ನವದೆಹಲಿ: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಸ್ತವ್ಯಸ್ತ ಸಿದ್ಧತೆಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ (Nasser Hussain) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಕೈ ಸ್ಪೋರ್ಟ್ಸ್ ಪಾಡ್ಕಾಸ್ಟ್ನಲ್ಲಿ ಮೈಕೆಲ್ ಅಥರ್ಟನ್ ಅವರೊಂದಿಗೆ ಮಾತನಾಡಿದ ಹುಸೇನ್, ಪ್ರಭಾವಿ ಕ್ರಿಕೆಟ್ ಮಂಡಳಿಗಳಿಗೆ ವಿಶೇಷವಾಗಿ ಭಾರತಕ್ಕೆ ಐಸಿಸಿ ನೀಡುತ್ತಿರುವ ಆದ್ಯತೆ ವಿಶ್ವ ಕ್ರಿಕೆಟ್ನ ಅಸಮತೋಲನವನ್ನು ಇನ್ನಷ್ಟು ಗಾಢಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಬಿಸಿಸಿಐ ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರ ಐಪಿಎಲ್ ಫ್ರಾಂಚೈಸಿ ಒಪ್ಪಂದವನ್ನು ರದ್ದುಗೊಳಿಸಿದ ನಂತರ ನಾಸರ್ ಹುಸೇನ್ ಈ ಹೇಳಿಕೆಯನ್ನು ನೀಡಿದ್ದಾರೆ. ಈ ನಿರ್ಧಾರದಿಂದ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿತು. ಇದರ ಪರಿಣಾಮವಾಗಿ ಅವರು ಅಂತಿಮವಾಗಿ ಟೂರ್ನಿಯನ್ನು ಬಹಿಷ್ಕರಿಸಿದ್ದಾರೆ.
ಮತ್ತೊಂದೆಡೆ ಬಾಂಗ್ಲಾದೇಶ ಪರವಾಗಿ ನಿಂತಿರುವ ಪಾಕಿಸ್ತಾನ ತಂಡ, ಗುಂಪು ಹಂತದಲ್ಲಿ ಭಾರತದ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಘೋಷಿಸಿದ ನಂತರ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿತು. ಟೂರ್ನಿ ಆರಂಭಕ್ಕೆ ಕೇವಲ ಒಂದು ವಾರ ಬಾಕಿ ಇರುವ ಸಂದರ್ಭದಲ್ಲಿ ಈ ಬೆಳವಣಿಗೆಗಳು ಟೂರ್ನಿಯನ್ನು ಮತ್ತಷ್ಟು ಅನಿಶ್ಚಿತತೆಗೆ ತಳ್ಳಿವೆ.
ಅನುಮತಿಯಿಲ್ಲದೆ ವಿಡಿಯೊ ತೆಗೆದ ಅರ್ಷದೀಪ್ಗೆ ಎಚ್ಚರಿಕೆ ನೀಡಿದ ತಿಲಕ್ ವರ್ಮಾ; ವಿಡಿಯೊ ವೈರಲ್
ಬಾಂಗ್ಲಾ, ಪಾಕ್ ಪರ ನಾಸರ್ ಹುಸೇನ್ ಬ್ಯಾಟಿಂಗ್
ಐಸಿಸಿ ತನ್ನ ನಿಲುವಿನಲ್ಲಿ ಎಲ್ಲಾ ಸಮಯದಲ್ಲಿಯೂ ಪಾಲಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಎತ್ತಿದ ನಾಸರ್ ಹುಸೇನ್, ಸರ್ಕಾರದ ನಿರ್ಬಂಧಗಳು ಅಥವಾ ಭದ್ರತಾ ಆತಂಕಗಳನ್ನು ಉಲ್ಲೇಖಿಸಿ ಭಾರತ ತಂಡವೇ ಪ್ರಯಾಣಿಸಲು ನಿರಾಕರಿಸಿದ್ದರೆ, ಅಂತಾರಾಷ್ಟ್ರೀಯ ಸಂಸ್ಥೆ ಇದೇ ರೀತಿಯ ಕಠಿಣ ನಿಲುವು ತೆಗೆದುಕೊಳ್ಳುತ್ತಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.
“ಟೂರ್ನಿಗೆ ಒಂದು ತಿಂಗಳು ಬಾಕಿ ಇರುವಾಗ ಭಾರತ ತಂಡವೇ ‘ನಮ್ಮ ಸರ್ಕಾರವು ವಿಶ್ವಕಪ್ ಟೂರ್ನಿಗಾಗಿ ನಿರ್ದಿಷ್ಟ ದೇಶದಲ್ಲಿ ಆಡಲು ನಮಗೆ ಅನುಮತಿ ನೀಡಿಲ್ಲ’ ಎಂದು ಹೇಳಿದ್ದರೆ, ಐಸಿಸಿ ಇಷ್ಟು ಕಠಿಣವಾಗಿ ನಡೆದು ‘ನಿಯಮಗಳು ಸ್ಪಷ್ಟವಾಗಿವೆ, ದುರಾದೃಷ್ಟ, ನಾವು ನಿಮಗೆ ಹೊರಗಿಡುತ್ತಿದ್ದೇವೆ’ ಎಂದು ಹೇಳುತ್ತಿತ್ತೇ?” ಎಂದು ನಾಸರ್ ಹುಸೇನ್ ಪ್ರಶ್ನಿಸಿದ್ದಾರೆ.
ಟಿ20 ವಿಶ್ವಕಪ್ಗೆ ಭಾರತ ಆಡುವ ಬಳಗ ಫೈನಲ್; ಸಂಜುಗಿಲ್ಲ ಅವಕಾಶ
“ಎಲ್ಲರೂ ಕೇಳುತ್ತಿರುವ ಏಕೈಕ ಪ್ರಶ್ನೆಯೆಂದರೆ ಸ್ಥಿರವಾಗಿ ನಡೆದುಕೊಳ್ಳುವುದು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತ ಸೇರಿದಂತೆ ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳಬೇಕು. ಹೌದು, ಭಾರತ ಅಭಿಮಾನಿಗಳು ‘ಇನ್ನಷ್ಟು ಕಣ್ಣೀರು ಹಾಕಿ, ನಮ್ಮ ಬಳಿ ಹಣವಿದೆ!’ ಎಂದು ಹೇಳಬಹುದು. ಆದರೆ ಶಕ್ತಿಯೊಂದಿಗೆ ಹೊಣೆಗಾರಿಕೆಯೂ ಬರುತ್ತದೆ. ಬಾಂಗ್ಲಾದೇಶ ಅಥವಾ ಪಾಕಿಸ್ತಾನವನ್ನು ನಿರಂತರವಾಗಿ ಕುಗ್ಗಿಸುವುದು ಅವರ ಕ್ರಿಕೆಟ್ಗೆ ಧಕ್ಕೆ ತರುತ್ತದೆ. ಅದಕ್ಕಾಗಿಯೇ ಭಾರತ–ಪಾಕಿಸ್ತಾನ ಅಥವಾ ಭಾರತ–ಬಾಂಗ್ಲಾದೇಶ ನಡುವಿನ ಒಮ್ಮೆ ಬಲಿಷ್ಠವಾಗಿದ್ದ ಪಂದ್ಯಗಳು ಕಾಲಕ್ರಮೇಣ ಏಕಪಕ್ಷೀಯವಾಗಿವೆ,” ಎಂದು ಅವರು ಹೇಳಿದ್ದಾರೆ.