ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಟೆಸ್ಟ್‌ ಕ್ರಿಕೆಟ್‌ಗೆ ಅಪಾರ ಗೌರವ, ಕಠಿಣ ಪರಿಶ್ರಮದ ಅಗತ್ಯವಿದೆʼ: ಮಾನವ್‌ ಸುತಾರ್‌!

ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿಯೇ 6 ವಿಕೆಟ್‌ ಸಾಧನೆ ಮಾಡಿ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡದ ದಾಖಲೆಯ ಗೆಲುವಿಗೆ ನೆರವು ನೀಡಿದ ಮಾನವ್‌ ಸುತಾರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಅವರು ಟೆಸ್ಟ್‌ ಕ್ರಿಕೆಟ್‌ನ ಮೌಲ್ಯದ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪದಾರ್ಪಣೆ ಪಂದ್ಯದ ಬಗ್ಗೆ ಮಾನವ್‌ ಸುತಾರ್‌ ಪ್ರತಿಕ್ರಿಯೆ.

ಚಂಡೀಗಢ: ಅಫ್ಘಾನಿಸ್ತಾನ ವಿರುದ್ಧ ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದ (IND vs AFG) ಯಶಸ್ಸನ್ನು ತೆಗೆದುಕೊಳ್ಳಲು ನಿರಾಕರಿಸಿದ ಭಾರತ ತಂಡದ ಯುವ ಸ್ಪಿನ್ನರ್‌ ಮಾನವ್‌ ಸುತಾರ್‌ (Manav Suthar), ಟೆಸ್ಟ್‌ ಕ್ರಿಕೆಟ್‌ಗೆ ಅಪಾರ ಗೌರವ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಹೇಳಿದ್ದಾರೆ. ಅಲ್ಲದೆ ದೀರ್ಘಾವಧಿ ಸ್ವರೂಪದಲ್ಲಿ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯ ಎಂದು ಯುವ ಸ್ಪಿನ್ನರ್‌ ತಿಳಿಸಿದ್ದಾರೆ.

ಮಾನವ್‌ ಸುತಾರ್‌ ಸ್ಪಿನ್‌ ಮೋಡಿಯ ಸಹಾಯದಿಂದ ಭಾರತ ತಂಡ, ಏಕೈಕ ಟೆಸ್ಟ್‌ ಪಂದ್ಯವನ್ನು ಇನಿಂಗ್ಸ್‌ ಹಾಗೂ 300 ರನ್‌ಗಳ ಅಂತರದಲ್ಲಿ ದಾಖಲೆಯ ಗೆಲುವು ಪಡೆಯಿತು. 23ರ ವಯಸ್ಸಿನ ಮಾನವ್‌ ಸುತಾರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಮಾನವ್‌ ಸುತಾರ್‌, ಅಂತಾರಾಷ್ಟ್ರೀಯ ಕ್ರಿಕೆಟ್ ಸುಲಭ ಎಂಬ ಕಲ್ಪನೆಯನ್ನು ತಕ್ಷಣವೇ ತಳ್ಳಿಹಾಕಿದರು. ಈ ಮಟ್ಟದ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಸಾಕಷ್ಟು ಕಲಿಕೆ ಮತ್ತು ಹೊಂದಾಣಿಕೆ ಅಗತ್ಯವಿದ್ದು, ಅದರ ಸವಾಲುಗಳನ್ನು ಎದುರಿಸುವುದು ಸುಲಭದ ಕೆಲಸವಲ್ಲ ಎಂದು ಅವರು ಒತ್ತಿ ಹೇಳಿದರು. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಸ್ಪರ್ಧಾತ್ಮಕತೆ ಮತ್ತು ಒತ್ತಡವು ಆಟಗಾರರಿಗೆ ನಿರಂತರವಾಗಿ ಹೊಸ ಪಾಠಗಳನ್ನು ಕಲಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

IND vs IRE: ಜಸ್‌ಪ್ರೀತ್‌ ಬುಮ್ರಾ ಭವಿಷ್ಯದ ಪಾತ್ರದ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಪ್ರಶ್ನೆ!

"ಇಲ್ಲ ಸರ್, ಅಷ್ಟೇನೂ ಸುಲಭವಾಗಿರಲಿಲ್ಲ. ಅದು ನನಗೆ ತುಂಬಾ ಅವಾಸ್ತವಿಕ ಅನುಭವದಂತಿತ್ತು. ಭಾರತ ತಂಡದ ಪರ ಆಡಬೇಕು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬುದು ನನ್ನ ಆರಂಭಿಕ ದಿನಗಳಿಂದಲೂ ಇದ್ದ ಕನಸಾಗಿತ್ತು. ಆದ್ದರಿಂದ ಅದು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣವಾಗಿದ್ದು, ನಿಜ ಹೇಳಬೇಕೆಂದರೆ ಆ ಅನುಭವ ಇನ್ನೂ ಕನಸಿನಂತೆಯೇ ಅನಿಸುತ್ತಿದೆ," ಎಂದು ಮಾನವ್‌ ಸುತಾರ್‌ ಹೇಳಿದ್ದಾರೆ.

"ನಾನು ಕಲಿತ ಅತಿ ದೊಡ್ಡ ಪಾಠವೆಂದರೆ ಸ್ಥಿರತೆ ಅತ್ಯಂತ ಮುಖ್ಯ. ಬೌಲರ್ ಆಗಿ ನೀವು ಒಂದೇ ಪ್ರದೇಶದಲ್ಲಿ ನಿರಂತರವಾಗಿ ಚೆಂಡು ಎಸೆಯುತ್ತಿರಬೇಕು. ನನ್ನ ಅನಿಸಿಕೆಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಅತ್ಯಂತ ಪ್ರಮುಖ ಅಂಶ. ಇದು ಆಟಗಾರರಿಂದ ಅಪಾರ ತಾಳ್ಮೆಯನ್ನು ಬೇಡುವ ಮಾದರಿಯಾಗಿದೆ," ಎಂದು ತಿಳಿಸಿದ್ದಾರೆ.

IND vs AFG: 6 ವಿಕೆಟ್‌ ಸಾಧನೆ ಮಾಡಿದ ಮಾನವ್‌ ಸುತಾರ್‌ ಬಗ್ಗೆ ಸುನೀಲ್‌ ಗವಾಸ್ಕರ್‌ ದೊಡ್ಡ ಭವಿಷ್ಯ!

ರಾಜಸ್ಥಾನದ ಶ್ರೀ ಗಂಗಾ ನಗರ ಮೂಲದ ಸುತಾರ್‌ ಅವರ ಪರಿಪಕ್ವ ಹಾಗೂ ಸಮತೋಲಿತ ಮನೋಭಾವವು ದೇಶಿ ಕ್ರಿಕೆಟ್‌ನಲ್ಲಿ ಅವರು ನಡೆಸಿದ ದೀರ್ಘಕಾಲದ ಶ್ರಮ ಮತ್ತು ಅನುಭವವನ್ನು ಪ್ರತಿಬಿಂಬಿಸಿತು. ಪಂದ್ಯದ ಮೂರನೇ ದಿನ ಅಫ್ಘಾನಿಸ್ತಾನ ತಂಡ ಎರಡು ಬಾರಿ ಆಲ್‌ಔಟ್‌ ಆದಾಗ ಸುತಾರ್ ಅವರ ಸಾಮರ್ಥ್ಯ ಮತ್ತಷ್ಟು ಸ್ಪಷ್ಟವಾಗಿ ಗೋಚರಿಸಿತು.

ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಆದ ಬಳಿಕ ಫಾಲೋ-ಆನ್ ಎದುರಿಸಿದ ಪ್ರವಾಸಿ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಕೇವಲ 112 ರನ್‌ಗಳಿಗೆ ಸೀಮಿತವಾಯಿತು. ಇದರೊಂದಿಗೆ ಭಾರತ ತಂಡ ಕೇವಲ ಮೂರು ದಿನಗಳಲ್ಲೇ ಭರ್ಜರಿ ಜಯವನ್ನು ದಾಖಲಿಸಿತು.