ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಈ ಹಡುಗನಿಗೆ 10 ಫೀಲ್ಡರ್‌ಗಳು ಸಾಕಾಗಲ್ಲʼ-ವೈಭವ್‌ ಸೂರ್ಯವಂಶಿ ಬಗ್ಗೆ ಗವಾಸ್ಕರ್‌ ದೊಡ್ಡ ಹೇಳಿಕೆ!

ಪಂಜಾಬ್‌ ಕಿಂಗ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 43 ರನ್‌ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಶ್ಲಾಘಿಸಿದ್ದಾರೆ. 10 ಫೀಲ್ಡರ್‌ಗಳಿಂದಲೂ ವೈಭವ್‌ ಅವರನ್ನು ಹಿಡಿಯಲು ಸಾಧ್ಯವಿಲ್ಲ ಎಂದಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಗವಾಸ್ಕರ್‌.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್‌ ಮುಂದುವರಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 15ರ ವಯಸ್ಸಿನ ಆಟಗಾರನಿಗೆ 10 ಮಂದಿ ಫೀಲ್ಡರ್‌ಗಳಿದ್ದರೂ ಅವರನ್ನು ಬ್ಯಾಟಿಂಗ್‌ನಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವೈಭವ್‌ ಸೂರ್ಯವಂಶಿ ಎಲ್ಲಾ ತಂಡಗಳಿಗೂ ಸವಾಲು ತಂದೊಡ್ಡಿದ್ದಾರೆಂದು ತಿಳಿಸಿದ್ದಾರೆ.

ಈ ಸೀಸನ್‌ನಲ್ಲಿ ಸ್ಪೋಟಕ ಬ್ಯಾಟ್‌ ಮಾಡುತ್ತಿರುವ ವೈಭವ್‌ ಸೂರ್ಯವಂಶಿ ಅವರು 400 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ವೈಭವ್‌ ಬ್ಯಾಟಿಂಗ್‌ ಪ್ರದರ್ಶನವೂ ಕೂಡ ರಾಜಸ್ಥಾನ್‌ ರಾಯಲ್ಸ್‌ ತಂಡದ ಈ ಆವೃತ್ತಿಯಲ್ಲಿನ ಯಶಸ್ಸಿಗೆ ಒಂದು ಕಾರಣ ಎಂದು ಹೇಳಬಹುದು. ಸದ್ಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಆರ್‌ಆರ್‌ ತಂಡ ಮೂರನೇ ಸ್ಥಾನದಲ್ಲಿದೆ.

PBKS vs RR: ಟೇಬಲ್‌ ಟಾಪರ್‌ ಪಂಜಾಬ್‌ ಕಿಂಗ್ಸ್‌ಗೆ ಶಾಕ್‌ ನೀಡಿದ ರಾಜಸ್ಥಾನ್‌ ರಾಯಲ್ಸ್‌!

ಸ್ಟಾರ್‌ ಸ್ಪೋರ್ಟ್ಸ್‌ ಜತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, "ಅವರ ಶಾಟ್‌ ಹೊಡೆಯುವಿಕೆ ಅದ್ಭುತವಾಗಿದೆ. ಬೌಂಡರಿ ಲೈನ್‌ನಲ್ಲಿ 10 ಮಂದಿ ಆಟಗಾರರು ಇದ್ದರೂ ಸಾಲುವುದಿಲ್ಲ. ಅವರಲ್ಲಿ ಯಾವುದೇ ಭಯ ಅಥವಾ ಒತ್ತಡ ಕಾಣಿಸುತ್ತಿಲ್ಲ. ಅದು ಬಹುಶಃ ಅವರು ಇಷ್ಟು ಕಿರಿಯರಾಗಿರುವುದರಿಂದ ಲಭಿಸುವ ಲಾಭ. ನೀವು ಯಾವುದಕ್ಕೂ ಚಿಂತಿಸದೆ ಆಡುತ್ತೀರಿ, ಎದುರಾಳಿಯನ್ನು ಹೆಚ್ಚು ಗಮನಿಸುವುದಿಲ್ಲ," ಎಂದು ತಿಳಿಸಿದ್ದಾರೆ.

ಫೆರೇರಾ-ಶುಭಮ್‌ ಜುಗಲ್‌ಬಂದಿ

ಪಂದ್ಯದ ಬಗ್ಗೆ ಮಾತನಾಡುವುದಾದರೆ, ಡೊನೊವನ್ ಫೆರೇರಾ ಮತ್ತು ಶುಭಮ್ ದುಬೆ ಕೇವಲ 32 ಎಸೆತಗಳಲ್ಲಿ ಅಜೇಯ 77 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಇದರ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ, ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

IPL 2026: ರಾಜಸ್ಥಾನ್‌ ವಿರುದ್ಧ ಸೋಲಿಗೆ ಬೌಲರ್‌ಗಳನ್ನು ದೂರಿದ ಶ್ರೇಯಸ್‌ ಅಯ್ಯರ್‌

14 ಓವರ್‌ಗಳ ನಂತರ ಪಂದ್ಯ ತೀವ್ರ ಹೋರಾಟದ ಹಂತದಲ್ಲಿದ್ದಾಗ ಮತ್ತು ರನ್‌ರೇಟ್ 12ಕ್ಕಿಂತ ಹೆಚ್ಚಾಗಿದ್ದ ಸಂದರ್ಭದಲ್ಲಿ ಈ ಜೋಡಿ ಚೇಸ್ ಅನ್ನು ಸುಲಭವಾಗಿಸಿತು. ಸ್ಪಿನ್ನರ್‌ಗಳು ಹೊರಬಂದ ಬಳಿಕ, ಅವರು ವೇಗದ ಬೌಲರ್‌ಗಳನ್ನು ಗುರಿಯಾಗಿಸಿಕೊಂಡರು. ಅರ್ಷದೀಪ್ ಸಿಂಗ್ ಅವರ ರಿಟರ್ನ್ ಸ್ಪೆಲ್‌ನಲ್ಲಿ ಮೂರು ಬೌಂಡರಿಗಳನ್ನು ಬಾರಿಸಲಾಯಿತು, ಹಾಗೆಯೇ ಮಾರ್ಕೊ ಯೆನ್ಸನ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೀಡಿದರು.

ಈ ಜೋಡಿ ಅರ್ಷದೀಪ್ ವಿರುದ್ಧ ತಮ್ಮ ದಾಳಿ ಮುಂದುವರಿಸಿ, ಸಮತೋಲನ ಹಾಗೂ ಭರ್ಜರಿ ಶಾಟ್‌ಗಳ ಮೂಲಕ ಚೇಸ್ ಅನ್ನು ಯಶಸ್ವಿಯಾಗಿ ಮುಗಿಸಿತು. ಆ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಈ ಸೀಸನ್‌ನ ಮೊದಲ ಸೋಲನ್ನುಂಟುಮಾಡಿತು.