ಬೆಂಗಳೂರು, ಮಾ. 3: 2026ರ ಈ ವರ್ಷದ ಮೊದಲ ಖಗ್ರಾಸ ಚಂದ್ರ ಗ್ರಹಣವು (Chandra Grahan) ಇಂದು ಸಂಭವಿಸುತ್ತಿದ್ದು, ಇದೇ ದಿನ ಪೂರ್ಣಿಮೆಯೂ ಇರುವುದರಿಂದ ಧಾರ್ಮಿಕವಾಗಿ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಗ್ರಹಣದ ಪರಿಣಾಮದಿಂದ ಕೆಲವರು ಭಾವನಾತ್ಮಕ, ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಅನುಭವಿಸಬಹುದು ಎಂಬ ನಂಬಿಕೆ ಇದೆ. ಭಾರತದಲ್ಲಿಯೂ ಈ ಖಗ್ರಾಸ ಚಂದ್ರ ಗ್ರಹಣ ಗೋಚರಿಸಲಿದೆ.
ಶಾಸ್ತ್ರಗಳ ಪ್ರಕಾರ ಗ್ರಹಣ ಕಾಲದಲ್ಲಿ ದೇವರ ಮೂರ್ತಿಗಳಿಗೆ ನೇರ ಪೂಜೆ ಸಲ್ಲಿಸುವುದು, ದೇವರ ಕೋಣೆಯ ಬಾಗಿಲು ತೆರೆದಿಡುವುದು ಮುಂತಾದವುಗಳನ್ನು ತಪ್ಪಿಸಬೇಕು ಎಂದು ಹೇಳಲಾಗಿದೆ. ಆದರೆ ಇದೇ ಸಮಯದಲ್ಲಿ ಮಂತ್ರ ಜಪ, ಧ್ಯಾನ ಮತ್ತು ಪ್ರಾರ್ಥನೆ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಚಂದ್ರ ಗ್ರಹಣದ ದೋಷ ನಿವಾರಣೆಗೆ ವಿಶೇಷ ಪೂಜೆ ಅಥವಾ ಮಂತ್ರ ಜಪ ಮಾಡುವುದು ಶ್ರೇಯಸ್ಕರ. ಗ್ರಹಣ ಸಮಯದಲ್ಲಿ ಚಂದ್ರದೇವನ ಆರಾಧನೆಗೆ ವಿಶೇಷ ಮಹತ್ವವಿದ್ದು, ಈ ಅವಧಿಯಲ್ಲಿ ಭಕ್ತಿಯಿಂದ ಮಂತ್ರಗಳನ್ನು ಜಪಿಸುವುದರಿಂದ ದೋಷಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ.
ನವಗ್ರಹಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಚಂದ್ರದೇವನ ಆಶೀರ್ವಾದ ಪಡೆಯಲು ಹಾಗೂ ಗ್ರಹಣದ ಅಶುಭ ಪರಿಣಾಮಗಳನ್ನು ತಗ್ಗಿಸಿಕೊಳ್ಳಲು, ಚಂದ್ರ ಗ್ರಹಣದ ವೇಳೆ ಈ ಕೆಳಗಿನ ಮಂತ್ರಗಳನ್ನು ಭಕ್ತಿಯಿಂದ ಪಠಿಸುವುದು ಉತ್ತಮ ಎಂದು ಶಾಸ್ತ್ರಗಳು ಸೂಚಿಸುತ್ತವೆ:
- ಚಂದ್ರ ಬೀಜ ಮಂತ್ರ
ಓಂ ಶ್ರಾಂ ಶ್ರೀಂ ಶ್ರೌಂ ಸಃ
ಚಂದ್ರಾಯ ನಮಃ ||
- ಚಂದ್ರ ಮಂತ್ರ
ಓಂ ಎಂ ಕ್ಲೀಂ ಸೋಮಾಯ ನಮಃ ||
2026ರ ಮೊದಲ ಚಂದ್ರಗ್ರಹಣ ಇಂದು; ಪಾಲಿಸಬೇಕಾದ ನಿಯಮಗಳು, ಧಾರ್ಮಿಕ ಮಹತ್ವ ಏನು ಗೊತ್ತಾ?
- ಚಂದ್ರ ಗಾಯತ್ರಿ ಮಂತ್ರ:
ಓಂ ಕ್ಷೀರ ಪುತ್ರಾಯ ವಿಧ್ಮಹೇ
ಅಮೃತ ತತ್ವಾಯ ಧೀಮಹೀ
ತನ್ನೋ ಸೋಮ ಪ್ರಚೋದಯಾತ್ |
- ನವಗ್ರಹ ಚಂದ್ರ ಶಾಂತಿ ಮಂತ್ರ:
ಓಂ ದಧಿಶಂಖತುಷಾರಾಭಂ | ಕ್ಷೀರೋದಾರ್ಣವ ಸಂಭವಂ |
ನಮಾಮಿ ಶಶಿನಂ ಸೋಮಂ | ಶಂಭೋರ್ಮುಕುಟ ಭೂಷಣಂ ||
- ಚಂದ್ರ ಗ್ರಹಣ ಮಂತ್ರ:
ಓಂ ಶ್ರಾಂ ಶ್ರೀಂ ಶ್ರೌಂ ಸಃ
ಓಂ ಎಂ ಕ್ಲೀಂ ಸೋಮಾಯ ನಮಃ ||
ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರನಿಗೆ ಸಮರ್ಪಿತವಾದ ಮಂತ್ರಗಳನ್ನು ಭಕ್ತಿಯಿಂದ ಜಪಿಸಿದರೆ, ಗ್ರಹಣದ ಅಡ್ಡ ಪರಿಣಾಮಗಳು ನಮ್ಮ ಮೇಲೆ ಬೀರುವುದಿಲ್ಲವೆಂಬ ನಂಬಿಕೆ ಇದೆ. ಇದೇ ರೀತಿ ಮಂತ್ರ ಜಪ ಹಾಗೂ ಪ್ರಾರ್ಥನೆಯ ಮೂಲಕ ಚಂದ್ರ ಗ್ರಹಣದ ದೋಷವೂ ನಿವಾರಣೆಯಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.
ಇನ್ನು ಚಂದ್ರ ದೇವರ ಮಹಿಮೆ ಚಂದ್ರ ಹಿಂದೂ ಜ್ಯೋತಿಷ್ಯದ ಪ್ರಕಾರ ನವಗ್ರಹಗಳಲ್ಲಿ ಒಬ್ಬನು. ಚಂದ್ರನನ್ನು ಸೋಮ, ಇಂದು, ಆತ್ರಿಸುತ, ತಾರಾಧೀಪ, ನಿಶಾಕರ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಬಿಳಿ ಕುದುರೆಗಳ ರಥದಲ್ಲಿ ಸಂಚರಿಸುವ ಚಂದ್ರ ದೇವರು ಕೈಯಲ್ಲಿ ಕಮಲವನ್ನು ಹಿಡಿದಿರುವ ರೂಪದಲ್ಲಿ ವರ್ಣಿಸಲಾಗಿದೆ.
ಚಂದ್ರನು ಮನಸ್ಸಿನ ಕಾರಕ ಗ್ರಹ. ಅವನ ಆರಾಧನೆಯಿಂದ ಮಾನಸಿಕ ಒತ್ತಡ, ದುಃಖ, ಆತಂಕಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆಯಿದೆ. ಸಂತೋಷ ಮತ್ತು ಶಾಂತಿಯ ಸಂಕೇತವೆಂದೂ ಚಂದ್ರನನ್ನು ಪರಿಗಣಿಸಲಾಗುತ್ತದೆ.