ಸಿಡ್ನಿ, ಮಾ.30: ಕೋಲ್ಕತಾ ನೈಟ್ ರೈಡರ್ಸ್(KKR) ತಂಡದ ನಾಯಕ ಅಜಿಂಕ್ಯ ರಹಾನೆ(Ajinkya Rahane) ಅವರ ಹೇಳಿಕೆಗೆ ಕ್ರಿಕೆಟ್ ಆಸ್ಟ್ರೇಲಿಯಾ(Cricket Australia) ಖಡಕ್ ಉತ್ತರ ನೀಡಿದೆ. ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಬಳಿಕ ಮಾತನಾಡಿದ್ದ ರಹಾನೆ, ಕ್ಯಾಮರೋನ್ ಗ್ರೀನ್ಗೆ ಬೌಲಿಂಗ್ ಏಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಕ್ರಿಕೆಟ್ ಆಸ್ಟ್ರೇಲಿಯಾವನ್ನು ಕೇಳಿ ಎಂದು ಹೇಳಿದ್ದರು. ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ರಹಾನೆ ಹೇಳಿಕೆಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, 'ಕ್ಯಾಮರೋನ್ ಗ್ರೀನ್ ಸೊಂಟ ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಕ್ಯಾಮರೋನ್ ಗ್ರೀನ್ ಸ್ವಲ್ಪ ಸಮಯದವರೆಗೆ ಬೌಲಿಂಗ್ನಿಂದ ದೂರವಿರಬೇಕಾಗುತ್ತದೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ವಕ್ತಾರರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದರು.
"ಗ್ರೀನ್ ಬೌಲಿಂಗ್ ನಿಭಾಯಿಸುವತ್ತ ಗಮನ ನೀಡುತ್ತಿದ್ದಾರೆ. ಸುಮಾರು 10-12 ದಿನಗಳಲ್ಲಿ ಸಂಪೂರ್ಣವಾಗಿ ಅವರು ಕಮ್ಬ್ಯಾಕ್ ಮಾಡುವ ಗುರಿಯನ್ನು ಹೊಂದಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಜತೆಗೂ ಈ ವಿಚಾರವಾಗಿ ಮಾಹಿತಿ ನೀಡಲಾಗಿದೆ. ಕೆಕೆಆರ್ ತಂಡಕ್ಕೆ ಈ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ" ಎಂದು ಹೇಳುವ ಮೂಲಕ ರಹಾನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ತಿರುಗೇಟು ನೀಡಿದೆ.
ಗ್ರೀನ್ ಆಸ್ಟ್ರೇಲಿಯಾದ 2026 ರ T20 ವಿಶ್ವಕಪ್ ಅಭಿಯಾನದ ಭಾಗವಾಗಿದ್ದರು, ಅಲ್ಲಿಯೂ ಅವರು ಬೌಲಿಂಗ್ ಮಾಡಿರಲಿಲ್ಲ. ಕೇವಲ ಬ್ಯಾಟರ್ ಆಗಿ ಮಾತ್ರ ಆಡಿದ್ದರು. ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ, ಚೊಚ್ಚಲ ಆಟಗಾರ ಬ್ಲೆಸ್ಸಿಂಗ್ ಮುಜರಬಾನಿ, ಸುನಿಲ್ ನರೈನ್ ಮತ್ತು ಅರೆಕಾಲಿಕ ಬೌಲರ್ ಅನುಕುಲ್ ರಾಯ್ ಸೇರಿದಂತೆ ಆರು ಬೌಲರ್ಗಳನ್ನು ಬಳಸಿಕೊಂಡ ಕೆಕೆಆರ್, 220 ರನ್ ಉಳಿಸಿಕೊಳ್ಳಲು ವಿಫಲವಾಯಿತು. ಮುಂಬೈ ತಂಡ 19.1 ಓವರ್ಗಳಲ್ಲಿ 224 ರನ್ ಬಾರಿಸಿ ಗುರಿಯನ್ನು ತಲುಪಿ ಆರು ವಿಕೆಟ್ಗಳ ಜಯ ಸಾಧಿಸಿತು.
MI vs KKR: 'ಜನರು ಮಾತನಾಡಲಿ': ಟೀಕಾಕಾರರ ಬಾಯಿ ಮುಚ್ಚಿಸಿದ ಅಜಿಂಕ್ಯ ರಹಾನೆ
ಬ್ಯಾಟಿಂಗ್ ಕುರಿತ ಟೀಕೆಗಳನ್ನು ಅಜಿಂಕ್ಯ ರಹಾನೆ ತಳ್ಳಿಹಾಕಿದರು. "ಜನರು ನನ್ನ ಬಗ್ಗೆ ಮಾತನಾಡಲಿ - ಅವರು 20 ವರ್ಷಗಳಿಂದ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ. ನಾನು ಈ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ರೀತಿಯಿಂದ ನನಗೆ ನಿಜವಾಗಿಯೂ ಸಂತೋಷವಾಗಿದೆ. ನಾನು ಎಷ್ಟು ಪ್ರತಿಭಾನ್ವಿತ ಅಥವಾ ನನ್ನ ಆಟ ಏನೆಂದು ಯಾರಿಗೂ ತೋರಿಸಲು ನಾನು ಇಲ್ಲಿಲ್ಲ. ಜನರು ನೋಡುತ್ತಿದ್ದಾರೆ. ಅವರು ನೋಡಲಿ, ಅವರು ಮಾತನಾಡಲಿ" ಎಂದು ಹೇಳಿದರು.