ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ (IND vs ENG) ಮುನ್ನ ಶುಭಮನ್ ಗಿಲ್ ಅವರ ನಾಯಕತ್ವದ ಭಾರತ ತಂಡಕ್ಕೆ ಭಾರಿ ಆಘಾತವಾಗಿದೆ. ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದು, ಮೂರನೇ ಒಡಿಐನಿಂದ ಹೊರ ನಡೆದಿದ್ದಾರೆ. ಕಾರ್ಡಿಫ್ನಲ್ಲಿ ನಡೆದಿದ್ದ ಎರಡನೇ ಪಂದ್ಯದ ವೇಳೆ ಚೆನ್ನೈ ಮೂಲಕ ಆಟಗಾರ ಬಲಗಾಲಿನ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಮೂರನೇ ಪಂದ್ಯದಲ್ಲಿ ಅವರ ಸ್ಥಾನಕ್ಕೆ ಹರ್ಷ್ ದುಬೇಗೆ ಸ್ಥಾನವನ್ನು ನೀಡಲಾಗಿದೆ ಎಂದು ಬಿಸಿಸಿಐ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ನೀಡಿದ ಮಾಹಿತಿಯ ಪ್ರಕಾರ, ಸೋಫಿಯಾ ಗಾರ್ಡನ್ಸ್ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದಾರೆ. ಗಾಯದ ತೀವ್ರತೆಯನ್ನು ತಿಳಿದುಕೊಳ್ಳಲು ಅವರಿಗೆ ಸ್ಕ್ಯಾನ್ ನಡೆಸಲಾಗುವುದು. ಬಳಿಕ ವೈದ್ಯರ ಸಲಹೆ ಪಡೆದು ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸುಂದರ್ ಅವರ ಅನುಪಸ್ಥಿತಿಯಲ್ಲಿ, ಭಾನುವಾರ ಲಂಡನ್ನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಆಯ್ಕೆ ಸಮಿತಿಯು ಸ್ಪಿನ್ ಬೌಲಿಂಗ್ ಆಲ್ರೌಂಡರ್ ಹರ್ಷ ದುಬೆ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.
IND vs ENG: ಕೆಎಲ್ ರಾಹುಲ್ ಇನ್? ಮೂರನೇ ಒಡಿಐಗೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!
ವಾಷಿಂಗ್ಟನ್ ಸುಂದರ್ ಅವರ ಗಾಯವು ಈಗಾಗಲೇ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿರುವ ಭಾರತ ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. 26ರ ವಯಸ್ಸಿನ ಸುಂದರ್, ಕಾರ್ಡಿಫ್ನಲ್ಲಿ ತಮ್ಮ ಅಲ್ಪಾವಧಿಯ ಬ್ಯಾಟಿಂಗ್ ವೇಳೆ ಒಂದು ರನ್ ಪೂರ್ಣಗೊಳಿಸುವ ಸಂದರ್ಭ ಗಾಯಗೊಂಡಿದ್ದರು. ಅವರು ಐದು ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿದ್ದು, ಗಾಯಗೊಂಡ ನಂತರ ತಂಡದ ಫಿಸಿಯೊ ಅವರಿಂದ ದೀರ್ಘಕಾಲ ಚಿಕಿತ್ಸೆ ಪಡೆದರು. ಬಳಿಕ ಬಲ ತೊಡೆಗೆ ಬಿಗಿಯಾಗಿ ಬ್ಯಾಂಡೇಜ್ ಕಟ್ಟಿಕೊಂಡೇ ಬ್ಯಾಟಿಂಗ್ ಮುಂದುವರಿಸಿದರು. ಆದರೆ ಸಾಕಿಬ್ ಮಹಮೂದ್ ಎಸೆತದಲ್ಲಿ ವಿಕೆಟ್ಕೀಪರ್ಗೆ ಕ್ಯಾಚ್ ನೀಡಿ ಔಟಾದರು. ಇಂಗ್ಲೆಂಡ್ನ ರನ್ ಚೇಸ್ ವೇಳೆ ವಾಷಿಂಗ್ಟನ್ ಮೈದಾನಕ್ಕಿಳಿಯಲಿಲ್ಲ.
ಎಜ್ಬಾಸ್ಟನ್ನಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್
ಎಜ್ಬಾಸ್ಟನ್ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದ ವಾಷಿಂಗ್ಟನ್ ಸುಂದರ್ ಅವರ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. 259 ರನ್ಗಳ ಗುರಿ ಬೆನ್ನಟ್ಟಿದ ಭಾರತ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಅಜೇಯ 52 ರನ್ಗಳ ಅಮೂಲ್ಯ ಇನಿಂಗ್ಸ್ ಆಡಿದ ಸುಂದರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ಅಕ್ಷರ್ ಪಟೇಲ್ ಅವರೊಂದಿಗೆ ಶತಕದ ಜೊತೆಯಾಟ ನಿರ್ಮಿಸಿ, ಭಾರತವನ್ನು ಆರು ವಿಕೆಟ್ಗಳ ಗೆಲುವಿನತ್ತ ಮುನ್ನಡೆಸಿದ್ದರು. ಈ ಜಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತ್ತು.
IND vs ENG: ಲಾರ್ಡ್ಸ್ನಲ್ಲಿ ರೋಹಿತ್ ಶರ್ಮಾಗೆ ಕೊನೆಯ ಪಂದ್ಯವೇ? ಸ್ಪಷ್ಟನೆ ನೀಡಿದ ಬಿಸಿಸಿಐ ಸೆಕ್ರೆಟರಿ!
ಹರ್ಷ್ ದುಬೇಗೆ ಅವಕಾಶ
ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ಅವಕಾಶ ಪಡೆದಿರುವ ಹರ್ಷ ದುಬೆ, ಇದೀಗ ತಮ್ಮ ಪ್ರತಿಭೆ ಸಾಬೀತುಪಡಿಸುವ ಸುವರ್ಣಾವಕಾಶ ಪಡೆದಿದ್ದಾರೆ. ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿರುವ ದುಬೆ, ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆದಿದ್ದರು. ಧರ್ಮಶಾಲಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಅವರು ಐದು ಓವರ್ಗಳಲ್ಲಿ 47 ರನ್ ನೀಡಿ ಮೂರು ವಿಕೆಟ್ ಕಬಳಿಸಿದ್ದರು. ಅವರ ಪರಿಣಾಮಕಾರಿ ಬೌಲಿಂಗ್ನಿಂದ ಅಫ್ಘಾನಿಸ್ತಾನ 194 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ಭಾರತ ಏಳು ವಿಕೆಟ್ಗಳ ಸುಲಭ ಗೆಲುವು ದಾಖಲಿಸಿತ್ತು.