ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ (RCB vs MI) ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದ ವೇಳೆ ಕೃಣಾಲ್ ಪಾಂಡ್ಯ (Krunal Pandya) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಬ್ಯಾಟ್ಸ್ಮನ್ ಎಸ್ ಬದ್ರಿನಾಥ್ (S Badrinath) ಅವರನ್ನು ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿ ಪ್ಯಾನಲ್ನಿಂದ ವಜಾಗೊಳಿಸುವ ಸಾಧ್ಯತೆ ಇದೆ. ಭಾನುವಾರ ರಾಯ್ಪುರದ ಶಾಹೀದ್ ವೀರ್ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡದ ಚೇಸಿಂಗ್ ಸಮಯದಲ್ಲಿ ಪಂದ್ಯದ ಕಾಮೆಂಟರಿ ಮಾಡುತ್ತಿದ್ದ ವೇಳೆ ದೇಶಿ ಕ್ರಿಕೆಟ್ ದಿಗ್ಗಜ ಆರ್ಸಿಬಿ ಆಟಗಾರ ʻಸ್ನಾಯುಸೆಳೆತದಿಂದ ಸಾಯಲಿ ಬಿಡಿʼ ಎಂದು ಹಾಸ್ಯವಾಗಿ ಹೇಳಿದ್ದರು.
ಆರ್ಸಿಬಿ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳು ವಿಫಲರಾದ ಬಳಿಕ ಏಕಾಂಗಿ ಹೋರಾಟ ನಡೆಸುತ್ತಿದ್ದ ಕೃಣಾಲ್ ಪಾಂಡ್ಯ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಅವರು ಒಮ್ಮೆ ನೆಲಕ್ಕೆ ಉರುಳಿದ್ದರು, ಈ ವೇಳೆ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ರಯಾನ್ ರಿಕೆಲ್ಟನ್ ಅವರು ಆರ್ಸಿಬಿ ಆಟಗಾರನಿಗೆ ನೆರವಾಗಿದ್ದರು. ಇದನ್ನು ಗಮನಿಸಿದ ಬದ್ರಿನಾಥ್, ದಕ್ಷಿಣ ಆಫ್ರಿಕಾ ಆಟಗಾರನ ಈ ನಡೆ ಉತ್ತಮವಾದ ಮಾನವೀಯತೆಗೆ ಉದಾಹರಣೆ ಎಂದು ಹೇಳಿದರು. ಇದರ ಜೊತೆಗೆ ಎದುರಾಳಿ ತಂಡದ ಮನೋಭಾವ ʻಅವರು ಸ್ನಾಯು ಸೆಳೆತದಿಂದಲೇ ಸಾಯಲಿʼ ಎಂಬ ರೀತಿಯದಾಗಿರಬಹುದೆಂಬ ಹಾಸ್ಯವಾಗಿ ಹೇಳಿದರು.
RCB vs MI ಪಂದ್ಯದ ವೇಳೆ ಮಧ್ಯದ ಬೆರಳು ತೋರಿಸಿದ ಟಿಮ್ ಡೇವಿಡ್ ಬಿತ್ತು ಭಾರಿ ದಂಡ!
ಸ್ಟಾರ್ ಸ್ಪೋರ್ಟ್ಸ್ ಕಾಮೆಂಟರಿ ಪ್ಯಾನಲ್ನಿಂದ ಬದ್ರಿನಾಥ್ ವಜಾ ಸಾಧ್ಯತೆ
ಎಸ್ ಬದ್ರಿನಾಥ್ ಹೇಳಿಕೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಯಿತು. ಐಪಿಎಲ್ ಪಂದ್ಯದ ವೇಳೆ ಈ ರೀತಿಯ ಪದ ಬಳಕೆ ಮಾಡಿದ ಬದ್ರಿನಾಥ್ ಅವರನ್ನು ಅಭಿಮಾನಿಗಳು ಟೀಕಿಸಿದ್ದಾರೆ. ಈ ರೀತಿಯ ಪದಗಳನ್ನು ಎಂದಿಗೂ ಬಳಸಬಾರದು ಎಂದು ಹೇಳಿದ್ದಾರೆ. ಇದನ್ನು ಗಮನಿಸಿದ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಚೆನ್ನೈ ಮೂಲದ ಮಾಜಿ ಆಟಗಾರನನ್ನು ಕಾಮೆಂಟರಿ ಪ್ಯಾನಲ್ನಿಂದ ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಸ್ಪಷ್ಟನೆ ನೀಡಿದ ಎಸ್ ಬದ್ರಿನಾಥ್
ಆದಾಗ್ಯೂ, ಎಸ್ ಬದ್ರಿನಾಥ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು ಹಾಗೂ ತಮ್ಮ ಉದ್ದೇಶ ರಿಕಲ್ಟನ್ ಅವರ ಅದ್ಭುತ ನಡೆಯನ್ನು ಎತ್ತಿ ತೋರಿಸುವುದಾಗಿತ್ತು ಎಂದು ಸ್ಪಷ್ಟನೆ ನೀಡಿದರು. ಅವರು 'ಆಡುಮಾತಿನ ತಮಿಳು' ಬಳಸಿದ್ದರಿಂದ ಇದು ತಪ್ಪು ವ್ಯಾಖ್ಯಾನದ ಪ್ರಕರಣವಾಗಿರಬಹುದು ಎಂದು ಅವರು ಹೇಳಿದರು.
"ಅವರು ಅಲ್ಲಿ ಸಾಯಲಿ ಬಿಡಿ ಎಂಬುವುದು ನನ್ನ ಉದ್ದೇಶವಲ್ಲ, ನಾನೇ ಅಲ್ಲಿಗೆ ಹೋಗಿ ಅವರ ಕಾಲನ್ನು ಸ್ಟ್ರೆಚ್ ಮಾಡುತ್ತೇನೆ. ಈ ವಿಷಯದಲ್ಲಿ ರಯಾನ ರಿಕೆಲ್ಟನ್ ಅವರ ನಡೆ ಅದ್ಭುತವಾಗಿತ್ತು. ಫೈರ್ ಪಾಯಿಂಟ್ಸ್ ಅನ್ನು ರಿಕೆಲ್ಟನ್ ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ನೀಡಬೇಕು. ಕಾಮೆಂಟರಿ ವೇಳೆ ನಾನು ಹೇಳಿದ್ದು ಕೂಡ ಇದೇ, ತಮಿಳು ಆಡುಭಾಷೆ ಅರ್ಥವಾಗದವರಿಗೆ ನಾನು ಇದನ್ನು ಹೇಳುತ್ತಿದ್ದೇನೆ," ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಎಸ್ ಬದ್ರಿನಾಥ್ ಸ್ಪಷ್ಟನೆ ನೀಡಿದ್ದಾರೆ.