ಸಿಡ್ನಿ: ಮೂರನೇ ಹಾಗೂ ಅಂತಿಮ ಏಕದಿನ(IND vs AUS 3rd ODI) ಪಂದ್ಯದಲ್ಲಿ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಭಾರತ ತಂಡ, ಆತಿಥೇಯ ಆಸ್ಟ್ರೇಲಿಯಾವನ್ನು 236 ರನ್ಗಳಿಗೆ ಕಟ್ಟಿಹಾಕಿದೆ. ಗೆಲುವಿಗೆ ರನ್ 237 ಬಾರಿಸಬೇಕಿದೆ. ವೈಟ್ವಾಶ್ ಮುಖಭಂಗ ತಪ್ಪಿಸಿಕೊಳ್ಳಲು ಭಾರತಕ್ಕೆ ಗೆಲುವು ಅತ್ಯಗತ್ಯ.
ಹ್ಯಾಟ್ರಿಕ್ ಟಾಸ್ ಸೋಲಿನೊಂದಿಗೆ ಬೌಲಿಂಗ್ ಆಹ್ವಾನ ಪಡೆದ ಭಾರತ, ಆರಂಭಿಂದಲೇ ಆಸೀಸ್ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು. ಮೊಹಮ್ಮದ್ ಸಿರಾಜ್, ಅಪಾಯಕಾರಿ ಟ್ರಾವಿಸ್ ಹೆಡ್(29) ವಿಕೆಟ್ ಕೀಳುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಆ ಬಳಿಕ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಮ್ಮ ಸ್ಪಿನ್ ಕೈಚಳಕ ತೋರುವ ಮೂಲಕ ಆಸೀಸ್ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಿದರು.
ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಬದಲು ಆಡಲಿಳಿದ ಕುಲ್ದೀಪ್ ಯಾದವ್ ನಿರೀಕ್ಷಿತ ಬೌಲಿಂಗ್ ನಡೆಸಲು ವಿಫಲರಾದರು. 50 ರನ್ ನೀಡಿ ಕೇವಲ ಒಂದು ವಿಕೆಟ್ ಮಾತ್ರ ಪಡೆದರು. ಪ್ರಸಿದ್ಧ್ ಕೃಷ್ಣ ಕೂಡ ದುಬಾರಿಯಾದರು. ಒಂದು ಕ್ಯಾಚ್ ಕೂಡ ಕೈಚೆಲ್ಲಿದರು. ಆಸೀಸ್ ಪರ ಮ್ಯಾಟ್ ರೆನ್ಶಾ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಅವರು 56 ರನ್ ಗಳಿಸಿದರು.
ಇದನ್ನೂ ಓದಿ Anushka Sharma: ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಸತತ ಶೂನ್ಯ; ಟ್ರೋಲ್ಗೆ ಒಳಗಾದ ಅನುಷ್ಕಾ ಶರ್ಮಾ
ಅಲೆಕ್ಸ್ ಕ್ಯಾರಿ ಜೀವದಾನ ಪಡೆದರೂ ಇದರ ಲಾಭವೆತ್ತಲು ವಿಫಲರಾದರು. ಒಂದು ಬೌಂಡರಿ ನೆರವಿನಿಂದ 24 ರನ್ ಗಳಿಸಿದರು. ಉಳಿದಂತೆ ನಾಯಕ ಮಿಚೆಲ್ ಮಾರ್ಷ್ 41, ಮ್ಯಾಥ್ಯೂ ಶಾರ್ಟ್ 30 ರನ್ ಬಾರಿಸಿದರು. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ ಪಂದ್ಯದ ಪ್ರಮುಖ ಹೈಲೆಟ್ಸ್ಗಳಲ್ಲಿ ಒಂದಾಗಿತ್ತು. ಶ್ರೇಯಸ್ ಅಯ್ಯರ್ ಹಿಮ್ಮುಖವಾಗಿ ಓಡಿ ಕ್ಯಾಚ್ ಹಿಡಿದ ವೇಳೆ ಬಿದ್ದು ಗಾಯಮಾಡಿಕೊಂಡು ಮೈದಾನ ತೊರೆದರು.
ಟೀಕೆಗೆ ರಾಣಾ ಉತ್ತರ
ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಬೌಲಿಂಗ್ ನಡೆಸುವಲ್ಲಿ ವಿಫಲವಾಗಿದ್ದ ಕಾರಣ ಭಾರೀ ಟೀಕೆಗೆ ಒಳಗಾಗಿದ್ದ ವೇಗಿ ಹರ್ಷೀತ್ ರಾಣಾ ಅವರು ಈ ಪಂದ್ಯದಲ್ಲಿ 39 ರನ್ಗೆ 4 ವಿಕೆಟ್ ಕಿತ್ತು ಎಲ್ಲ ಟೀಕೆಗೆ ಉತ್ತರ ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ಅನೇಕರು ರಾಣಾಗೆ ಕೋಚ್ ಗಂಭೀರ್ ಕೃಪಾಕಟಾಕ್ಷ ಇದೆ, ಹೀಗಾಗಿ ಅವರಿಗೆ ಎಲ್ಲ ಪಂದ್ಯಗಳಲ್ಲಿಯೂ ಅವಕಾಶ ಸಿಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಆದರೆ ಇದೀಗ ಅಮೋಘ ಬೌಲಿಂಗ್ ಮೂಲಕ ರಾಣಾ ಮಿಂಚಿದ್ದಾರೆ.