ಅಧಿಕಾರದ ಗದ್ದುಗೆಯೇರುವ ರಾಜಕೀಯ ಪಕ್ಷವೊಂದು ತಾನು ನಡೆದದ್ದೇ ಹಾದಿ ಎಂಬ ಠೇಂಕಾರ ವನ್ನು ಮೆರೆಯುವಂತಿರುವುದಿಲ್ಲ. ಆ ಪಕ್ಷದ ಅಭ್ಯರ್ಥಿಗಳನ್ನು ತಮ್ಮ ಪ್ರತಿನಿಧಿಗಳನ್ನಾಗಿ ಚುನಾ ಯಿಸಿದ ಮತದಾರರಿಗೆ ಅದು ಸರ್ವಕಾಲಕ್ಕೂ ಉತ್ತರದಾಯಿಯಾಗಬೇಕಾಗುತ್ತದೆ.
ಅಂತೆಯೇ, ಸ್ಥಾಪಿತ ಸರಕಾರವೊಂದು ನನ್ನ ಆಡಳಿತ ನಿರ್ವಹಣೆಯಲ್ಲಿ ಮತ್ತು ಜನಕಲ್ಯಾಣದ ಬಾಬತ್ತಿನಲ್ಲಿ ಹಾದಿ ತಪ್ಪದಂತಿರುವುದಕ್ಕೂ, ಕಾಲಾನುಕಾಲಕ್ಕೆ ಅದರ ಕಿವಿ ಹಿಂಡುವ ಸಮರ್ಥ ವಿರೋಧ ಪಕ್ಷವೂ ಇರಬೇಕಾಗುತ್ತದೆ. ಅದುವೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗು. ಹೀಗೆ ಆಡಳಿತಾರೂಢರು ಮತ್ತು ವಿಪಕ್ಷೀಯರು ಮುಖಾಮುಖಿಯಾಗುವ ವ್ಯವಸ್ಥೆಯೊಂದರಲ್ಲಿ ಟೀಕೆ-ಟಿಪ್ಪಣಿಗಳು ಒಪ್ಪಿತ ಸ್ಥಿತಿಯೇ ಆಗಿದೆ. ಹಾಗಂತ ಅದು ಸಭ್ಯತೆಯ ಎಲ್ಲೆ ಮೀರಬಾರದು.
ಇದನ್ನೂ ಓದಿ: Vishwavani Editorial: ಬಿಹಾರದಲ್ಲಿ ಕದನ ಕುತೂಹಲ
ಆದರೆ, ಕಳೆದ ಕೆಲ ದಿನಗಳಿಂದ, ಎರಡು ರಾಜಕೀಯ ಪಕ್ಷಗಳ ನಾಯಕರಿಬ್ಬರು ಪರಸ್ಪರರ ವಿರುದ್ಧ ತೂರಿ ಬಿಟ್ಟ ಕೂರಂಬುಗಳು ವೈಯಕ್ತಿಕ ಚಾರಿತ್ರ್ಯವಧೆಯ ಮಟ್ಟಕ್ಕೂ ಇಳಿದಿದ್ದು ವಿಷಾದನೀಯ. ಜತೆಗೆ, ಈ ಬೆಳವಣಿಗೆಯನ್ನು ‘ಪ್ರಚಾರ ಗಿಟ್ಟಿಸುವ’ ತಂತ್ರವಾಗಿ ಅವರು ಒಂದೊಮ್ಮೆ ಲೆಕ್ಕಿಸಿದ್ದರೆ, ಅದು ಅಸಹ್ಯದ ಸಂಗತಿಯೇ ಸರಿ.
ಏಕೆಂದರೆ, ನೋವುಂಟು ಮಾಡುವ ಮಾತನ್ನು ಮೊದಲಿಗೆ ಯಾರೇ ಆಡಿದ್ದರೂ, ನಾಲ್ಕು ಗೋಡೆಗಳ ಮಧ್ಯೆ ಪರಸ್ಪರರು ಅದನ್ನು ಇತ್ಯರ್ಥಪಡಿಸಿಕೊಂಡು, ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಧ್ಯ ವಿತ್ತು. ಆದರೆ ಆಗಿದ್ದೇ ಬೇರೆ. ಸೈದ್ಧಾಂತಿಕ ನೆಲೆಯಲ್ಲಿ ನಡೆಯಬೇಕಾದ ಚರ್ಚೆ ಹೀಗೆ ಕೆಳಮಟ್ಟಕ್ಕೆ ಇಳಿದಾಗ, ಚರ್ಚೆಯ ಮೂಲ ಆಶಯ ಮೂಲೆಗುಂಪಾಗುವುದು ಒಂದೆಡೆಯಾದರೆ, ಹಾಗೆ ಕೆಸರೆರ ಚಾಟದಲ್ಲಿ ತೊಡಗಿಸಿಕೊಳ್ಳುವ ನಾಯಕರನ್ನು ಜನರು ಗಂಭೀರವಾಗಿ ಪರಿಗಣಿಸದಿರುವ ಸಾಧ್ಯತೆ ಗಳೂ ಇವೆ