ಮುಂಬೈ: ಮುಂಬೈಯ (Mumbai) ಗಣೇಶ ಚತುರ್ಥಿ ಉತ್ಸವವು (Ganesh Chaturthi) ಲಾಲ್ಬಾಗ್ಚಾ ರಾಜ (Lalbaugcha Raja) ಇಲ್ಲದೆ ಅಪೂರ್ಣವೆನಿಸುತ್ತದೆ. ಹಲವು ಗಣ್ಯರ ಭೇಟಿ, ಉದ್ದದ ಸಾಲುಗಳು, ವಿಗ್ರಹದ ವೈಭವ ಹೀಗೆ ಈ ಮಂಡಳಿ ಗಣೇಶೋತ್ಸವದ ತಿಂಗಳಿನಲ್ಲಿ ಸದಾ ಸುದ್ದಿಯಲ್ಲಿರುತ್ತದೆ. 1934ರಲ್ಲಿ ಲಾಲ್ಬಾಗ್ನ (ಆಗಿನ ಗಿರಣಗಾಂವ್) ಕೋಲಿ ಮೀನುಗಾರರು ಮತ್ತು ಸ್ಥಳೀಯ ವ್ಯಾಪಾರಿಗಳು ಕೈಗಾರಿಕಾ ಬದಲಾವಣೆಯಿಂದ ಮಾರುಕಟ್ಟೆ ಕಳೆದುಕೊಂಡಾಗ, ಮಾರುಕಟ್ಟೆ ಪಡೆದರೆ ಗಣೇಶನನ್ನು ಸ್ಥಾಪಿಸುವ ಶಪಥ ಮಾಡಿದರು. ಸಮುದಾಯದ ಮುಖಂಡರು ಮತ್ತು ಭೂಮಾಲೀಕ ರಾಜಾಬಾಯಿ ತಯ್ಯಾಬಲಿ ಬೆಂಬಲದಿಂದ ಜಮೀನು ದೊರೆಯಿತು. ಅಂತೆಯೇ ಅದೇ ವರ್ಷ ಸೆಪ್ಟೆಂಬರ್ 12ರಂದು ಮೊದಲ ಸಾರ್ವಜನಿಕ ಗಣೇಶೋತ್ಸವ ಆರಂಭವಾಯಿತು.
ಲಾಲ್ಬಾಗ್ಚಾ ರಾಜನಿಗೆ ಭಕ್ತರ ಮನದಾಸೆಗಳನ್ನು ಈಡೇರಿಸುವ ಶಕ್ತಿಯಿದೆ ಎನ್ನುವ ನಂಬಿಕೆ ಇದೆ. ಹೀಗಾಗಿ 10 ದಿನಗಳ ಗಣೇಶ ಚತುರ್ಥಿ ಅವಧಿಯಲ್ಲಿ ಗಣ್ಯರು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ದಿನಕ್ಕೆ 15 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.
1935ರಿಂದ ಗಣೇಶ ವಿಗ್ರಹ ರೂಪಿಸುವ ಜವಾಬ್ದಾರಿಯನ್ನು ಕಾಂಬ್ಳಿ ಕುಟುಂಬ ತೆಗೆದುಕೊಂಡಿದೆ. ರತ್ನಾಕರ್ ಕಾಂಬ್ಳಿ ಸೀನಿಯರ್ ಆರಂಭಿಸಿದ ಈ ಪರಂಪರೆಯನ್ನು ವೆಂಕಟೇಶ್ ಕಾಂಬ್ಳಿ, ರತ್ನಾಕರ್ ಕಾಂಬ್ಳಿ ಜೂನಿಯರ್ ಮತ್ತು ಸಂತೋಷ್ ಕಾಂಬ್ಳಿ ಮುಂದುವರಿಸಿದ್ದಾರೆ. ತುಪ್ಪ, ಕೇಸರಿ ಮತ್ತು ಮಸಾಲೆಯಿಂದ ಕೂಡಿದ ಬೂಂದಿ ಲಡ್ಡು ಲಾಲ್ಬಾಗ್ಚಾ ರಾಜನ ವಿಶೇಷ ಪ್ರಸಾದ.
ಈ ಸುದ್ದಿಯನ್ನು ಓದಿ: Viral Video: ರಸ್ತೆಯ ಮಧ್ಯದಲ್ಲಿ ಅನಿರೀಕ್ಷಿತವಾಗಿ ಇಳಿದ ಹಾಟ್ ಏರ್ ಬಲೂನ್; ವಿಡಿಯೊ ವೈರಲ್
ಲಾಲ್ಬಾಗ್ಚಾ ರಾಜ ವಿಗ್ರಹವು ಸುಮಾರು 18-20 ಅಡಿ ಎತ್ತರವಿದ್ದು, ಮುಂಬೈಯ ಅತಿ ಎತ್ತರದ ಗಣೇಶ ವಿಗ್ರಹಗಳಲ್ಲಿ ಒಂದಾಗಿದೆ. 2018ರ ಪ್ಲಾಸ್ಟಿಕ್ ನಿಷೇಧದ ನಂತರ ಪರಿಸರ ಸ್ನೇಹಿ ವಿಗ್ರಹವನ್ನು ರಚಿಸಲಾಯಿತು. ಜೂನ್ 14ರಂದು ಶ್ರೀ ಕಾಂಬ್ಳಿ ಆರ್ಟ್ಸ್ನ ಕಾರ್ಯಾಗಾರದಲ್ಲಿ ಅಧ್ಯಕ್ಷ ಬಾಲಾಸಾಹೇಬ್ ಸುದಾಮ್ ಕಾಂಬ್ಳೆ ನೇತೃತ್ವದಲ್ಲಿ ಗಣೇಶ ಮುಹೂರ್ತ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಂಡಳಿಯ ರಸೀದಿ ಪುಸ್ತಕಗಳನ್ನು ಖಜಾಂಚಿಯವರು ಪೂಜಿಸಿದರು.
ದರ್ಶನಕ್ಕೆ ಸಾಲುಗಳು
- ನವಸಾಚಿ ಲೈನ್: ಭಕ್ತರು ವಿಗ್ರಹದ ಪಾದ ಸ್ಪರ್ಶಿಸಲು 25-40 ಗಂಟೆಗಳ ಕಾಲ ಕಾಯಬೇಕು.
- ಮುಖ ದರ್ಶನ ಲೈನ್: ದೂರದಿಂದ ವಿಗ್ರಹ ವೀಕ್ಷಣೆಗೆ 3-4 ಗಂಟೆಗಳ ಕಾಲ ಕಾಯಬೇಕು.
ಮೂರ್ತಿ ವಿಸರ್ಜನೆಯನ್ನು 35 ಆಯೋಜಕರು ಮತ್ತು 1,200ಕ್ಕೂ ಹೆಚ್ಚು ಸ್ವಯಂಸೇವಕರು ನಿರ್ವಹಿಸುತ್ತಾರೆ. 22 ಗಂಟೆಗಳ ವಿಸರ್ಜನಾ ಮೆರವಣಿಗೆಯು ಪರೇಲ್, ಸಿಪಿ ಟ್ಯಾಂಕ್, ಆಗ್ರಿಪಾಡ ಮೂಲಕ ಗಿರಗಾಂವ್ ಚೌಪಟ್ಟಿಯ ಸಮುದ್ರದಲ್ಲಿ ವಿಗ್ರಹವನ್ನು ನಿಮಜ್ಜನ ಮಾಡು ಮೂಲಕ ಮುಕ್ತಾಯಗೊಳ್ಳುತ್ತದೆ.