ನವದೆಹಲಿ: ದೇವದತ್ ಪಡಿಕ್ಕಲ್ (Devdutt Padikkal) ಶತಕ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ಬಲದಿಂದ ಭಾರತ ತಂಡ, ಶ್ರೀಲಂಕಾ XI ವಿರುದ್ದದ ಅಭ್ಯಾಸ ಪಂದ್ಯದ (IND vs SL XI) ಎರಡನೇ ದಿನ ಬಲವಾಗಿ ಕಮ್ಬ್ಯಾಕ್ ಮಾಡಿದೆ. ಆತಿಥೇಯರು ಪ್ರಥಮ ಇನಿಂಗ್ಸ್ ಅನ್ನು 363 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡ ಬಳಿಕ, ಪ್ರಥಮ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ, ಶನಿವಾರದ ದಿನದಾಟದ ಅಂತ್ಯಕ್ಕೆ 90 ಓವರ್ಗಳಿಗೆ 6 ವಿಕೆಟ್ಗಳ ನಷ್ಟಕ್ಕೆ 357 ರನ್ಗಳನ್ನು ಕಲೆ ಹಾಕಿದೆ ಹಾಗೂ ಕೇವಲ 6 ರನ್ಗಳ ಹಿನ್ನಡೆಯಲ್ಲಿದೆ. ಭಾನುವಾರ ಮೂರನೇ ಹಾಗೂ ಪಂದ್ಯದ ಕೊನೆಯ ದಿನದಾಟ ಉಳಿದಿದ್ದು ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗುವ ಸಾಧ್ಯತೆ ಇದೆ.
ಶ್ರೀಲಂಕಾ ಇಲೆವೆನ್ ಮೊದಲ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಬಹುಬೇಗ ಯಶಸ್ವಿ ಜೈಸ್ವಾಲ್ ಅವರನ್ನು ಕಳೆದುಕೊಂಡಿತು. ಆದರ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು 164 ಎಸೆತಗಳಲ್ಲಿ 18 ಮನಮೋಹಕ ಬೌಂಡರಿಗಳೊಂದಿಗೆ ಅಜೇಯ 142 ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ ಸಾಯಿ ಸುದರ್ಶನ್ ಅನುಪಸ್ಥಿತಿಯಲ್ಲಿ ಭಾರತ ತಂಡದಲ್ಲಿ ಮೂರನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯುವಲ್ಲಿ ವೆಸ್ಟ್ ಇಂಡೀಸ್ ಮತ್ತೊಮ್ಮೆ ವಿಫಲ!
ರಾಹುಲ್-ಪಡಿಕ್ಕಲ್ ಜುಗಲ್ಬಂದಿ
ದೇವದತ್ ಪಡಿಕ್ಕಲ್ ಶತಕ ಸಿಡಿಸಿದರ ಜೊತೆಗೆ ಕೆಎಲ್ ರಾಹುಲ್ ಅವರ ಜೊತೆಗೆ 96 ರನ್ಗಳ ಮಹತ್ವದ ಜೊತೆಯಾಟವನ್ನು ಆಡಿದರು. ಇನಿಂಗ್ಸ್ ಆರಂಭಿಸಿ ಅದ್ಭುತವಾಗಿ ಬ್ಯಾಟ್ ಮಾಡುತ್ತಿದ್ದ ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್ 67 ಎಸೆತಗಳಲ್ಲಿ 40 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದರು. ಆದರೆ, ಅವರನ್ನು ಕೇಶಾರ ನುವಂತ ಔಟ್ ಮಾಡಿದರು. ಪಡಿಕ್ಕಲ್ 103 ರನ್ ಗಳಿಸಿದ್ದ ವೇಳೆ ರಿಟೈರ್ಡ್ ಹರ್ಟ್ ಆಗಿದ್ದರು. ಇತರ ಬ್ಯಾಟರ್ಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅವರನ್ನು ಮೈದಾನದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಬಳಿಕ ಮತ್ತೆ ಬ್ಯಾಟಿಂಗ್ಗೆ ಮರಳಿದ ಪಡಿಕ್ಕಲ್ 142 ರನ್ ಗಳಿಸಿ ಅಜೇಯರಾಗಿದ್ದಾರೆ.
ಶ್ರೀಲಂಕಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ ಇಬ್ಬರು ವಿಕೆಟ್ಕೀಪರ್ ಬ್ಯಾಟರ್ಗಳಾದ ರಿಷಭ್ ಪಂತ್ ಮತ್ತು ಧ್ರುವ್ ಜುರೇಲ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಪಂತ್ 2 ರನ್ ಗಳಿಸಿ, ಜುರೇಲ್ ಕೇವಲ 1 ರನ್ ಗಳಿಸಿ ರಮೇಶ್ ಮೆಂಡಿಸ್ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ರವೀಂದ್ರ ಜಡೇಜಾ ಮತ್ತು ಮಾನವ್ ಸುತಾರ್ ನಡುವೆ 76 ರನ್ಗಳ ಜೊತೆಯಾಟ ಮೂಡಿಬಂತು. ಜಡೇಜಾ ಉತ್ತಮ ಬ್ಯಾಟಿಂಗ್ ನಡೆಸಿ ಅರ್ಧಶತಕ ಪೂರ್ಣಗೊಳಿಸಿದರು. ಅವರು 63 ರನ್ ಗಳಿಸಿ ರಿಟೈರ್ಡ್ ಹರ್ಟ್ ಆದರು.
ಜಡೇಜಾ ಬಳಿಕ ಕ್ರೀಸ್ಗೆ ಬಂದ ಕುಲ್ದೀಪ್ ಯಾದವ್ ಕೇವಲ 1 ರನ್ ಗಳಿಸಿ ರಿಟೈರ್ಡ್ ಹರ್ಟ್ ಆದರು. ಮತ್ತೊಂದೆಡೆ, ಮಾನವ್ ಸುತಾರ್ 41 ರನ್ಗಳ ಉಪಯುಕ್ತ ಇನಿಂಗ್ಸ್ ಆಡಿದರು. ಆದರೆ ಅಸಂಕ ಮನೋಜ್ ಅವರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಆಗಿ ಔಟಾದರು. ಅಭ್ಯಾಸ ಪಂದ್ಯದ ಮೂಲಕ ಭಾರತ ತಂಡದ ಬ್ಯಾಟಿಂಗ್ ಕ್ರಮ ಹಾಗೂ ಆಟಗಾರರ ಸಿದ್ಧತೆಯನ್ನು ಪರೀಕ್ಷಿಸಲಾಗುತ್ತಿದ್ದು, ದೇವದತ್ ಪಡಿಕ್ಕಲ್ ಮತ್ತು ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಪ್ರದರ್ಶನ ತಂಡದ ಪಾಲಿಗೆ ಗಮನಾರ್ಹವಾಗಿದೆ.
ಅಸಂಕ ಮನೋಜ್ ಅವರ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಔಟಾದ ಬಳಿಕ ದೇವದತ್ ಪಡಿಕ್ಕಲ್ ಮತ್ತೊಮ್ಮೆ ಕ್ರೀಸ್ಗೆ ಮರಳಿದರು. ಇದು ಅಭ್ಯಾಸ ಪಂದ್ಯವಾಗಿರುವ ಕಾರಣ ಪಡಿಕ್ಕಲ್ಗೆ ಮತ್ತೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆಯಿತು. ಸಾಮಾನ್ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಯಾವುದೇ ಗಾಯವಿಲ್ಲದೆ ಬ್ಯಾಟರ್ ಸ್ವಯಂ ಮೈದಾನದಿಂದ ಹೊರನಡೆದರೆ ಅವರನ್ನು ರಿಟೈರ್ಡ್ ಔಟ್ ಎಂದು ಪರಿಗಣಿಸಲಾಗುತ್ತದೆ. ಈ ವೇಳೆ ಮತ್ತೆ ಬ್ಯಾಟ್ ಮಾಡಲು ಅವಕಾಶ ಇರುವುದಿಲ್ಲ. ಆದರೆ ಅಭ್ಯಾಸ ಪಂದ್ಯದಲ್ಲಿ ಆಟಗಾರರಿಗೆ ಹೆಚ್ಚಿನ ಅಭ್ಯಾಸದ ಅವಕಾಶ ನೀಡುವ ಉದ್ದೇಶದಿಂದ ಪಡಿಕ್ಕಲ್ ಮತ್ತೆ ಕಣಕ್ಕಿಳಿದರು. ಸಾರಾಂಶ್ ಜೈನ್ ಜೊತೆಗೂಡಿ ಪಡಿಕ್ಕಲ್ ಭಾರತ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. 22 ರನ್ ಗಳಿಸಿದ ಬಳಿಕ ಸಾರಾಂಶ್ ಕೂಡ ರಿಟೈರ್ಡ್ ಹರ್ಟ್ ಆದರು.
2026-27ರ ದೇಶಿ ಋತುವಿನ ನಿಮಿತ್ತ ಕರ್ನಾಟಕ ಕ್ರಿಕೆಟ್ ತಂಡಕ್ಕೆ ವಿನಯ್ ಕುಮಾರ್ ಹೆಡ್ ಕೋಚ್?
ಅಂತಿಮ ಓವರ್ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಬ್ರಾರ್
ಇನಿಂಗ್ಸ್ನ ಅಂತಿಮ ಹಂತದಲ್ಲಿ ಗುರುನೂರ್ ಬ್ರಾರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 18 ಎಸೆತಗಳಲ್ಲಿ 36 ರನ್ ಸಿಡಿಸಿದ ಅವರು ತಮ್ಮ ಇನಿಂಗ್ಸ್ನಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದರು. ದಿನದ ಕೊನೆಯ ಓವರ್ನಲ್ಲಿ ಎಡಗೈ ಸ್ಪಿನ್ನರ್ ದಿಲುಮ್ ಸುಧೀರಾ ಅವರ ಬೌಲಿಂಗ್ನಲ್ಲಿ ಬ್ರಾರ್ ಸತತ ನಾಲ್ಕು ಸಿಕ್ಸರ್ ಸಿಡಿಸಿದರು. ಇದರಿಂದ ಭಾರತ ತಂಡದ ಮೊತ್ತ 357 ರನ್ಗಳಿಗೆ ಏರಿತು. ಪಡಿಕ್ಕಲ್ 164 ಎಸೆತಗಳಲ್ಲಿ 18 ಬೌಂಡರಿಗಳ ನೆರವಿನಿಂದ 142 ರನ್ ಗಳಿಸಿ ಅಜೇಯರಾಗಿದ್ದಾರೆ. ಬ್ರಾರ್ ಮತ್ತು ಪಡಿಕ್ಕಲ್ ಕೇವಲ 30 ಎಸೆತಗಳಲ್ಲಿ 51 ರನ್ಗಳ ಜೊತೆಯಾಟ ಕಟ್ಟಿದ್ದಾರೆ.