ಢಾಕಾ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2026) ಟೂರ್ನಿಯ ಪಂದ್ಯಗಳನ್ನು ಇನ್ನು ಮುಂದೆ ಬಾಂಗ್ಲಾದೇಶದಲ್ಲಿ ಪ್ರಸಾರ ಮಾಡುವುದಿಲ್ಲ. ತನ್ನ ಕ್ರಿಕೆಟಿಗ ಮುಸ್ತಾಫಿಝುರ್ ರೆಹಮಾನ್ ( Mustafizur Rahman) ಅವರನ್ನು ಐಪಿಎಲ್ ಟೂರ್ನಿಯಿಂದ ತೆಗೆದುಹಾಕಿದ್ದರಿಂದ ಅಸಮಾಧಾನಗೊಂಡ ಬಾಂಗ್ಲಾದೇಶ ಸರ್ಕಾರ, ಇದಕ್ಕೆ ಪ್ರತಿಯಾಗಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು (IPL Broadcast Ban) ನಿಷೇಧಿಸಿದೆ. ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೋಮವಾರ (ಜನವರಿ 5) ಎಲ್ಲಾ ಸ್ಥಳೀಯ ಟಿವಿಗಳಿಗೆ ಪತ್ರವೊಂದನ್ನು ಕಳುಹಿಸಿದ್ದು, ಐಪಿಎಲ್ ಪ್ರಸಾರದ ನಿಷೇಧದ ಬಗ್ಗೆ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕ್ರೂರ ಹಿಂಸಾಚಾರದಿಂದಾಗಿ ಮುಸ್ತಾಫಿಝುರ್ ರೆಹಮಾನ್ ಅವರನ್ನು ಐಪಿಎಲ್ ತಂಡಕ್ಕೆ ಸೇರಿಸಿಕೊಳ್ಳುವುದರ ವಿರುದ್ಧ ಭಾರತದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆಯುವುದನ್ನು ಗಮನಿಸಿದ ಬಿಸಿಸಿಐ, ಐಪಿಎಲ್ ಹರಾಜಿನಲ್ಲಿ 9.2 ಕೋಟಿ ರೂ.ಗೆ ಖರೀದಿಸಿದ್ದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಆದೇಶಿಸಿತು. ಬಿಸಿಸಿಐ ಆದೇಶದ ನಂತರ ರೆಹಮಾನ್ ಬಿಡುಗಡೆಯ ಬಗ್ಗೆ ಕೆಕೆಆರ್ ಮಾಹಿತಿ ನೀಡಿದೆ.
2026ರ ಟಿ20 ವಿಶ್ವಕಪ್ಗಾಗಿ ಭಾರತ ಪ್ರಯಾಣದಿಂದ ಅಧಿಕೃತವಾಗಿ ಹಿಂದೆ ಸರಿದ ಬಾಂಗ್ಲಾ
ಬಾಂಗ್ಲಾದೇಶ ಸರ್ಕಾರ ನಿಷೇಧ ಹೇರಿದ ಪತ್ರದಲ್ಲಿ ಏನಿದೆ?
ಬಾಂಗ್ಲಾದೇಶದ ವಾರ್ತಾಪತ್ರಿಕೆ ಫೈನಾನ್ಷಿಯಲ್ ಎಕ್ಸ್ಪ್ರೆಸ್ ಪ್ರಕಾರ, ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಎಲ್ಲಾ ಟಿವಿ ಚಾನೆಲ್ಗಳಿಗೆ ಪತ್ರ ಕಳುಹಿಸಿದೆ. ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಮುಸ್ತಾಫಿಝರ್ ರೆಹಮಾನ್ ಅವರನ್ನು ಐಪಿಎಲ್ ಟೂರ್ನಿಯ ಕೋಲ್ಕತ್ತಾ ನೈಟ್ ರೈಡರ್ಸ್ನಿಂದ ತೆಗೆದುಹಾಕುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿರ್ಧಾರವನ್ನು ಗಮನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ನಿರ್ಧಾರಕ್ಕೆ ಯಾವುದೇ ಸರಿಯಾದ ಕಾರಣವನ್ನು ನೀಡಲಾಗಿಲ್ಲ ಮತ್ತು ಇದು ಬಾಂಗ್ಲಾದೇಶದ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಈ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೂ ಐಪಿಎಲ್ ಪಂದ್ಯಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳ ಪ್ರಸಾರವನ್ನು ನಿಲ್ಲಿಸುವಂತೆ ಸಚಿವಾಲಯ ಟಿವಿ ಚಾನೆಲ್ಗಳಿಗೆ ನಿರ್ದೇಶನ ನೀಡುತ್ತಿದೆ.
ಬಾಂಗ್ಲಾದೇಶದಿಂದ ಭಾರತಕ್ಕ ಬೆದರಿಕೆ
ಐಪಿಎಲ್ನಿಂದ ಮುಸ್ತಾಫಿಝರ್ ರೆಹಮಾನ್ ಅವರನ್ನು ಕೈಬಿಟ್ಟಿರುವುದು ಬಾಂಗ್ಲಾದೇಶದಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಬಾಂಗ್ಲಾದೇಶ ಸರ್ಕಾರ ಈ ನಿರ್ಧಾರವನ್ನು ಟೀಕಿಸಿತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ ಈ ನಿರ್ಧಾರವನ್ನು ವಿರೋಧಿಸಿತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) 2026 ರ ಟಿ20 ವಿಶ್ವಕಪ್ನಲ್ಲಿ ಆಡಲು ಭಾರತಕ್ಕೆ ತಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಘೋಷಿಸಿತು. ಭಾರತದಲ್ಲಿನ ತನ್ನ ತಂಡಕ್ಕೆ ಇರುವ ಭದ್ರತಾ ಬೆದರಿಕೆಗಳನ್ನು ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಡಲು ಕಾರಣವೆಂದು ಬಿಸಿಬಿ ಉಲ್ಲೇಖಿಸಿದೆ. ಬಿಸಿಬಿ ತನ್ನ ತಂಡದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಪತ್ರ ಬರೆದಿದೆ.
ಭಾರತದಲ್ಲಿಯೂ ಅನೇಕರು ಬಿಸಿಸಿಐ ಅನ್ನು ಟೀಕಿಸಿದ್ದಾರೆ. ಭಾರತದಲ್ಲಿಯೂ ಅನೇಕರು ಮುಸ್ತಾಫಿಝುರ್ ರೆಹಮಾನ್ ಅವರನ್ನು ತೆಗೆದುಹಾಕುವ ಬಿಸಿಸಿಐ ನಿರ್ಧಾರವನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಸಂಸದ ಮತ್ತು ಕ್ರಿಕೆಟ್ ತಜ್ಞ ಶಶಿ ತರೂರ್ ಇದನ್ನು ತಪ್ಪಾದ ಕ್ರಮ ಎಂದು ಕರೆದಿದ್ದಾರೆ. ಮುಸ್ತಾಫಿಜುರ್ ಅವರ ಜಾಗದಲ್ಲಿ ಬಾಂಗ್ಲಾದೇಶದ ಹಿಂದೂ ಕ್ರಿಕೆಟಿಗನಿದ್ದಿದ್ದರೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತಿತ್ತು ಎಂದೂ ಅವರು ಪ್ರಶ್ನಿಸಿದ್ದಾರೆ. ಇನ್ನೂ ಅನೇಕರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.