ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾನು ವಿಕೆಟ್‌ ಟೇಕರ್‌ ಎಂಬುದು ಇಶಾನ್‌ ಕಿಶನ್‌ಗೆ ಗೊತ್ತಿಲ್ಲ ಎಂದ ವೈಭವ್‌ ಸೂರ್ಯವಂಶಿ!

ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಈಗಾಗಲೇ ಎಲ್ಲರ ಗಮನವನ್ನು ಸೆಳೆದಿರುವ 15ರ ವಯಸ್ಸಿನ ವೈಭವ್‌ ಸೂರ್ಯವಂಶಿ ಅವರು ತಾವು ಬೌಲ್‌ ಮಾಡುವುದು ಕೂಡ ಇಷ್ಟವೆಂದು ಹೇಳಿಕೊಂಡಿದ್ದಾರೆ. ಈಶಾನ್ಯ ವಲಯ ಎದುರಿನ ಪಂದ್ಯದಲ್ಲಿ ಮೂರು ಓವರ್‌ ಬೌಲ್‌ ಮಾಡಿದ್ದ ವೈಭವ್‌ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.

ತಮ್ಮ ಬೌಲಿಂಗ್‌ ಬಗ್ಗೆ ಪ್ರತಿಕ್ರಿಯಿಸಿದ ವೈಭವ್‌ ಸೂರ್ಯವಂಶಿ.

ನವದೆಹಲಿ: ತಮ್ಮ ಭಯಮುಕ್ತ ಬ್ಯಾಟಿಂಗ್‌ನಿಂದ ಖ್ಯಾತಿ ಗಳಿಸಿರುವ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಬೌಲಿಂಗ್‌ನಲ್ಲೂ ನಿಜವಾದ ಆಸಕ್ತಿ ಇದೆ ಎಂಬುದು ತಿಳಿದುಬಂದಿದೆ. ಸ್ವತಃ 15ರ ವಯಸ್ಸಿನ ಯುವ ಆಟಗಾರನೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ (Duleep Trophy 2026) ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು ತಮ್ಮ ಈ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ವೇಳೆ ನಾಯಕ ಇಶಾನ್ ಕಿಶನ್ ತಮ್ಮ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಕಡಿಮೆ ಅಂದಾಜಿಸಿದ್ದಾರೆ ಎಂದು ಸೂರ್ಯವಂಶಿ ಹಾಸ್ಯಮಯವಾಗಿ ಹೇಳಿದ್ದಾರೆ.

ಪೂರ್ವ ವಲಯ ತಂಡ ಫಾಲೋಆನ್ ಹೇರಿದ ಬಳಿಕ ವಿಕೆಟ್‌ಗಳಿಗಾಗಿ ಪರದಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಸೂರ್ಯವಂಶಿಗೆ ಬೌಲಿಂಗ್‌ಗೆ ಅವಕಾಶ ನೀಡಲಾಯಿತು. ಕೇವಲ ನಾಲ್ಕು ಎಸೆತಗಳಲ್ಲೇ ಅವರು ತಮ್ಮ ಪ್ರಭಾವ ಬೀರಿದರು. ಮೂರು ಓವರ್‌ಗಳ ಸ್ಪೆಲ್‌ನಲ್ಲಿ ಎರಡು ವಿಕೆಟ್ ಪಡೆದರು. ಕಿಶನ್ ಲಿಂಗ್ಡೋ ಅವರನ್ನು 25 ರನ್‌ಗಳಿಗೆ ಔಟ್ ಮಾಡಿದ ಸೂರ್ಯವಂಶಿ, ಮೂರು ಎಸೆತಗಳ ಬಳಿಕ ಇಮ್ಲಿವಾಟಿ ಲೆಮ್ಟೂರ್ ಅವರ ವಿಕೆಟ್ ಅನ್ನು ಕೂಡ ಕಬಳಿಸಿದರು. ಎರಡೂ ವಿಕೆಟ್‌ಗಳು ಅವರ ಎಡಗೈ ಸ್ಪಿನ್‌ನಿಂದ ಬಂದವು. ಮೊದಲ ಕ್ಯಾಚ್ ಅನ್ನು ಡ್ಯಾನಿಶ್ ದಾಸ್ ಪಡೆದರೆ, ಎರಡನೇ ಕ್ಯಾಚ್ ಅನ್ನು ಇಶಾನ್ ಕಿಶನ್ ಪೂರ್ಣಗೊಳಿಸಿದರು.

ಸೂರ್ಯವಂಶಿಗೆ ಈ ಬೌಲಿಂಗ್ ಸ್ಪೆಲ್ ಕೇವಲ ತಂಡಕ್ಕೆ ನೆರವಾಗುವುದಕ್ಕಿಂತ ಹೆಚ್ಚಿನ ಮಹತ್ವ ಹೊಂದಿತ್ತು. ತಾನು ಯಾವಾಗಲೂ ಬೌಲ್‌ ಮಾಡುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿದ ಅವರು, ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದ ಬಳಿಕ ಬೌಲಿಂಗ್ ಮೂಲಕ ತಂಡಕ್ಕೆ ಕೊಡುಗೆ ನೀಡಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ.

Tri-series 2026: ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿದ ನಮೀಬಿಯಾ!

“ಬ್ಯಾಟರ್‌ಗಳನ್ನು ಕೇಳಿದರೆ, ಅವರು ಯಾವಾಗಲೂ ಬೌಲಿಂಗ್ ಮಾಡುವುದನ್ನು ಇಷ್ಟಪಡುತ್ತಾರೆ. ಬ್ಯಾಟರ್ ಬೌಲಿಂಗ್ ಮಾಡುವುದು ಅಥವಾ ಬೌಲರ್ ಬ್ಯಾಟಿಂಗ್ ಮಾಡುವುದು ಆಟಗಾರನಿಗೆ ಖುಷಿ ನೀಡುತ್ತದೆ. ಎದುರಾಳಿ ತಂಡದ ವಿಕೆಟ್‌ಗಳು ಬೀಳುತ್ತಿರಲಿಲ್ಲ. ಹೀಗಾಗಿ ನನಗೆ ಎರಡು ಅಥವಾ ಮೂರು ಓವರ್ ಬೌಲ್‌ ಮಾಡಲು ಹೇಳಿದರು. ಇಶಾನ್ ಭಯ್ಯಾ ನನಗೆ ಚೆಂಡು ನೀಡುವ ಮೂಲಕ ಅಪಾಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಭಾವಿಸಿದ್ದರು. ಆದರೆ ನಾನು ವಿಕೆಟ್ ಪಡೆಯುವ ಆಟಗಾರ ಎಂಬುದು ಅವರಿಗೆ ಗೊತ್ತಿರಲಿಲ್ಲ,” ಎಂದು ಸೂರ್ಯವಂಶಿ ಬಿಸಿಸಿಐ ಹಂಚಿಕೊಂಡಿರುವ ವಿಡಿಯೊದಲ್ಲಿ ಹಾಸ್ಯಮಯವಾಗಿ ಹೇಳಿದ್ದಾರೆ.



ಐದು ವಿಕೆಟ್ ಪಡೆಯಬಹುದು ಎಂದು ಯೋಚಿಸಿದ್ದೆ: ವೈಭವ್‌

ಅವಕಾಶ ಸಿಕ್ಕಿದ್ದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂಬ ಉತ್ಸಾಹದಲ್ಲಿದ್ದ ಸೂರ್ಯವಂಶಿ, ಕೇವಲ ಕೆಲವೇ ಓವರ್‌ಗಳು ಸಿಕ್ಕರೂ ತಂಡಕ್ಕೆ ಮಹತ್ವದ ಕೊಡುಗೆ ನೀಡಬಹುದು ಎಂದು ನಂಬಿದ್ದರು.

“ನನ್ನ ಮನಸ್ಸಿನಲ್ಲಿ, ‘ನಾನು ಐದು ವಿಕೆಟ್ ಪಡೆದರೂ ನನಗೆ ಸಿಗುವುದು ಕೇವಲ ಮೂರು ಓವರ್‌ಗಳು’ ಎಂದು ಯೋಚಿಸುತ್ತಿದ್ದೆ. ಸಾಧ್ಯವಾದಷ್ಟು ಉತ್ತಮವಾಗಿ, ಒಂದೇ ಸ್ಥಳದಲ್ಲಿ ಚೆಂಡು ಎಸೆಯಲು ಮತ್ತು ನನ್ನ ಸ್ಪೆಲ್ ಪೂರ್ಣಗೊಳಿಸಲು ಪ್ರಯತ್ನಿಸಿದೆ. ಇದು ತುಂಬಾ ಮೋಜಿನ ಅನುಭವವಾಗಿತ್ತು. ಹಿಂದಿನ ಪಂದ್ಯದಲ್ಲಿ ನನ್ನ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಹೀಗಾಗಿ ಬೌಲಿಂಗ್ ಮೂಲಕ ತಂಡಕ್ಕೆ ಕೊಡುಗೆ ನೀಡಿದ್ದು ಖುಷಿ ನೀಡಿತು. ಬ್ಯಾಟರ್ ಒಬ್ಬ ವಿಕೆಟ್ ಪಡೆದಾಗ ಸಿಗುವ ಸಂತೋಷಕ್ಕಿಂತ ದೊಡ್ಡದು ಮತ್ತೊಂದಿಲ್ಲ,” ಎಂದು ಸೂರ್ಯವಂಶಿ ತಿಳಿಸಿದ್ದಾರೆ.

Sachin or Kohli? ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನನ್ನು ಹೆಸರಿಸಿದ ಆರ್‌ ಅಶ್ವಿನ್‌!

ಬ್ಯಾಟಿಂಗ್‌ನಲ್ಲಿ ನಿರಾಸೆ

ಬೌಲಿಂಗ್‌ನಲ್ಲಿ ಮಿಂಚುವುದಕ್ಕೂ ಮುನ್ನ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ನಿರಾಸೆ ಅನುಭವಿಸಿದ್ದರು. ಪೂರ್ವ ವಲಯ ಪರ ದುಲೀಪ್ ಟ್ರೋಫಿಗೆ ಪದಾರ್ಪಣೆ ಮಾಡಿದ ಅವರು ತಂಡದ ಉಪನಾಯಕರಾಗಿಯೂ ನೇಮಕಗೊಂಡಿದ್ದರು. ಎಡಗೈ ಬ್ಯಾಟರ್ ಕೇವಲ ಆರು ಎಸೆತಗಳಲ್ಲಿ ಎಂಟು ರನ್ ಗಳಿಸಿದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಪೂರ್ವ ವಲಯ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ 467 ರನ್ ಗಳಿಸಿದ ಬಳಿಕ, ಈಶಾನ್ಯ ವಲಯ ತಂಡವನ್ನು ಕೇವಲ 111 ರನ್‌ಗಳಿಗೆ ಆಲೌಟ್ ಮಾಡಿ ಫಾಲೋಆನ್ ಹೇರಿತು.



ಸೂರ್ಯವಂಶಿ ಪಡೆದ ಎರಡು ವಿಕೆಟ್‌ಗಳು ಪೂರ್ವ ವಲಯ ತಂಡದ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದವು. ಅಂತಿಮವಾಗಿ ಪೂರ್ವ ವಲಯ ತಂಡ ಇನಿಂಗ್ಸ್ ಮತ್ತು 210 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಎರಡು ವಿಕೆಟ್‌ಗಳೊಂದಿಗೆ ಸೂರ್ಯವಂಶಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವಿಕೆಟ್‌ಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಬ್ಯಾಟಿಂಗ್ ಅವರ ಪ್ರಮುಖ ಅಸ್ತ್ರವಾಗಿದ್ದರೂ, ಬೌಲಿಂಗ್‌ನಲ್ಲಿರುವ ಉತ್ಸಾಹ ಮತ್ತು ಎಡಗೈ ಸ್ಪಿನ್ ಮೂಲಕ ಕೊಡುಗೆ ನೀಡುವ ಸಾಮರ್ಥ್ಯ ಅವರ ಆಟಕ್ಕೆ ಮತ್ತೊಂದು ಆಯಾಮವನ್ನು ನೀಡಿದೆ.

ಸೂರ್ಯವಂಶಿ ಮುಂದಿನ ಪಂದ್ಯದಲ್ಲಿ ದುಲೀಪ್ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಕೇಂದ್ರ ವಲಯದ ವಿರುದ್ಧ ಆಡಲಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರದಿಂದ ಈ ಪಂದ್ಯ ಆರಂಭವಾಗಲಿದೆ.