ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ವೇಳೆ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುರಲ್ಲಿ ನನಗೆ ಸಂತೋಷವಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತಿಳಿಸಿದ್ದಾರೆ. ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಯುವ ವೇಗಿ ಪ್ರಿನ್ಸ್ ಯಾದವ್ ಅವರ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ದ ಬಗ್ಗೆಯೂ ಆರ್ಸಿಬಿ ದಿಗ್ಗಜ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಸಲಹೆ ನೀಡಿದ ಬೌಲರ್ನಿಂದ ನಾನು ಔಟ್ ಆದರೂ ನನಗೆ ಯಾವುದೇ ರೀತಿಯ ಬೇಸರವಿಲ್ಲ ಎಂದು ಹೇಳಿದ್ದಾರೆ.
ಪ್ರಿನ್ಸ್ ಯಾದವ್ ಎಸೆದ ಅದ್ಭುತ ಡೆಲಿವರಿ ವಿರಾಟ್ ಕೊಹ್ಲಿ ಅವರ ರಕ್ಷಣಾತ್ಮಕ ಆಟವನ್ನು ಭೇದಿಸಿ ಆಫ್ ಸ್ಟಂಪ್ ಉರುಳಿಸಿತು. ಪಂದ್ಯ ಮುಗಿದ ಬಳಿಕ, ಎಲ್ಎಸ್ಜಿ ತಂಡದ ಈ ವೇಗಿ, ಕೊಹ್ಲಿ ನೀಡಿದ ಸಲಹೆಗಳೇ ಆ ವಿಕೆಟ್ ಪಡೆಯಲು ಸಹಾಯ ಮಾಡಿವೆ ಎಂದು ಬಹಿರಂಗಪಡಿಸಿದ್ದರು. ಆರ್ಸಿಬಿ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಐಪಿಎಲ್ನ ಸ್ಪರ್ಧಾತ್ಮಕತೆಯನ್ನು ಬದಿಗಿರಿಸಿ ಯುವ ಆಟಗಾರರಿಗೆ ನೆರವಾಗುವುದರಲ್ಲಿ ಸಂತೋಷವಿದೆ ಎಂದು ಹೇಳಿದರು.
IPL 2026: ʼಮುಂಬೈ ಇಂಡಿಯನ್ಸ್ ತಂಡದಲ್ಲಿ ಸಮಸ್ಯೆ ಇರುವುದ ಖಚಿತʼ- ಕೆ ಶ್ರೀಕಾಂತ್ ಅಚ್ಚರಿ ಹೇಳಿಕೆ!
“ಯುವ ಆಟಗಾರರು ಬೆಳೆಯುವುದು ಭಾರತೀಯ ಕ್ರಿಕೆಟ್ಗೆ ಒಳ್ಳೆಯದು. ಅವರು ಕಲಿಯಲು ಬಯಸಿದರೆ, ನನ್ನ ಅನುಭವ ಹಂಚಿಕೊಳ್ಳಲು ನಾನು ಯಾವಾಗಲೂ ಸಿದ್ಧ,” ಎಂದು ಕೊಹ್ಲಿ ಹೇಳಿದ್ದಾರೆ.
ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದು ದೀರ್ಘಾವಧಿಯಲ್ಲಿ ಭಾರತೀಯ ಕ್ರಿಕೆಟ್ಗೆ ಲಾಭಕರವಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.
“ಹೌದು, ಅವರು ನನಗೆ ಅದ್ಭುತ ಚೆಂಡು ಎಸೆದರು. ನಾನು ಅವರಿಗೆ ಇದೇ ರೀತಿಯ ಜಾಗಗಳಲ್ಲಿ ಬೌಲ್ ಮಾಡಲು ಹೇಳಿದ್ದೆ. ಅದರಲ್ಲಿ ಏನೂ ತಪ್ಪಿಲ್ಲ,” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
“ನಾನು ವಿಜಯ್ ಹಝಾರೆ ಟ್ರೋಫಿ ಆಡಲು ಹೋಗಿದ್ದಾಗ ಪ್ರಿನ್ಸ್ನ್ನು ಮೊದಲಿಗೆ ತಿಳಿದಿರಲಿಲ್ಲ. ಅವರು ತುಂಬಾ ಒಳ್ಳೆಯ ಹುಡುಗ ಮತ್ತು ತುಂಬಾ ಹಾಸ್ಯಪ್ರಿಯ. ನಂತರ ನಾವು ಬಹಳ ಹತ್ತಿರವಾದೆವು ಮತ್ತು ಅವರು ನನ್ನೊಂದಿಗೆ ಮುಕ್ತವಾಗಿ ಮಾತನಾಡಲು ಆರಂಭಿಸಿದ. ವಿಜಯ್ ಹಜಾರೆ ಟ್ರೋಫಿಯ ಪಂದ್ಯಗಳಲ್ಲಿಯೇ ನಾನು ಅವರಿಗೆ ಏನು ಮಾಡಬೇಕು, ಯಾವ ಲೆಂಗ್ತ್ನಲ್ಲಿ ಬೌಲ್ ಮಾಡಬೇಕು ಎಂದು ಹೇಳುತ್ತಿದ್ದೆ,” ಎಂದು ಕೊಹ್ಲಿ ತಿಳಿಸಿದ್ದಾರೆ.
“ನೀವು ಸದಾಕಾಲ ಇಲ್ಲಿ ಉಳಿಯುವುದಿಲ್ಲ. ಇತರರಿಗೆ ಕಲಿಯಲು ಮತ್ತು ತಮ್ಮ ವೃತ್ತಿಜೀವನದಲ್ಲಿ ಉತ್ತಮಗೊಳ್ಳಲು ಅವಕಾಶ ಸಿಕ್ಕರೆ, ಅವರು ಮುಂದೆ ಭಾರತ ಪರ ಆಡುತ್ತಾರೆ. ಆದ್ದರಿಂದ ಭಾರತೀಯ ಕ್ರಿಕೆಟ್ನ ಮಟ್ಟವೂ ಉನ್ನತವಾಗಿಯೇ ಉಳಿಯುತ್ತದೆ,” ಎಂದು ಆರ್ಸಿಬಿ ದಿಗ್ಗಜ ಹೇಳಿದ್ದಾರೆ.
IPL 2026: ಮುಂಬೈ ಇಂಡಿಯನ್ಸ್ ಎದುರು ಸೋತ ಪಂಜಾಬ್ ಕಿಂಗ್ಸ್ ತಂಡದ ಪ್ಲೇಆಫ್ಸ್ ಲೆಕ್ಕಾಚಾರ!
ಆಟಗಾರರು ತಮ್ಮ ಅತ್ಯುತ್ತಮ ಮಟ್ಟದಲ್ಲಿರಬೇಕು: ಕೊಹ್ಲಿ
ವಿರಾಟ್ ಕೊಹ್ಲಿ ಗುಜರಾತ್ ಟೈಟನ್ಸ್ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಸಹ ಪಂದ್ಯಕ್ಕೂ ಮುನ್ನ ಸಲಹೆ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ತಾವು ಯಾವಾಗಲೂ ಎದುರಾಳಿಗಳು ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಎದುರಿಗೆ ಬರಬೇಕು ಎಂದು ಬಯಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
“ಗುಜರಾತ್ ವಿರುದ್ಧ ಬೆಂಗಳೂರಿನಲ್ಲಿ ಆಡುವುದಕ್ಕೂ ಮುನ್ನ ನಾನು ಮೊಹಮ್ಮದ್ ಸಿರಾಜ್ ಜೊತೆ ಬೌಂಡರಿಯ ಬಳಿ ಮಾತನಾಡಿದ್ದೆ. ಅವರು ಓಡಿ ಬರುವ ರೀತಿ ಹಿಂದೆ ಇದ್ದದ್ದಕ್ಕಿಂತ ಭಿನ್ನವಾಗಿದೆ ಎಂಬ ನನ್ನ ಗಮನಿಸಿದ್ದ ವಿಷಯಗಳನ್ನು ಹೇಳಿದೆ. ಅವರು ತನ್ನ ರಿದಮ್ ಬಗ್ಗೆ ನನ್ನೊಂದಿಗೆ ಮಾತನಾಡಿದ. ಎರಡು ದಿನಗಳ ಬಳಿಕ ನಾವು ಅವರ ವಿರುದ್ಧವೇ ಆಡಬೇಕಿತ್ತು. ಆದರೂ ನಾನು ಅವರ ಅತ್ಯುತ್ತಮ ರೂಪವನ್ನು ಎದುರಿಸಲು ಬಯಸುತ್ತೇನೆ,” ಎಂದು ಕೊಹ್ಲಿ ತಿಳಿಸಿದ್ದಾರೆ.
“ನಾನು ಯಾವಾಗಲೂ ಎದುರಾಳಿಯ ಅತ್ಯುತ್ತಮ ಸ್ಪರ್ಧೆಯನ್ನು ಎದುರಿಸಲು ಸಿದ್ಧನಿರುತ್ತೇನೆ. ಯಾರಾದರೂ ಹೋರಾಟ ನಡೆಸುತ್ತಿದ್ದರೆ, ಅವರಿಗೆ ಸಹಾಯ ಮಾಡುವುದು ಒಂದು ಅವಕಾಶ ಎಂದು ನಾನು ನೋಡುತ್ತೇನೆ. ನನ್ನ ದೃಷ್ಟಿಕೋನವೇ ಅದು,” ಎಂದು ಅವರು ವಿವರಿಸಿದ್ದಾರೆ.