ಇಬ್ಬರ ಪೈಕಿ ಯಾರೊಬ್ಬರೂ ಮಣಿಯುತ್ತಿಲ್ಲ, ಅಹಮಿಕೆಯನ್ನು ತಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರಿಬ್ಬರ ನಡುವಿನ ದ್ವೇಷದ ಬೆಂಕಿ ಅವರನ್ನು ಮಾತ್ರವೇ ಸುಡದೆ, ಮಿಕ್ಕವರಿಗೂ ಹಬ್ಬಿಕೊಳ್ಳುವ ಭಯವನ್ನು ಹುಟ್ಟು ಹಾಕಿದೆ. ಇದು ಇಸ್ರೇಲ್ ಮತ್ತು ಇರಾನ್ ನಡುವಿನ ಹಣಾಹಣಿ ತಾರಕಕ್ಕೆ ಏರಿರುವ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಪರಿಸ್ಥಿತಿ. ಇದಕ್ಕೆ ಕಾರಣವಾಗಿರುವುದು, ರಣಾಂಗಣಕ್ಕೆ ಅಮೆರಿಕವು ಪ್ರವೇಶಿಸಿರುವ ಬೆಳವಣಿಗೆ.
ಇರಾನ್ ದೇಶದ ಮೂರು ಅಣುಸ್ಥಾವರಗಳ ಮೇಲೆ ಅಮೆರಿಕ ವೈಮಾನಿಕ ದಾಳಿಯನ್ನು ನಡೆಸಿದ್ದು ಇದು ಪರಮಾಣು ಯುದ್ಧಕ್ಕೆ ನಾಂದಿ ಹಾಡಬಹುದೇ ಎಂಬ ಭೀತಿಯು ಜಾಗತಿಕ ಸಮುದಾಯದಲ್ಲಿ ಹೆಚ್ಚಲು ಕಾರಣವಾಗಿದೆ. ಇಷ್ಟು ದಿನ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಹಣಾಹಣಿಯನ್ನು ನೋಡಿ ಕಂಗೆಟ್ಟವರಿಗೆ, ಈ ಬೆಳವಣಿಗೆ ಮತ್ತೊಂದು ಆಘಾತವಾಗಿದೆ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ: Vishwavani Editorial: ಮತ್ತೆ ಕವಿದ ಯುದ್ಧದ ಕಾರ್ಮೋಡ
ಅಣ್ವಸ್ತ್ರ ಕೇಂದ್ರಗಳ ಮೇಲೆಯೇ ಎರಗುವ ಮೂಲಕ ಅಮೆರಿಕವು ಎಚ್ಚರಿಕೆ ನೀಡಿದ್ದರ ಹೊರತಾ ಗಿಯೂ ಇರಾನ್ ಜಗ್ಗದೆ, ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ಮತ್ತಷ್ಟು ಮುಂದುವರಿಸಿದೆ. ಇಸ್ರೇಲ್ನ ರಾಜಧಾನಿ ಟೆಲ್ ಅವಿವ್, ಹೈಫಾ, ಜೆರುಸಲೇಂ ಸೇರಿದಂತೆ 10ಕ್ಕೂ ಹೆಚ್ಚು ನಗರಗಳ ಮೇಲೆ 30ಕ್ಕೂ ಹೆಚ್ಚಿನ ಖಂಡಾಂತರ ಕ್ಷಿಪಣಿಗಳ ದಾಳಿಯನ್ನು ಇರಾನ್ ನಡೆಸಿದ್ದು, ನಾಗರಿಕರನ್ನು ಸುರಕ್ಷಿತ ಸ್ಥಳಗಳು ಮತ್ತು ಬಂಕರ್ಗಳಿಗೆ ಸ್ಥಳಾಂತರಿಸಲಾಗಿದೆ ಎಂಬುದು ಲಭ್ಯ ಮಾಹಿತಿ.
ಕಳೆದ 3-4 ವರ್ಷಗಳಿಂದ ವಿಶ್ವದ ವಿವಿಧ ಭಾಗಗಳಲ್ಲಿ ಇಂಥ ಸಂಘರ್ಷದ ವಾತಾವರಣ ಭುಗಿಲೆದ್ದಿ ದ್ದರೂ, ‘ವಿಶ್ವಸಂಸ್ಥೆ’ಯು ಸೂಕ್ತ ಕ್ರಮಕ್ಕೆ ಅಥವಾ ಪರಸ್ಪರ ಸಮಾಲೋಚನೆಗಳಿಗೆ ಭೂಮಿಕೆ ಯನ್ನು ಕಲ್ಪಿಸುವ ಗೋಜಿಗೇ ಹೋಗದಿರುವುದರ ಬಗ್ಗೆಯೂ ಸಾಕಷ್ಟು ಟೀಕೆ- ಟಿಪ್ಪಣಿಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ, ಯಾರೂ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಎಲ್ಲೆಲ್ಲೂ ಅಹಮಿಕೆ ಯ ಹೇಷಾರವವೇ. ಇವರ ಗದ್ದಲದಲ್ಲಿ ಶಾಂತಿಪ್ರಿಯರ ಕೂಗು ಅರಣ್ಯರೋದನ ಆಗಿದೆ, ಅಷ್ಟೇ!