ಬೆಂಗಳೂರು, ನ.25: ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪುರುಷರ ಕಿರಿಯ ಹಾಕಿ ಪಂದ್ಯಾವಳಿಯ(Hockey Men’s Junior World Cup 2025) ವಿಶ್ವಕಪ್ ಟ್ರೋಪಿಯನ್ನು ಮಂಗಳವಾರ ಅನಾವರಣಗೊಳಿಸಿದರು. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಗೋವಿಂದರಾಜು, ಪದ್ಮಶ್ರೀ ಪುರಸ್ಕೃತ ಧನಂಜಯ್ ಪಿಳ್ಳೈ, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಡಾ.ಎ.ಬಿ.ಸುಬ್ಬಯ್ಯ, ಕರ್ನಾಟಕ ಹಾಕಿ ಅಸೋಸಿಯೇಷನ್ ಕಾರ್ಯದರ್ಶಿಗಳಾದ ವಿ.ಆರ್.ರಘುನಾಥ್ ಅವರ ಸಮ್ಮುಖದಲ್ಲಿ ಟ್ರೋಪಿ ಅನಾವರಣಗೊಳಿಸಲಾಯಿತು. ಈ ವೇಳೆ ಶಾಸಕರಾದ ತರೀಕೆರೆ ಶ್ರೀನಿವಾಸ್, ಹಂಪನಗೌಡ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯಾವಳಿ ತಮಿಳುನಾಡಿನಲ್ಲಿ ಇದೇ ಶುಕ್ರವಾರದಿಂದ (ನವೆಂಬರ್ 28) ಡಿಸೆಂಬರ್ 10ರ ವರೆಗೆ ನಡೆಯಲಿದೆ. ತಮಿಳುನಾಡಿನ ಮದುರೈ ಮತ್ತು ಚೆನ್ನೈ ನಗರಗಳು ಆತಿಥ್ಯ ವಹಿಸುತ್ತಿದ್ದು, ಒಟ್ಟು 24 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಭದ್ರತಾ ಕಾಳಜಿಯಿಂದಾಗಿ ಪಾಕಿಸ್ತಾನ ಕೊನೆಯ ಹಂತದಲ್ಲಿ ಪಂದ್ಯಾವಳಿಯಿಂದ ಹಿಂದೆ ಸರಿದಿತ್ತು.
ಭಾರತವು ಪೂಲ್ ಬಿ ಯಲ್ಲಿ ಸ್ಪರ್ಧಿಸಲಿದ್ದು, ಚಿಲಿ, ಸ್ವಿಟ್ಜರ್ಲೆಂಡ್ ಮತ್ತು ಓಮನ್ ತಂಡಗಳನ್ನು ಎದುರಿಸಲಿದೆ. ಡಿಫೆಂಡರ್ ಮತ್ತು ಡ್ರ್ಯಾಗ್-ಫ್ಲಿಕರ್ ರೋಹಿತ್ ಸಾರಥ್ಯದಲ್ಲಿ ಭಾರತ ಕಣಕ್ಕಿಳಿಯಲಿದೆ. ಭಾರತದ ಮಾಜಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ತಂಡದ ಮಾರ್ಗದರ್ಶಕರಾಗಿದ್ದಾರೆ.
ಇದನ್ನೂ ಓದಿ ಜೂನಿಯರ್ ಹಾಕಿ ವಿಶ್ವಕಪ್; 18 ಸದಸ್ಯರನ್ನೊಳಗೊಂಡ ಭಾರತ ತಂಡ ಪ್ರಕಟ
ಪ್ರೇಕ್ಷಕರಿಗೆ ಉಚಿತ ಪ್ರವೇಶ
‘ಉಚಿತ ಟಿಕೆಟ್ಗಳನ್ನು ಹಂಚುವ ಮೂಲಕ ವಿದ್ಯಾರ್ಥಿಗಳು, ಯುವ ಅಥ್ಲೀಟ್ಗಳು, ಹಾಕಿ ಅಭಿಮಾನಿಗಳು ಹಾಗೂ ಆಟಗಾರರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ’ ಎಂದು ‘ಹಾಕಿ ಇಂಡಿಯಾ’ ಅಧ್ಯಕ್ಷ ದಿಲೀಪ್ ಟಿರ್ಕಿ ಪ್ರಕಟಣೆಯಲ್ಲಿ ಹೇಳಿದ್ದಾರೆ. ಅದರಂತೆ ಆಸಕ್ತರು ಟಿಕೆಟ್ಜೀನಿ ವೆಬ್ಸೈಟ್ ಅಥವಾ ಹಾಕಿ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಮೂಲಕ ಉಚಿತ ವರ್ಚುವಲ್ ಟಿಕೆಟ್ಗಳನ್ನು ಪಡೆದುಕೊಳ್ಳಬಹುದು.
ಭಾರತ ತಂಡ
ಗೋಲ್ ಕೀಪರ್ಗಳು: ಬಿಕ್ರಮ್ಜಿತ್ ಸಿಂಗ್, ಪ್ರಿನ್ಸ್ದೀಪ್ ಸಿಂಗ್.
ಡಿಫೆಂಡರ್ಸ್: ರೋಹಿತ್, ತಾಳೆಂ ಪ್ರಿಯೊಬರ್ತಾ, ಅನ್ಮೋಲ್ ಎಕ್ಕಾ, ಅಮೀರ್ ಅಲಿ, ಸುನೀಲ್ ಪಾಲಾಕ್ಷಪ್ಪ ಬೆನ್ನೂರು, ಶಾರದಾನಂದ ತಿವಾರಿ.
ಮಿಡ್ಫೀಲ್ಡರ್ಸ್: ಅಂಕಿತ್ ಪಾಲ್, ತೌನೊಜಂ ಇಂಗಳೆಂಬ ಲುವಾಂಗ್, ಅದ್ರೋಹಿತ್ ಎಕ್ಕಾ, ರೋಸನ್ ಕುಜೂರ್, ಮನ್ಮೀತ್ ಸಿಂಗ್, ಗುರ್ಜೋತ್ ಸಿಂಗ್.
ಫಾರ್ವರ್ಡ್ಸ್: ಅರ್ಷದೀಪ್ ಸಿಂಗ್, ಸೌರಭ್ ಆನಂದ್ ಕುಶ್ವಾಹ, ಅಜೀತ್ ಯಾದವ್, ದಿಲ್ರಾಜ್ ಸಿಂಗ್.