ದುಬೈ: ಐಸಿಸಿ ಮಹತ್ವದ ಸಭೆ(ICC meeting) ಇಂದಿನಿಂದ(ನ.4) 4 ದಿನಗಳ ಕಾಲ ದುಬೈನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಏಷ್ಯಾಕಪ್ ಟ್ರೋಫಿ ವಿವಾದವನ್ನು ಪ್ರಸ್ತಾಪಿಸಲು ಬಿಸಿಸಿಐ ಸಿದ್ಧಗೊಂಡಿದೆ. ವಿಜೇತ ಭಾರತ ತಂಡಕ್ಕೆ ಟ್ರೋಫಿ(Asia Cup trophy)ಯನ್ನು ವಿತರಿಸಲು ಅವಕಾಶ ನೀಡದೆ ಹರಸ್ಯ ಸ್ಥಳದಲ್ಲಿ ಬಚ್ಚಿಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ವಿರುದ್ಧ ಬಿಸಿಸಿಐ(BCCI vs PCB) ತನ್ನ ಪ್ರತಿಭಟನೆಯನ್ನು ಐಸಿಸಿ ಎದುರು ನಡೆಸಲಿದೆ.
ಏಷ್ಯಾಕಪ್ ಟ್ರೋಫಿ ಹಸ್ತಾಂತರಿಸಬೇಕೆಂದು ಬಿಸಿಸಿಐ 10 ದಿನಗಳ ಹಿಂದೆಯೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಪತ್ರ ಬರೆದಿತ್ತು. ಆದರೆ ಅದು ಇನ್ನೂ ಬಾರದಿರುವುದರಿಂದ ನಾವು ಐಸಿಸಿ ಮೊರೆ ಹೋಗುವುದು ಅನಿವಾರ್ಯವಾಗಿದೆ. ಐಸಿಸಿ ನಮಗೆ ನ್ಯಾಯ ಒದಗಿಸಿ, ಟ್ರೋಫಿ ಪಡೆಯಲು ನೆರವಾಗುವ ಭರವಸೆ ಇದೆ ಎಂದು ಸೈಕಿಯಾ ತಿಳಿಸಿದ್ದಾರೆ.
ಏಷ್ಯಾಕಪ್ ಫೈನಲ್ ಗೆದ್ದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಟ್ರೋಫಿಯೊಂದಿಗೆ ಸ್ಟೇಡಿಯಂನಿಂದ ಪಲಾಯನ ಮಾಡಿದ್ದರು. ನಂತರ ಅದನ್ನು ಎಸಿಸಿ ಕಚೇರಿಯಲ್ಲಿ ಲಾಕ್ ಮಾಡಿಟ್ಟಿದ್ದರು. ಮತ್ತು ತನ್ನ ಅನುಮತಿ ಇಲ್ಲದೆ ಯಾರಿಗೂ ಅದನ್ನು ಹಸ್ತಾಂತರಿಸದಂತೆ ಸಿಬ್ಬಂದಿಗೆ ಸೂಚಿಸಿದ್ದರು. ಬಳಿಕ ಬಿಸಿಸಿಐ, ಐಸಿಸಿಗೆ ದೂರು ನೀಡುವುದಾಗಿ ತಿಳಿಸಿದ ಬೆನ್ನಲ್ಲೇ ಇದೀಗ ನಖ್ವಿ ಎಸಿಸಿ ಮುಖ್ಯ ಕಚೇರಿಯಲ್ಲಿದ್ದ ಏಷ್ಯಾಕಪ್ ಟ್ರೋಫಿಯನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ವಿಜಯೋತ್ಸವ ಮೆರವಣಿಗೆ ಸದ್ಯಕ್ಕಿಲ್ಲ
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ವಿಶ್ವಕಪ್ ತಂಡದ ವಿಜಯೋತ್ಸವ ಮೆರವಣಿಗೆ ಸದ್ಯ ಇರುವುದಿಲ್ಲ ಎಂದು ದೃಢಪಡಿಸಿದೆ. ಪುರುಷರ ತಂಡವು 2024 ರ ಟಿ 20 ವಿಶ್ವಕಪ್ ಗೆದ್ದ ನಂತರ ಮುಂಬೈನಲ್ಲಿ ತೆರೆದ ಬಸ್ ವಿಜಯ ಮೆರವಣಿಗೆಯೊಂದಿಗೆ ಗೆಲುವನ್ನು ಆಚರಿಸಲಾಗಿತ್ತು.
"ನಾನು ಐಸಿಸಿ ಸಭೆಯಲ್ಲಿ ಭಾಗವಹಿಸಲು ದುಬೈಗೆ ತೆರಳುತ್ತಿದ್ದೇನೆ. ಹಲವಾರು ಅಧಿಕಾರಿಗಳು ಸಹ ಅಲ್ಲಿಗೆ ಹೋಗುತ್ತಿದ್ದಾರೆ, ಆದ್ದರಿಂದ ನಾವು ಹಿಂದಿರುಗಿದ ನಂತರ, ನಾವು ಮೆರವಣಿಗೆ ಬಗ್ಗೆ ಯೋಚಿಸುತ್ತೇವೆ. ನಾವು ಏಷ್ಯಾ ಕಪ್ ಟ್ರೋಫಿ ವಿಷಯವನ್ನು ಐಸಿಸಿಯೊಂದಿಗೆ ಚರ್ಚಿಸುತ್ತೇವೆ ಮತ್ತು ನಮ್ಮ ಟ್ರೋಫಿಯನ್ನು ಅದಕ್ಕೆ ಅರ್ಹವಾದ ಗೌರವದೊಂದಿಗೆ ಮರಳಿ ಪಡೆಯುತ್ತೇವೆ ಎಂದು" ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.