ನವದೆಹಲಿ: ಗುಜರಾತ್ ಟೈಟನ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ (DC vs GT) ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ ಒಂದು ರನ್ನಿಂದ ಸೋಲು ಅನುಭವಿಸಿತು. ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್ ಅಗತ್ಯವಿದ್ದಾಗ ಡೇವಿಡ್ ಮಿಲ್ಲರ್ (David Miller) ಅವರು ವಿಫಲರಾದರು. ಪೆನಾಲ್ಟಿಮೇಟ್ ಎಸೆತದಲ್ಲಿ ನಾನ್ ಸ್ಟ್ರೈಕ್ನಲ್ಲಿದ್ದ ಕುಲ್ದೀಪ್ ಯಾದವ್ಗೆ ಸಿಂಗಲ್ ರನ್ ಪಡೆಯಲು ಡೇವಿಡ್ ಮಿಲ್ಲರ್ ನಿರಾಕರಿಸಿದ್ದರು. ಈ ನಿರ್ಧಾರವನ್ನು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಸಮರ್ಥಿಸಿಕೊಂಡಿದ್ದಾರೆ.
ಗಾಯದಿಂದ ಗುಣಮುಖರಾಗಿ ಮರಳಿದ ಡೇವಿಡ್ ಮಿಲ್ಲರ್, 20 ಎಸೆತಗಳಲ್ಲಿ 41 ರನ್ ಗಳಿಸಿ ಗಮನಾರ್ಹ ಇನಿಂಗ್ಸ್ ಆಡಿದರು. ಕೆಎಲ್ ರಾಹುಲ್ ಔಟ್ ಆದ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗುರಿ ಸಾಧಿಸುವುದು ಕಷ್ಟಕರವಾಯಿತು, ಕೊನೆಯ ಮೂರು ಓವರ್ಗಳಲ್ಲಿ 45 ರನ್ ಅಗತ್ಯವಿತ್ತು. ಮಿಲ್ಲರ್ ಆಕ್ರಮಣಕಾರಿ ಆಟವಾಡಿ 19ನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ವಿರುದ್ಧ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅಂತಿಮ ಓವರ್ನಲ್ಲಿ ಪ್ರಸಿಧ್ ಕೃಷ್ಣ ವಿರುದ್ಧವೂ ಬೌಂಡರಿ ದಾಟಿಸಿದರು.
ಬಳಿಕ ಕೊನೆಯ ಎರಡು ಚೆಂಡುಗಳಲ್ಲಿ ಎರಡು ರನ್ ಅಗತ್ಯವಿತ್ತು. 5ನೇ ಎಸೆತದಲ್ಲಿ ಮಿಲ್ಲರ್ ಚೆಂಡನ್ನು ಡೀಪ್ ಸ್ಕ್ವೇರ್ ಲೆಗ್ ಕಡೆಗೆ ಹೊಡೆದರೂ ಸ್ಟ್ರೈಕ್ ಉಳಿಸಿಕೊಳ್ಳಲು ರನ್ ಓಡಲಿಲ್ಲ. ಕೊನೆಯ ಚೆಂಡಿನಲ್ಲಿ ಪ್ರಸಿಧ್ ಉತ್ತಮ ಬೌಲ್ ಮಾಡಿ ಮಿಲ್ಲರ್ ಅವರನ್ನು ಬೀಟ್ ಮಾಡಿದರು. ಹಾಗಾಗಿ ಮಿಲ್ಲರ್ ಕನಿಷ್ಠ ರನ್ ಗಳಿಸಲೂ ಸಾಧ್ಯವಾಗಲಿಲ್ಲ ಮತ್ತು ಕುಲ್ದೀಪ್ ಯಾದವ್ ಸಮಯಕ್ಕೆ ಸರಿಯಾಗಿ ಕ್ರೀಸ್ ತಲುಪಲಿಲ್ಲ. ಪರಿಣಾಮ, ಗುಜರಾತ್ ಟೈಟನ್ಸ್ ಒಂದು ರನ್ ಅಂತರದಿಂದ ಜಯ ಸಾಧಿಸಿತು
ಡೇವಿಡ್ ಮಿಲ್ಲರ್ಗೆ ಸುನೀಲ್ ಗವಾಸ್ಕರ್ ಬೆಂಬಲ
ಪಂದ್ಯದ ನಂತರ ಸುನೀಲ್ ಗವಾಸ್ಕರ್, ಡೇವಿಡ್ ಮಿಲ್ಲರ್ ತೆಗೆದುಕೊಂಡ ನಿರ್ಧಾರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಅವರ ಪ್ರಕಾರ, ಆ ಸಂದರ್ಭದಲ್ಲಿ ಡೇವಿಡ್ ಮಿಲ್ಲರ್ ಅವರು ಸ್ಟ್ರೈಕ್ ಅನ್ನು ಕುಲ್ದೀಪ್ ಯಾದವ್ ಅವರಿಗೆ ನೀಡಿದ್ದರೆ ಉತ್ತಮವಾಗಿರಬಹುದಿತ್ತು ಎಂದು ಹೇಳಿದರು. ಆದಾಗ್ಯೂ, ಮುಂಚಿನ ಓವರ್ಗಳಲ್ಲಿ ತೋರಿಸಿದ ಉತ್ತಮ ಫಾರ್ಮ್ನ ಹಿನ್ನೆಲೆಯಲ್ಲಿ ಪಂದ್ಯವನ್ನು ಮುಕ್ತಾಯಗೊಳಿಸುವ ವಿಶ್ವಾಸ ಮಿಲ್ಲರ್ಗೆ ಇದ್ದದ್ದು ಸಹಜವೆಂದು ಗವಾಸ್ಕರ್ ಒಪ್ಪಿಕೊಂಡರು.
ರಾಹುಲ್, ಮಿಲ್ಲರ್ ಹೋರಾಟ ವ್ಯರ್ಥ; ಗುಜರಾತ್ಗೆ ರೋಚಕ ಒಂದು ರನ್ ಗೆಲುವು
“ಹೌದು, ಗೆಲುವಿನ ರನ್ಗಳನ್ನು ತಾನೇ ಹೊಡೆಯಬೇಕು ಎಂಬ ವಿಶ್ವಾಸ ಅವರಿಗೆ ಇತ್ತು. ಆದರೆ ಮೊದಲ ಚೆಂಡಿನಲ್ಲಿ ಕುಲ್ದೀಪ್ ಯಾದವ್ ಒಂದು ರನ್ ತೆಗೆದುಕೊಂಡ ರೀತಿಯನ್ನು ನೋಡಿದರೆ, ಬಹುಶಃ ಅವರು ಸ್ಟ್ರೈಕ್ ಅನ್ನು ಕುಲದೀಪ್ಗೆ ನೀಡಬೇಕಾಗಿತ್ತು,” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
“ಅವರು ಸ್ಟ್ರೈಕ್ ನೀಡಬೇಕಾಗಿತ್ತು. ಇದು ಎಲ್ಲವೂ ನಂತರ ಹೇಳುವ ಜಾಣ್ಮೆಯ ಮಾತುಗಳೇ ಸರಿ, ಆದರೆ ವಾಸ್ತವವೆಂದರೆ ಹಿಂದಿನ ಓವರ್ ಹಾಗೂ ಈ ಓವರ್ನಲ್ಲಿ ಅವರು ಹೊಡೆದ ರೀತಿಯನ್ನು ಗಮನಿಸಿದರೆ, ಅವರು ಗೆಲುವನ್ನು ಸಾಧಿಸಬಹುದು ಎಂಬ ನಂಬಿಕೆ ಹೊಂದಿದ್ದರು. ಆದ್ದರಿಂದ ಅವರನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಅವರಿಗೆ ಆತ್ಮವಿಶ್ವಾಸ ಇತ್ತು, ಆದರೆ ಪ್ರಸಿಧ್ ಕೃಷ್ಣ ಎಸೆದ ಆ ಎಸೆತ ಅತ್ಯುತ್ತಮವಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ,” ಎಂದು ಅವರು ಡೇವಿಡ್ ಮಿಲ್ಲರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.