ಪಾಕ್ ಕೃಪಾಪೋಷಿತ ಉಗ್ರರು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆಸಿದ 26 ಅಮಾಯಕರ ಮಾರಣ ಹೋಮಕ್ಕೆ ಪ್ರತಿಯಾಗಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಕೈಗೊಂಡ ಭಾರತವು ಪಾಕಿಸ್ತಾನಕ್ಕೆ ಸರಿಯಾಗೇ ಬಿಸಿಮುಟ್ಟಿಸಿದ್ದು ಜಗಜ್ಜಾಹೀರು ಸಂಗತಿ. ಇದರ ತೀವ್ರತೆ ಯನ್ನು ತಾಳಲಾಗದೆ ಪಾಕಿಸ್ತಾನವು ಕದನವಿರಾಮದ ಘೋಷಣೆಯಾಗುವಂತೆ ನೋಡಿಕೊಂಡಿ ದ್ದೂ ಗೊತ್ತಿರುವಂಥದ್ದೇ.
ಇಷ್ಟಾದ ಮೇಲೆ ಪಾಕಿಸ್ತಾನ ಪಾಠವನ್ನು ಕಲಿಯಬೇಕಿತ್ತು. ಆದರೆ ‘ದೊಡ್ಡಣ್ಣ’ ಅಮೆರಿಕ ಜತೆಗಿದೆ ಯೆಂಬ ಭಂಡಧೈರ್ಯದಲ್ಲಿ ಅದು ಅಂತಾರಾಷ್ಟ್ರೀಯ ಗಡಿಗುಂಟ ಮತ್ತೆ ಕಿತಾಪತಿಯನ್ನು ಶುರುವಿಟ್ಟುಕೊಂಡು, ಭಾರತದ ಮೇಲೆ ಮತ್ತೊಮ್ಮೆ ಎರಗುವ ಸೂಚನೆಯನ್ನೂ ಪರೋಕ್ಷವಾಗಿ ನೀಡುತ್ತಿದೆ.
ಇದನ್ನೂ ಓದಿ: Vishwavani Editorial: ವನ್ಯಜೀವಿಗಳಿಗಿದು ಕಾಲವಲ್ಲ
ಪಾಕಿಸ್ತಾನದ ಈ ಜಾಯಮಾನ ಹೊಸದೇನಲ್ಲ. ಹೀಗಾಗಿ, ಅದು ಮತ್ತೊಮ್ಮೆ ಕಾಲು ಕೆರೆದುಕೊಂಡು ಸಂಘರ್ಷಕ್ಕೆ ಬಂದರೆ ಸನ್ನದ್ಧವಾಗಿರಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡಿರುವ ಭಾರತ, ಅದಕ್ಕೆ ತಕ್ಕಂಥ ಸಜ್ಜಿಕೆಗಳನ್ನು ಈಗಾಗಲೇ ಮಾಡಿಕೊಂಡಿದೆ. ಉತ್ತರ ಪ್ರದೇಶದ ಲಖನೌನ ಉತ್ಪಾದನಾ ಘಟಕವು ತಯಾರಿಸಿರುವ ಬ್ರಹ್ಮೋಸ್ ಕ್ಷಿಪಣಿಯ ೧ನೇ ಬ್ಯಾಚ್ ಬಿಡುಗಡೆಯಾಗಿರು ವುದು ಇದಕ್ಕೆ ಸಾಕ್ಷಿ.
ಭಾರತದ ಸಾರ್ವಭೌಮತೆಯ ರಕ್ಷಣೆಗೆ ಇಂಥ ವಿವಿಧ ನೆಲೆಗಟ್ಟಿನ ಸನ್ನದ್ಧತೆಗಳು ಅಗತ್ಯವಾಗಿವೆ. ಈ ಸಂದರ್ಭದಲ್ಲಿ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ‘ಪಾಕಿಸ್ತಾನದ ಪ್ರತಿ ಇಂಚೂ ಬ್ರಹ್ಮೋಸ್ನ ಗುರಿಯಲ್ಲಿದೆ; ಈ ಕ್ಷಿಪಣಿಯಿಂದ ಪಾಕ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆಪರೇಷನ್ ಸಿಂದೂರ್ ಟ್ರೇಲರ್ ಮಾತ್ರವೇ ಆಗಿತ್ತು, ಪಿಕ್ಚರ್ ಇನ್ನೂ ಬಾಕಿಯಿದೆ’ ಎಂದು ಎಚ್ಚರಿಸಿರುವುದು ಸರಿಯಾಗೇ ಇದೆ.
ಎಲ್ಲಕ್ಕಿಂತ ಮುಖ್ಯವಾಗಿ ಒಂದೆಡೆ ‘ಯುದ್ಧಗಳನ್ನು ನಿಲ್ಲಿಸುವುದರಲ್ಲಿ ನಾನು ಪ್ರವೀಣ’ ಎಂದು ಹೇಳಿಕೊಳ್ಳುವ, ಮತ್ತೊಂದೆಡೆ ಭಾರತದ ಮೇಲೆ ಎರಗುವಂತೆ ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಈ ವಾಸ್ತವ ಅರಿವಾಗಬೇಕು.