ರಾಜ್ಯದ ಮನೋಹರ ನೀರಿನ ತಾಣ ಮುತ್ತತ್ತಿಯಲ್ಲಿ ಮೊನ್ನೆ ನಡೆದ ದುರ್ಘಟನೆ ವಿಷಾದ ಮೂಡಿಸುವಂಥದು. ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯ ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದಾರೆ. ಫೋಟೋಗೆ ಪೋಸ್ ನೀಡುತ್ತಿದ್ದಾಗ ನೀರಿನ ಸೆಳೆತ ಹೆಚ್ಚಾಗಿ, ಒಬ್ಬರು ಮುಳುಗಿದ್ದು, ಅವರನ್ನು ಕಾಪಾಡಲು ಹೋದ ಇತರರೂ ಮುಳುಗಿದ್ದಾರೆ.
ಪ್ರವಾಸಿಗರ ನೆಚ್ಚಿನ ತಾಣವಾಗಿರುವ, ರಾಜಧಾನಿಯ ಸಮೀಪದಲ್ಲೂ ಇರುವ ಮುತ್ತತ್ತಿ ಕಾವೇರಿ ತೀರದಲ್ಲಿ ಆಗಾಗ ಇಂತಹ ಘಟನೆಗಳು ವರದಿಯಾಗಿದ್ದು, ಮತ್ತೆ ಸುರಕ್ಷತೆ ಪ್ರಶ್ನೆ ಎದುರಾಗಿದೆ. ಇಂಥ ದುರ್ಘಟನೆಗಳು ನಡೆದಾಗೊಮ್ಮೆ ಸ್ಥಳೀಯಾಡಳಿತ, ಸರಕಾರ ಎಚ್ಚೆತ್ತು ಕೊಳ್ಳುತ್ತದೆ. ಭದ್ರತೆ ಏರ್ಪಡಿಸುತ್ತದೆ. ಕೊಂಚ ಕಾಲದ ಬಳಿಕ ಮತ್ತೆ ನಿರ್ಲಕ್ಷ್ಯ ತಲೆದೋರುತ್ತದೆ.
ಇದನ್ನೂ ಓದಿ: Mandya News: ಮಂಡ್ಯದಲ್ಲಿ ಘೋರ ಘಟನೆ; ನೀರಿನ ಸಂಪ್ಗೆ ಬಿದ್ದು 2 ವರ್ಷದ ಮಗು ಸಾವು
ಮುತ್ತತ್ತಿಯಂಥ ಹಲವು ತಾಣಗಳು ಕರ್ನಾಟಕದಲ್ಲಿ ಇವೆ. ವೀಕೆಂಡ್ಗಳಲ್ಲಿ ಕುಟುಂಬ ದೊಂದಿಗೆ ಸಮಯ ಕಳೆಯಲೆಂದು ಬರುವ ಪ್ರವಾಸಿಗರಿಗೆ ಇಂಥ ತಾಣಗಳ ಪಾಯದ ಅರಿವು ಇರುವುದಿಲ್ಲ. ಇಂಥಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯ ಇದೆ. ನದಿಯಲ್ಲಿ ಸುಳಿ ಹಾಗೂ ಪ್ರವಾಹದ ಸೆಳೆತ ಇರುವ ಅಪಾಯದ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಬೇಕು, ಅಂಥ ತಾಣಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಬೇಕು.
ಎಚ್ಚರಿಕೆ ಫಲಕಗಳನ್ನು ಹಾಕಬೇಕು. ನಿರಂತರ ನಿಗಾ ವ್ಯವಸ್ಥೆ ಏರ್ಪಡಿಸಬೇಕು. ಇದೀಗ ಮುತ್ತತ್ತಿಯಲ್ಲಿ ಕಾವೇರಿ ನದಿಯ ದಂಡೆಯಲ್ಲಿ ಸಾರ್ವಜನಿಕರು ನದಿಯೊಳಗೆ ಪ್ರವೇಶಿಸ ದಂತೆ ಬ್ಯಾರಿಕೇಡ್ ಅಳವಡಿಸಲು ಸಚಿವರು ಸೂಚಿಸಿದ್ದಾರೆ. ನದಿಯಲ್ಲಿ ಪ್ರವಾಸಿಗರು ಈಜಲು ಸುರಕ್ಷಿತವಾದ ಸ್ಥಳವನ್ನು ಮಾತ್ರವೇ ಗುರುತಿಸಿ, ಆ ಪ್ರದೇಶಕ್ಕೆ ಮಾತ್ರ ಇಳಿಯಲು ಅವಕಾಶ ನೀಡಲು, ಉಳಿದ ಯಾವುದೇ ಜಾಗದಲ್ಲಿ ಈಜಲು ಅನುಮತಿ ನೀಡದಂತೆ ತಿಳಿಸಿದ್ದಾರೆ.
ಮೇಕೆದಾಟು, ಎಡಮುರಿ- ಬಲಮುರಿಗಳಲ್ಲೂ ಇಂಥ ಅಪಾಯದ ಸಾಧ್ಯತೆಗಳು ಇವೆ. ಈ ತಾಣಗಳು ಪ್ರವಾಸೋದ್ಯಮವನ್ನು ಜೀವಂತವಾಗಿಟ್ಟಿವೆ. ಉದ್ಯೋಗಗಳನ್ನೂ ಕೊಟ್ಟಿದೆ. ಆದರೆ ಪ್ರವಾಸೋದ್ಯಮದ ಜೊತೆಗೆ ಸುರಕ್ಷತೆಯೂ ಬೇಕು. ಪ್ರವಾಸಿಗರು ಆತಂಕವಿಲ್ಲದೆ ಪ್ರಕೃತಿಯನ್ನು ಸವಿಯುವಂತೆ ಆಗಬೇಕು. ಸ್ಥಳೀಯರನ್ನು ಗೈಡ್ʼಗಳಾಗಿ, ರಕ್ಷಣಾ ಸಿಬ್ಬಂದಿ ಯಾಗಿ ನಿಯೋಜಿಸುವುದು ಸೂಕ್ತ.
ಅರಣ್ಯ ಇಲಾಖೆ, ಪೊಲೀಸರ ನಿರಂತರ ಗಸ್ತು ಬೇಕು. ಎಲ್ಲದರ ಜೊತೆಗೆ, ಪ್ರವಾಸಿಗರು ಕೂಡ ಜವಾಬ್ದಾರಿ ಮೆರೆಯುವ ಅಗತ್ಯ ಇದೆ. ದುರಂತಗಳು ಸಂಭವಿಸದಂತೆ ಎಚ್ಚರಿಕೆ, ಜವಾಬ್ದಾರಿ ಯುತ ಪ್ರವಾಸದಿಂದ ಯಾರಿಗೂ ತೊಂದರೆಯಾಗದು. ಸ್ಥಳೀಯ ನೀರಿನ ತಾಣಗಳ ಒಳಸುಳಿಗಳ ಗೊತ್ತಿಲ್ಲದಾಗ ನೀರಿಗಿಳಿಯುವುದು ಸೂಕ್ತವಲ್ಲ. ಜೀವ ಅಮೂಲ್ಯ. ಅದರ ಜತೆ ಹುಡುಗಾಟ ಸಲ್ಲ.