ನವದೆಹಲಿ: ಕಾಲರ್ಬೋನ್ ಗಾಯದಿಂದ ಚೇತರಿಸಿಕೊಂಡು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮರಳಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ತುಂಬಾ ನೆರವು ನೀಡಿದೆ ಎಂದು ಟಿ ನಟರಾಜನ್ ತಿಳಿಸಿದ್ದಾರೆ. ಕಳೆದ ವರ್ಷ ತಾನು ಸಂಪೂರ್ಣವಾಗಿ ಫಿಟ್ ಇರಲಿಲ್ಲ. ಆದರೆ, ಅವರು ಸಂಯೋಜಿತ ಪುನಶ್ಚೇತನಕ ಕಾರ್ಯ ಮತ್ತು ತರಬೇತಿ ಬೆಂಬಲದ ಮೂಲಕ ನಿಧಾನವಾಗಿ ತಮ್ಮ ಲಯವನ್ನು ಮತ್ತೆ ಕಂಡುಕೊಂಡಿದ್ದರು. ಇದೀಗ ಅವರು 2026ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ.
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಟಿ ನಟರಾಜನ್ ಅವರನ್ನು ಗಾಯದ ಹೊರತಾಗಿಯೂ ಡೆಲ್ಲಿ ಫ್ರಾಂಚೈಸಿ 10. 75 ಕೋಟಿ ರು. ಗಳಿಗೆ ಖರೀದಿಸಿತ್ತು. ಅದರಂತೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಇದೀಗ ಅವರು ಹಿರಿಯ ವೇಗದ ಬೌಲರ್ಗಳ ಅನುಪಸ್ಥಿತಿಯಲ್ಲಿ ಡೆಲ್ಲಿ ಪರ ಅತ್ಯುತ್ತಮ ಬೌಲಿಂಗ್ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಅವರು ಗಾಯದಿಂದ ಗುಣಮುಖರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚೆಪಾಕ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಟಿ ನಟರಾಜನ್ ಅವರು ಗಾಯದ ಸಮಸ್ಯೆಗಳು ಮತ್ತು ಚೇತರಿಕೆಯ ಬಗ್ಗೆ ಮಾತನಾಡುತ್ತಾ, “ಕಳೆದ ವರ್ಷ ನನ್ನ ಕಾಲರ್ಬೋನ್ ಮುರಿದಿತ್ತು, ಇದು ಹಲವರಿಗೆ ತಿಳಿದಿಲ್ಲ. ನಾನು ಸೀಸನ್ನ ಬಹುತೇಕ ಸಮಯ ಗಾಯಗೊಂಡಿದ್ದೆ ಮತ್ತು ಕೊನೆಯ ಭಾಗದಲ್ಲಿ ಚೇತರಿಸಿಕೊಳ್ಳುತ್ತಿದ್ದೆ. ನಾನು ಶೇಕಡಾ 100 ರಷ್ಟು ಫಿಟ್ ಇರಲಿಲ್ಲ — ಸುಮಾರು 90% ಮಟ್ಟದಲ್ಲಿದ್ದೆ, ಬೌಲಿಂಗ್ ಮಾಡಲಾಗುತ್ತಿರಲಿಲ್ಲ. ಸಪೋರ್ಟ್ ಸ್ಟಾಫ್ ಮತ್ತು ತಂಡದ ನಿರ್ವಹಣಾ ತಂಡ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನನ್ನ ಪಂದ್ಯಗಳು ಮತ್ತು ತರಬೇತಿಯನ್ನು ಗಮನಿಸುತ್ತಿದ್ದರು,” ಎಂದು ಅವರು ಹೇಳಿಕೊಂಡಿದ್ದಾರೆ.
ಟಿ ನಟರಾಜನ್ ಅವರು ಮತ್ತೆ ತಮ್ಮ ಲಯವನ್ನು ಕಂಡುಕೊಂಡಂತೆ ಕಾಣುತ್ತಿದ್ದು, ಈ ಹೊಸ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಇದುವರೆಗೆ ನಡೆದ ಎಲ್ಲಾ ಮೂರು ಪಂದ್ಯಗಳಲ್ಲಿ ಆಡಿದ್ದಾರೆ ಮತ್ತು ಡೆತ್ ಓವರ್ಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 35ರ ವಯಸ್ಸಿನ ಈ ವೇಗದ ಬೌಲರ್, ಆಡಿದ ಮೂರು ಪಂದ್ಯಗಳಲ್ಲಿ ಸರಾಸರಿ 21.75ಕ್ಕೆ ನಾಲ್ಕು ವಿಕೆಟ್ ಪಡೆದು, 7.9 ಇಕಾನಮಿ ರೇಟ್ ಅನ್ನು ಕಾಯ್ದುಕೊಂಡಿದ್ದಾರೆ.
RCB vs MI: ಫಿಲ್ ಸಾಲ್ಟ್ ಔಟ್? ಮುಂಬೈ ಇಂಡಿಯನ್ಸ್ ಕದನಕ್ಕೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI
ತಮ್ಮ ಪುನಶ್ಚೇತನ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸಂಯೋಜಿತ ಬೆಂಬಲವನ್ನು ವಿವರಿಸಿದ ಅವರು, “ಕಳೆದ ಒಂದು ವರ್ಷದಲ್ಲಿ ಡಿಸಿ ತಂಡದ ನಿರ್ವಹಣಾ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಬದಾನಿ ಸರ್ ಆಗಾಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು, ನಾವು ಟಿಎನ್ಪಿಎಲ್ ವೇಳೆ ಕೂಡ ಭೇಟಿ ಆಗಿ ಚರ್ಚೆ ನಡೆಸಿದ್ದೇವೆ. ನಾನು ದೆಹಲಿ, ಸೂರತ್ ಮತ್ತು ಹೈದರಾಬಾದ್ನಲ್ಲಿ ಶಿಬಿರಗಳಲ್ಲಿ ಭಾಗವಹಿಸಿದ್ದೆ. ಅವರು ನನಗೆ ವಿಶೇಷ ತರಬೇತಿಗಾಗಿ ಮೂರು ವಾರಗಳ ಕಾಲ ದುಬೈಗೂ ಕಳುಹಿಸಿದ್ದರು. ನಾನು ಸಾಕಷ್ಟು ಅಭ್ಯಾಸ ಮಾಡಿದ್ದು, ಡಿವೈ ಪಾಟೀಲ್ ಟೂರ್ನಿಯಲ್ಲಿ ಆಡಿದ್ದು ನನ್ನಲ್ಲಿ ಆತ್ಮವಿಶ್ವಾಸ ಮತ್ತು ಲಯವನ್ನು ಮತ್ತೆ ತಂದಿತು,” ಎಂದು ವಿವರಿಸಿದ್ದಾರೆ.