ನವದೆಹಲಿ: ಅಂಡರ್-19 ಏಷ್ಯಾ ಕಪ್ (U-19 Asia Cuop 2025) ಟೂರ್ನಿಯ ಫೈನಲ್ ಪಂದ್ಯದ (IND-U19 vs PAK U-19) ಬಳಿಕ ಪಾಕಿಸ್ತಾನ ಕಿರಿಯರ ತಂಡದ ಹೆಡ್ ಕೋಚ್ ಸರ್ಫರಾಝ್ ಖಾನ್ (Sarfaraz Ahmed) ಭಾರತ ಕಿರಿಯರ ತಂಡವನ್ನು ಟೀಕಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡದ ಆಟಗಾರರ ವರ್ತನೆ ಗೌರವಯುತವಾಗಿರಲಿಲ್ಲ. ಸಂಭ್ರಮ ಎಂದಿಗೂ ಗೌರವಯುತವಾಗಿರಬೇಕೆಂದು ನಾವು ನಮ್ಮ ಆಟಗಾರರಿಗೆ ಮೊದಲೇ ಹೇಳಿದ್ದೆವು. ಆದರೆ, ಎದುರಾಳಿ ಭಾರತ ತಂಡದ ಆಟಗಾರರು ಗೌರವಯುತವಾಗಿ ನಡೆದುಕೊಳ್ಳಲಿಲ್ಲ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 21 ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ 19 ವರ್ಷದೊಳಗಿನವರ 2025ರ ಏಷ್ಯಾಕಪ್ ಫೈನಲ್ ಪಂದ್ಯ ನಡೆದಿತ್ತು. ಪಾಕಿಸ್ತಾನ ತಂಡ, ಭಾರತವನ್ನು 191 ರನ್ಗಳ ಭಾರಿ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾಗಿದ್ದ ಪಾಕಿಸ್ತಾನ, ಭಾರತಕ್ಕೆ 348 ರನ್ಗಳ ಗುರಿಯನ್ನು ನೀಡಿತ್ತು.ಬಳಿಕ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ 26.2 ಓವರ್ಗಳಲ್ಲಿ 156 ರನ್ಗಳಿಗೆ ಆಲೌಟ್ ಆಯಿತು. ಫೈನಲ್ ಪಂದ್ಯವನ್ನು ಗೆದ್ದ ನಂತರ, ಪಾಕಿಸ್ತಾನ ತಂಡದ ಮಾರ್ಗದರ್ಶಕ ಸರ್ಫರಾಝ್ ಅಹ್ಮದ್ ಭಾರತ ತಂಡದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
2026ರ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈ ಆಟಗಾರನಿಗೆ ಸ್ಥಾನ ನೀಡಬೇಕಿತ್ತೆಂದ ಆಕಾಶ್ ಚೋಪ್ರಾ!
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸರ್ಫರಾಝ್ ಅಹ್ಮದ್, "ನಾನು ಮೊದಲು ಭಾರತ ತಂಡದ ವಿರುದ್ಧ ಆಡಿದ್ದೇನೆ, ಆದರೆ ಆ ಸಮಯದಲ್ಲಿ ಭಾರತ ತಂಡ, ಕ್ರಿಕೆಟ್ ಅನ್ನು ಗೌರವಿಸುತ್ತಿತ್ತು. ಆದರೆ ಪ್ರಸ್ತುತ ಈ ತಂಡದ ಯುವ ಆಟಗಾರರು ಕ್ರಿಕೆಟ್ಗೆ ಅಗೌರವ ತೋರುವ ರೀತಿ ನಡೆದುಕೊಂಡಿದ್ದಾರೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಸಂಭ್ರಮಾಚರಣೆ ಗೌರವಯುತವಾಗಿರಬೇಕೆಂದು ನಾನು ನಮ್ಮ ಆಟಗಾರರಿಗೆ ಸ್ಪಷ್ಟವಾಗಿ ಹೇಳಿದ್ದೆ. ನಮ್ಮ ಹುಡುಗರು ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕೆಂದು ನಾವು ಭಾವಿಸಿದ್ದೆವು. ಎದುರಾಳಿ ತಂಡ ಯಾವ ರೀತಿ ಆಡುತ್ತದೆ, ಅದೇ ರೀತಿ ನೀವು ನಿಮ್ಮ ಸಾಮರ್ಥ್ಯ ಹಾಗೂ ಕೌಶಲಕ್ಕೆ ತಕ್ಕಂತೆ ಆಟವಾಡಿ ಎಂದು ಹೇಳಿದ್ದೆ," ಎಂದರು.
ಭಾರತ ತಂಡದ ಸಂಭ್ರಮ ಅನೈತಿಕವಾಗಿತ್ತು: ಸರ್ಫರಾಝ್ ಅಹ್ಮದ್
"ಭಾರತ ತಂಡದ ಆಟಗಾರರ ಸಂಭ್ರಮಾಚರಣೆ ಹಾಗೂ ನಡೆದುಕೊಂಡ ರೀತಿ ಚೆನ್ನಾಗಿರಲಿಲ್ಲ. ಕ್ರಿಕೆಟ್ನಲ್ಲಿ ಭಾರತ ತಂಡದ ನಡವಳಿಕೆ ಅನೈತಿಕವಾಗಿತ್ತು," ಎಂದು ದೂರಿದ ಅವರು, "ಆದರೆ ಕ್ರಿಕೆಟ್ನಲ್ಲಿ ಯಾವಾಗಲೂ ಕ್ರೀಡಾ ಮನೋಭಾವ ಇರಬೇಕು ಎಂಬ ಕಾರಣಕ್ಕೆ ನಾವು ನಮ್ಮ ವಿಜಯವನ್ನು ಕ್ರೀಡಾ ಮನೋಭಾವದಿಂದ ಆಚರಿಸಿದೆವು; ಭಾರತ ಏನು ಮಾಡಿದೆ ಎಂಬುದು ಅವರ ಆಯ್ಕೆಯಾಗಿತ್ತು," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಫರಾಝ್ ಅಹ್ಮದ್ ಆಡಿಯೊ ವೈರಲ್
ಇದಕ್ಕೂ ಮುನ್ನ ಫೈನಲ್ ಪಂದ್ಯದ ಸರ್ಫರಾಝ್ ಅಹ್ಮದ್ ಅವರ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿತ್ತು, ಅದರಲ್ಲಿ ಅವರು ಭಾರತದ ಆಟಗಾರರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದರು. ಪಾಕಿಸ್ತಾನದ ಬೌಲರ್ ಅಲಿ ರಜಾ ಕೂಡ ಫೈನಲ್ ಪಂದ್ಯದ ಸಮಯದಲ್ಲಿ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಅವರೊಂದಿಗೆ ವಾಗ್ವಾದ ನಡೆಸಿದರು. ಅವರು ಭಾರತೀಯ ಆಟಗಾರರನ್ನು ಔಟ್ ಮಾಡಿದ ನಂತರ ಏನೋ ಹೇಳುತ್ತಿದ್ದರು.