ಕೊಲ್ಲಿ ಯುದ್ಧ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ ಇರಾನಿನ ಇಡೀ ನಾಗರೀಕತೆಯೇ ಸರ್ವ ನಾಶವಾಗಲಿದೆ’ ಎಂದು ಗುಡುಗಿದ್ದಾರೆ. ಇದು ಇರಾನಿನಲ್ಲಿ ಮತ್ತಷ್ಟು ಮಾರಣಹೋಮಕ್ಕೆ ನಾಂದಿ ಹಾಡುವ ಆತಂಕವನ್ನು ಸೃಷ್ಟಿಸಿದೆ. ಇಂಥ ವಿಪರೀತಗಳನ್ನು ತಡೆಯ ಬೇಕಾದ ಏಕೈಕ ಶಕ್ತಿಯೆಂದರೆ ಅದು ವಿಶ್ವಸಂಸ್ಥೆ.
ಆದರೆ, ಅದೇಕೆ ಸುಮ್ಮನಿದೆ ?, ಅಮೆರಿಕದ ದಮನಕಾರಿ ನೀತಿಗೆ ಅದು ಲಗಾಮು ಹಾಕುತ್ತಿಲ್ಲವೇಕೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡಿವೆ. ‘ಆಪರೇಷನ್ ಎಪಿಕ್ ಫ್ಯೂರಿ’ ಎಂಬ ಹೆಸರಿನಲ್ಲಿ ಇಸ್ರೇಲ್ ಜೊತೆಗೂಡಿ ಅಮೆರಿಕ, ಇರಾನ್ ಮೇಲೆ ದಾಳಿ ನಡೆಸಿ ಇಂದಿಗೆ 40 ದಿನಗಳಾಗಿವೆ. ತನ್ನ
ಸಾಮ್ರಾಜ್ಯಶಾಹಿ ನೀತಿಯ ಭಾಗವಾಗಿ ಅಮೆರಿಕವು ಇರಾನ್ನಲ್ಲಿರುವ ತೈಲ ಸಂಪತ್ತನ್ನು ವಶ ಮಾಡಿಕೊಳ್ಳಲು ಯುದ್ಧವೆಂಬ ವಿನಾಶಕಾರಿ ನಾಟಕವಾಡುತ್ತಿದೆ ಎಂಬುದು ರಹಸ್ಯವೇನೂ ಅಲ್ಲ. ಇರಾನ್ನ ಸರ್ವಾಧಿಕಾರಿ ಆಡಳಿತ ಅಲ್ಲಿನ ಪ್ರಜೆಗಳ ಹಕ್ಕನ್ನು ದಮನ ಮಾಡುತ್ತಿದೆ ಎಂಬ ಅಮೆರಿಕದ ವಾದವನ್ನು ಒಪ್ಪಿಕೊಂಡರೂ, ಅಲ್ಲಿ ಆಡಳಿತ ಬದಲಾವಣೆಯನ್ನು ಮಾಡಬೇಕಿರು ವುದು ಸ್ಥಳೀಯ ಜನತೆ.
ಇದನ್ನೂ ಓದಿ: US- Iran War: ಪಾಕಿಸ್ತಾನ ಮಧ್ಯಸ್ಥಿಕೆ, ಅಮೆರಿಕ-ಇರಾನ್ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ
ಇಂದಿನ ದಾಳಿ, ಪ್ರತಿ ದಾಳಿಗಳಲ್ಲಿ ಸಂತ್ರಸ್ತರಾಗುತ್ತಿವವರು ಕೊಲ್ಲಿ ರಾಷ್ಟ್ರದ ಜನತೆ. ಅಮೆರಿಕ ಇರಾನಿನ ಸೇನಾ ನೆಲೆಗಳ ಮೇಲೆ, ಅಲ್ಲಿನ ಶಸ್ತ್ರಾಗಾರಗಳ ಮೇಲೆ ದಾಳಿ ನಡೆಸಿದರೆ ಅದು ಯುದ್ಧ ತಂತ್ರದ ಭಾಗ ಎನ್ನಬಹುದು. ಆದರೆ ಅಲ್ಲಿನ ಸಮಗ್ರ ಮೂಲಸೌಕರ್ಯಗಳನ್ನು ನಾಶ ಮಾಡು ತ್ತಿರುವುದು, ತೈಲಾಗಾರಗಳ ಮೇಲೆ ಬಾಂಬ್ಗಳನ್ನು ಸುರಿಯುವುತ್ತಿರುವುದು ಅಕ್ಷಮ್ಯ. ಈಗಲಾ ದರೂ ವಿಶ್ವಸಂಸ್ಥೆ ಯುದ್ಧದ ಅನಾಹುತಗಳ ಜಾಗತಿಕ ಮಟ್ಟದಲ್ಲಿ ಅಭಿಪ್ರಾಯ ರೂಪಿಸಬೇಕು.
ಗಟ್ಟಿ ಧ್ವನಿಯಲ್ಲಿ ಯುದ್ಧದಾಹಿ ರಾಷ್ಟ್ರಗಳ ವಿದ್ವಂಸಕಾರಿ ಕೃತ್ಯಗಳನ್ನು ಖಂಡಿಸಬೇಕು. ನೈಸರ್ಗಿಕ ವರದಾನವಾದ ಇಂಧನ ಯಾರದ್ದೋ ಹುಚ್ಚಾಟದಲ್ಲಿ ಈಗಲೇ ಖಾಲಿಯಾಗಬಾರದು. ಅದು ನಾಶ ವಾಗಬಾರದು. ನೈಸರ್ಗಿಕ ಕೊಡುಗೆಗಳ ಲಾಭ ಜಗತ್ತಿನ ಎಲ್ಲಾ ಜನರಿಗೂ ಸಿಗಬೇಕು. ಇನ್ನು ಎರಡನೆ ಯದ್ದು - ಅಮೆರಿಕ, ಇಸ್ರೇಲ್ ನಡೆಯಿಂದಾಗಿ ಜಗತ್ತಿಗೀಗ ತೃತೀಯ ಮಹಾಯುದ್ಧದ ಭೀತಿ ಆವರಿಸಿದೆ. ಅದನ್ನು ತಡೆಯುವುದು ಸಹ ವಿಶ್ವಸಂಸ್ಥೆಯ ಜವಾಬ್ದಾರಿಯಾಗಿದೆ.