ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಅದು ನನ್ನ ಹೇಳಿಕೆಯಲ್ಲʼ: ಭಾರತ ನಾಯಕತ್ವದಿಂದ ತೆಗೆದ ಬಗ್ಗೆ ಸೂರ್ಯಕುಮಾರ್‌ ಪ್ರತಿಕ್ರಿಯೆ!

ಭಾರತ ಟಿ20 ತಂಡದ ನಾಯಕತ್ವದಿಂದ ಕೈಬಿಟ್ಟ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸೋಶಿಯಲ್‌ ಮೀಡಿಯಾ ಹೇಳಿಕೆ ಬಗ್ಗೆ ಸ್ವತಃ ಸೂರ್ಯಕುಮಾರ್‌ ಯಾದವ್‌ ಅವರೇ ಸ್ಪಷ್ಟನೆ ನೀಡಿದ್ದಾರೆ. ಇದು ನನ್ನ ಹೇಳಿಕೆಯಲ್ಲ, ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡಕ್ಕೆ ನನ್ನ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.

ಸೋಶಿಯಲ್‌ ಮೀಡಿಯಾ ನಕಲಿ ಹೇಳಿಕೆ ಬಗ್ಗೆ ಸೂರ್ಯ ಸ್ಪಷ್ಟನೆ.

ನವದೆಹಲಿ: ಭಾರತ ಟಿ20 ತಂಡದ (Indian Cricket Team) ನಾಯಕತ್ವದಿಂದ ಕೆಳಗೆ ಇಳಿಸಿದ್ದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದ ತಮ್ಮದೇ ಎನ್ನಲಾದ ಅಸಮಾಧಾನ ಹೇಳಿಕೆಯ ಬಗ್ಗೆ ಸೂರ್ಯಕುಮಾರ್‌ ಯಾದವ್‌ (Suryakumar yadav) ಪ್ರತಿಕ್ರಿಯೆ ನೀಡಿದ್ದಾರೆ. ಇದು ನನ್ನ ಹೇಳಿಕೆಯಲ್ಲ, ಯಾರೋ ನನ್ನ ಹೆಸರಿನಲ್ಲಿ ಈ ರೀತಿ ನಕಲಿ ಹೇಳಿಕೆಯನ್ನು ಸೃಷ್ಟಿ ಮಾಡಿದ್ದಾರೆ. ಆದರೆ, ಬಿಸಿಸಿಐ ತೆಗೆದುಕೊಂಡ ನಿರ್ಧಾರದ ಬಗ್ಗೆ ನನಗೆ ಯಾವಾಗಲೂ ಗೌರವ ಹಾಗೂ ಬೆಂಬಲವಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡಕ್ಕೆ ನನ್ನ ಕಡೆಯಿಂದ ಯಾವಾಗಲೂ ಬೆಂಬಲ ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್‌ ಗೆಲುವಿನ ಬಳಿಕ ರೋಹಿತ್‌ ಶರ್ಮಾ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ವೇಳೆ ಸೂರ್ಯಕುಮಾರ್‌ ಯಾದವ್‌ ಅವರು ಭಾರತ ಟಿ20ಐ ತಂಡಕ್ಕೆ ನಾಯಕನಾಗಿದ್ದರು. ಅವರು ನಾಯಕತ್ವದಲ್ಲಿ ಭಾರತ ತಂಡ ಸಕ್ಸಸ್‌ ಆಗಿದೆ. ಅದರಲ್ಲಿಯೂ ವಿಶೇಷವಾಗಿ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಮೂರನೇ ಬಾರಿ ಚಾಂಪಿಯನ್‌ ಆಗಿತ್ತು. ಆದರೆ, ಸೂರ್ಯ ನಾಯಕತ್ವದಲ್ಲಿ ಯಶಸ್ವಿಯಾದರೆ, ಬ್ಯಾಟ್ಸ್‌ಮನ್‌ ಆಗಿ ಸತತ ವಿಫಲರಾಗಿದ್ದರು.

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಗ್ಗೆ ಸೂರ್ಯಕುಮಾರ್‌ ಯಾದವ್‌ ಪ್ರತಿಕ್ರಿಯೆ!

ಕಳೆದ 2026ರ ಐಪಿಎಲ್‌ ಟೂರ್ನಿಯಲ್ಲಿಯೂ ಅವರು ವಿಫಲರಾಗಿದ್ದರು. ಅಲ್ಲದೆ 2028ರ ಟಿ20 ವಿಶ್ವಕಪ್‌ ಹಾಗೂ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದು ಬಿಸಿಸಿಐ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೈ ಬಿಟ್ಟು, ಅವರ ಸ್ಥಾನಕ್ಕೆ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಿದೆ. ಸೂರ್ಯ ಅವರನ್ನು ಕನಿಷ್ಠ ತಂಡದಲ್ಲಿಯೂ ಉಳಿಸಿಕೊಳ್ಳಲಿಲ್ಲ. ಇದಾದ ಬಳಿಕ ಸೂರ್ಯಕುಮಾರ್‌ ಯಾದವ್‌ ಅವರ ಹಸರಿನ ಹೇಳಿಕೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ವೈರಲ್‌ ಆಗಿದ್ದ ಸೂರ್ಯಕುಮಾರ್‌ ಯಾದವ್‌ ನೀಡಿದ್ದಾರೆನ್ನಲ್ಲಾಗುವ ಹೇಳಿಕೆಯಲ್ಲಿ, "ನನಗೆ ನನ್ನ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ನೀಡದೇ ಇರುವುದು ನನಗೆ ತುಂಬಾ ಬೇಸರ ಮೂಡಿಸಿದೆ. ಟಿ20 ವಿಶ್ವಕಪ್‌ ಗೆಲುವಿನ ಬಳಿಕ, ನೀವು ನಾಯಕನಾಗಿ ಮುಂದುವರಿಯುತ್ತೀರಿ ಎಂದು ಆಯ್ಕೆದಾರರು ಹೇಳಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಕನಿಷ್ಠ ತಂಡದಲ್ಲಿಯೂ ನನ್ನ ಹೆಸರು ಇರಲಿಲ್ಲ. ತಂಡಕ್ಕಾಗಿ ನಾನು ಏನು ಮಾಡಿದ್ದೇನೆಂಬುದರ ಆಧಾರದ ಮೇಲೆ ನಾನು ಗೌರವಕ್ಕೆ ಅರ್ಹನಾಗಿದ್ದೆ. ಇದನ್ನು ನೋಡಿದಾಗ, ನನ್ನ ಕಠಿಣ ಪರಿಶ್ರಮವನ್ನು ಮರೆತಿದ್ದಾರೆಂದು ನನಗೆ ಅನಿಸಿತು. ನನಗೆ ಅವಕಾಶವಿಲ್ಲ, ಆದರೆ, ಅವರಿಗೆ ನನ್ನ ಅಗತ್ಯವಿಲ್ಲ ಎಂಬುದು ವಾಸ್ತವ," ಎಂದು ಬರೆಯಲಾಗಿದೆ.‌



ಇದರ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ ಸೂರ್ಯಕುಮಾರ್‌ ಯಾದವ್‌, "ತಂಡದ ಯಶಸ್ಸಿನ ಬಗ್ಗೆ ನನಗೆ ತುಂಬಾ ಸಂತೋಷವಿದೆ ಹಾಗೂ ಇದಕ್ಕಾಗಿ ಹೃದಯಪೂರ್ವಕ ಶುಭಾಶಯಗಳು. ಭಾರತ ತಂಡ ಯಾವಾಗಲೂ ಉತ್ತಮ ಪ್ರದರ್ಶನವನ್ನು ತೋರಲಿ ಎಂದು ಹಾರೈಸುತ್ತೇನೆ," ಎಂದು ಹೇಳಿದ್ದಾರೆ.



"ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಒಂದು ಹೇಳಿಕೆ ಸಿಕ್ಕಾಪಟ್ಟೆ ವೈರಲ್‌ ಆಗಿರುವುದು ನನ್ನ ಗಮನಕ್ಕೆ ಬಂದಿದೆ ಹಾಗೂ ಆ ಹೇಳಿಕೆ ಸಂಪೂರ್ಣ ಸುಳ್ಳು. ಈ ಹೇಳಿಕೆಯನ್ನು ನಾನು ನೀಡಿಲ್ಲ ಹಾಗೂ ಪ್ರಕಟಿಸಲು ನಾನು ಅನುಮತಿಯನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಮಾಹಿತಿಯನ್ನು ಪರಿಶೀಲಿಸದೆ ನಂಬಬೇಡಿ ಅಥವಾ ಶೇರ್‌ ಮಾಡಬೇಡಿ. ಭಾರತೀಯ ಕ್ರಿಕೆಟ್‌, ನನ್ನ ಸಹ ಆಟಗಾರರು ಮತ್ತು ಕ್ರಿಕೆಟ್‌ ಮೇಲಿನ ನನ್ನ ಬೆಂಬಲ ನನ್ನ ನಡೆ-ನುಡಿ ಮತ್ತು ಕಾರ್ಯಗಳಿಂದಲೇ ತಿಳಿಯುತ್ತದೆ," ಎಂದು ಸೂರ್ಯಕುಮಾರ್‌ ಯಾದವ್‌ ಹೇಳಿದ್ದಾರೆ.