ಬೆಂಗಳೂರು, ಮಾ.28: ಕಳೆದ ವರ್ಷ ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂ(Chinnaswamy stadium)ನಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿ ವೇಳೆ ಸಣ್ಣ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುಂಜಾಗ್ರತೆ ವಹಿಸಿರುವ ಪೊಲೀಸರು, ಪಂದ್ಯ ಆರಂಭಕ್ಕೂ ನಾಲ್ಕು ತಾಸಿನ ಮೊದಲೇ ಕ್ರೀಡಾಂಗಣದಲ್ಲಿ ಹಾಜರಿರುವಂತೆ ಪ್ರೇಕ್ಷಕರಿಗೆ ಸೂಚಿಸಿದ್ದಾರೆ. ಇಂದು ಆರ್ಸಿಬಿ ಮತ್ತು ಹೈದರಾಬಾದ್(RCB vs SRH) ತಂಡಗಳು ಉದ್ಘಾಟನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಭದ್ರತೆ ದೃಷ್ಟಿಯಿಂದ ಪೊಲೀಸರ ಈ ಸೂಚನೆಗಳು ಪ್ರೇಕ್ಷಕರು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶಿಸಲು, ಹೊರಗೆ ಹೋಗಲು ಅವಕಾಶ ಕಲ್ಪಿಸಿರುವ ಸ್ಥಳಗಳು
ಸಾರ್ವಜನಿಕರಿಗೆ ಗೇಟ್ ನಂ. ಇ–1ರಿಂದ ಗೇಟ್ ನಂ. ಇ–3 ಮತ್ತು ಗೇಟ್ ನಂ. ಇ–18, ಇ–19, ಇ–22 ಹಾಗೂ ಇ–23 ಕಬ್ಬನ್ ರಸ್ತೆಯಲ್ಲಿದ್ದು, ಈ ಗೇಟ್ಗಳ ಮೂಲಕ ಪ್ರವೇಶಿಸಬಹುದು.
ಗೇಟ್ ನಂ. ಇ-11ರಿಂದ ಗೇಟ್ ನಂ. ಇ–17ರ ವರೆಗೆ ಲಿಂಕ್ ರಸ್ತೆಯಲ್ಲಿದ್ದು, ಅನಿಲ್ ಕುಂಬ್ಳೆ ವೃತ್ತ ಮತ್ತು ಬಿ.ಆರ್.ವಿ ವೃತ್ತದ ಕಡೆಯಿಂದ ಪ್ರವೇಶಿಸಬಹುದು.
ಕ್ವೀನ್ಸ್ ರಸ್ತೆಯಲ್ಲಿ ಗೇಟ್ ನಂ. ಇ–5 ಮತ್ತು ಇ–8ರಲ್ಲಿ ಪ್ರವೇಶವಿದ್ದು, ಗೇಟ್ ನಂ. ಇ–9, ಇ–9ಎ ಗೇಟ್ನಲ್ಲಿ ನಿರ್ಗಮಿಸಲು ಮಾತ್ರ ಅವಕಾಶ ಇರುತ್ತದೆ.
ಕ್ವೀನ್ಸ್ ರಸ್ತೆಯ ಗೇಟ್ ನಂ. ಇ–10ರಲ್ಲಿ ಆಟಗಾರರು, ಸಹ ಆಟಗಾರರು ಹಾಗೂ ಕ್ರೀಡಾಂಗಣದ ಸಿಬ್ಬಂದಿ ಹಾಗೂ ವಿ.ಐ.ಪಿಗಳಿಗೆ ಅವಕಾಶ ಇರುತ್ತದೆ.
ಸಾರ್ವಜನಿಕರಿಗೆ ಸೂಚನೆಗಳು
ಪಂದ್ಯ ಆರಂಭಕ್ಕೆ ಕನಿಷ್ಠ 4 ಗಂಟೆಗಳ ಮುಂಚಿತವಾಗಿ ಆಗಮಿಸಬೇಕು. ಕ್ರೀಡಾಂಗಣವನ್ನು ತಲುಪುವ ಮೊದಲು ಕ್ಯೂಆರ್ ಟಿಕೆಟ್ ಡೌನ್ಲೋಡ್ ಮಾಡಬೇಕು.
ಪೊಲೀಸ್ ಫಲಕಗಳ ಮತ್ತು ಸೂಚನೆಗಳನ್ನು ಪಾಲಿಸಬೇಕು. ನಿಷೇಧಿತ ವಸ್ತುಗಳನ್ನು ಕ್ರೀಡಾಂಗಣಕ್ಕೆ ತರಬಾರದು.
ಸ್ಟೇಡಿಯಂ ಗೇಟ್ಗಳ ಬಳಿ ವಾಹನಗಳಿಗೆ ಅವಕಾಶವಿಲ್ಲ.
ಕ್ಯೂಆರ್ ಕೋಡ್ ಆಧಾರಿತ ಪ್ರವೇಶ-ಪ್ರವೇಶದ ವೇಳೆ ತಪಾಸಣೆಗೆ ಸಹಕರಿಸಬೇಕು.
ಮಾನ್ಯ ಟಿಕೆಟ್ ಇಲ್ಲದೆ ಯಾರಿಗೂ ಪ್ರವೇಶವಿಲ್ಲ.
ಕ್ರೀಡಾಂಗಣದ ಬಳಿ ಅಡ್ಡಾಡುವುದನ್ನು ನಿಷೇದಿಸಿದೆ.
ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ನ ಉದ್ಘಾಟನಾ ಪಂದ್ಯ ನಡೆಯಲಿದೆ. 2008ರ ಚೊಚ್ಚಲ ಆವೃತ್ತಿಯ ಆರಂಭಿಕ ಪಂದ್ಯ ಬೆಂಗಳೂರಿನಲ್ಲೇ ನಡೆದಿತ್ತು. ಆ ಬಳಿಕ ಇದೇ ಮೊದಲ ಬಾರಿ ಇಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಲ್ಲಿ 2014, 2016ರಲ್ಲಿ ಫೈನಲ್ ಪಂದ್ಯ ನಡೆದಿವೆ.