗರಬತ್ತಿ ಮತ್ತು ದೀಪದ ಬೂದಿ
ಅಗರಬತ್ತಿ ಸುಟ್ಟ ಬಳಿಕ ಉಳಿಯುವ ಬೂದಿ ಹಾಗೂ ದೀಪದ ಹಳೆಯ ಬತ್ತಿಗಳನ್ನು ದೇವರ ಕೋಣೆಯಲ್ಲಿ ದಿನಗಟ್ಟಲೆ ಇಡಬಾರದು. ಪೂಜೆಯ ನಂತರ ಅವುಗಳನ್ನು ಸ್ವಚ್ಛಗೊಳಿಸುವುದರಿಂದ ಪೂಜಾ ಸ್ಥಳದ ಪಾವಿತ್ರ್ಯ ಮತ್ತು ಸ್ವಚ್ಛತೆ ಕಾಪಾಡಬಹುದು.
ದೇವರ ಕೋಣೆಯ ಸ್ವಚ್ಛತೆ ಏಕೆ ಮುಖ್ಯ?
ಶಾಸ್ತ್ರಗಳ ಪ್ರಕಾರ ದೇವರ ಕೋಣೆ ಸ್ವಚ್ಛವಾಗಿದ್ದರೆ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ನಿಯಮಿತವಾಗಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸುವುದು, ಅನಗತ್ಯ ವಸ್ತುಗಳನ್ನು ತೆಗೆದುಹಾಕುವುದು ಮತ್ತು ಭಕ್ತಿಭಾವದಿಂದ ಪೂಜೆ ಸಲ್ಲಿಸುವುದು ಕುಟುಂಬದ ನೆಮ್ಮದಿ ಹಾಗೂ ಸಂತೋಷಕ್ಕೆ ಸಹಕಾರಿ ಎಂದು ನಂಬಲಾಗಿದೆ.