ರಾಯ್ಪುರ: ಮುಂಬೈ ಇಂಡಿಯನ್ಸ್ ನೀಡಿದ್ದ 167 ರನ್ಗಳ ಚೇಸಿಂಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕೊನೆಯ ಮೂರು ಎಸೆತಗಳಲ್ಲಿ 9 ರನ್ ಅಗತ್ಯವಿದ್ದಾಗ ಭುವನೇಶ್ವರ್ ಕುಮಾರ್ ಸ್ಟ್ರೈಕ್ನಲ್ಲಿದ್ದರು. ಈ ವೇಳೆ ರಾಜ್ ಬಾವಾ ವೈಡ್ ಯಾರ್ಕರ್ ಹಾಕಿದರು, ಈ ವೇಳೆ ಭುವನೇಶ್ವರ್ ಕುಮಾರ್ (Bhuvneshwar Kumar) ಅವರು ಡೀಪ್ ಕವರ್ಸ್ ಮೇಲೆ ಸಿಕ್ಸರ್ ಬಾರಿಸಿದರು. ನಂತರ ಕೊನೆಯ ಎಸೆಯದಲ್ಲಿ ಎರಡು ರನ್ ಪಡೆಯುವ ಮೂಲಕ ಆರ್ಸಿಬಿ ಪಂದ್ಯವನ್ನು ಗೆದ್ದು ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಪಂದ್ಯದಲ್ಲಿ 4 ವಿಕೆಟ್ ಹಾಗೂ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಬಾರಿಸಿದ ಭುವನೇಶ್ವರ್ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಪಂದ್ಯದ ಬೌಲಿಂಗ್ ವೇಳೆ ಭುವನೇಶ್ವರ್ ಕುಮಾರ್ ಮಾರಕ ಬೌಲಿಂಗ್ ದಾಳಿ ನಡೆಸಿ ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದರು. ರಯಾನ್ ರಿಕೆಲ್ಟನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಿದ್ದರು. ತಮ್ಮ ನಾಲ್ಕು ಓವರ್ಗಳ ಸ್ಪೆಲ್ನಲ್ಲಿ 23 ರನ್ ನೀಡಿ 4 ವಿಕೆಟ್ಗಳನ್ನು ಕಬಳಿಸಿದ್ದರು. ನಂತರ ಬ್ಯಾಟಿಂಗ್ನಲ್ಲಿಯೂ ಆರ್ಸಿಬಿಗೆ ನೆರವಾಗಿದ್ದರು. ಪಂದ್ಯದ ಬಳಿಕ ಭುವನೇಶ್ವರ್ ಕುಮಾರ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಆರ್ಸಿಬಿ ಗೆಕಲುವಿನ ಬಳಿಕ ಯಾವ ಕ್ಷಣವನ್ನು ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುವಿರಿ ಎಂದು ಕೇಳಿದಾಗ, ಭುವನೇಶ್ವರ್ ಕುಮಾರ್ “ಖಚಿತವಾಗಿ ಆ ಸಿಕ್ಸರ್. ನಾನು ಇದಕ್ಕೂ ಮೊದಲು ಅನೇಕ ಬಾರಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದೇನೆ ಹಾಗೂ ವಿಕೆಟ್ಗಳನ್ನೂ ಪಡೆದಿದ್ದೇನೆ. ಆದರೆ ಈ ಕ್ಷಣವೇ ನನಗೆ ಹೆಚ್ಚಿನ ಆನಂದ ನೀಡಿತು,” ಎಂದು ಅವರು ತಿಳಿಸಿದ್ದಾರೆ.
ʻಕೆಲವು ಗಾಯದ ಗುರುತುಗಳು ಹೋರಾಟಕ್ಕೆ ಯೋಗ್ಯ ಪುರಾವೆಯಾಗಿವೆʼ: ಕೃಣಾಲ್ ಪಾಂಡ್ಯ ಇನ್ಸ್ಟಾಗ್ರಾಮ್ ಸ್ಟೋರಿ!
ಬೌಲಿಂಗ್ ಬಗ್ಗೆ ಪ್ರತಿಕ್ರಿಯಿಸಿ, "ನಾನು ರೋಹಿತ್ ಶರ್ಮಾ ವಿರುದ್ಧ ಹಳೆಯ ಯೋಜನೆಯೊಂದಿಗೆ ಬೌಲ್ ಮಾಡುತ್ತಿದ್ದೆ,” ಎಂದು ಹೇಳಿದ ಅವರು “ಹಿಂದಿನ ಪಂದ್ಯಗಳಲ್ಲಿ ರೋಹಿತ್ ನನ್ನ ವಿರುದ್ಧ ಕ್ರೀಸ್ನಿಂದ ಮುಂದೆ ಬಂದು ಆಡಿದ್ದರಿಂದ, ಈ ಬಾರಿ ಕೂಡ ಹಾಗೆಯೇ ಪ್ರಯತ್ನಿಸಬಹುದು ಎಂದು ನಾನು ಯೋಚಿಸಿದ್ದೆ. ಸೂರ್ಯಕುಮಾರ್ ಯಾದವ್ ಆಗಷ್ಟೇ ಕ್ರೀಸ್ಗೆ ಬಂದಿದ್ದರು. ಆದ್ದರಿಂದ ನಾನು ಸಾಮಾನ್ಯ ಲೆನ್ತ್ ಬಾಲ್ ಎಸೆಯಲು ನಿರ್ಧರಿಸಿದೆ, ಅದು ಫಲ ನೀಡಿತು,” ಎಂದು ಹೇಳಿದ್ದಾರೆ.
ಭುವನೇಶ್ವರ್ ಕುಮಾರ್ ಇದೀಗ ಈ ಸೀಸನ್ನಲ್ಲಿ 21 ವಿಕೆಟ್ಗಳನ್ನು ಕಬಳಿಸಿದ್ದು, ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಬೌಲರ್ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೆ, ಅವರು ಅತ್ಯುತ್ತಮ ಎಕಾನಮಿ ರೇಟ್ ಅನ್ನು ಹೊಂದಿದ್ದಾರೆ. ಪವರ್ಪ್ಲೇ ಅವಧಿಯಲ್ಲಿ ಅವರ ಎಕಾನಮಿ ದರ 7.00 ಆಗಿದ್ದರೆ, ಮಧ್ಯದ ಓವರ್ಗಳಲ್ಲಿ 8.42 ಮತ್ತು ಡೆತ್ ಓವರ್ಗಳಲ್ಲಿ 7.83 ಎಕಾನಮಿ ದರ ಹೊಂದಿದ್ದಾರೆ.
ಪವರ್ಪ್ಲೇನಲ್ಲಿ ಕನಿಷ್ಠ 50 ಎಸೆತಗಳನ್ನು ಎಸೆದ ಬೌಲರ್ಗಳ ಪೈಕಿ ಭುವನೇಶ್ವರ್ ಕುಮಾರ್ ಲಖನೌ ಸೂಪರ್ ಜಯಂಟ್ಸ್ ತಂಡದ ಮೋಹ್ಸಿನ್ ಖಾನ್ ಜೊತೆಗೆ ಜಂಟಿಯಾಗಿ ಅತ್ಯುತ್ತಮ ಎಕಾನಮಿ ರೇಟ್ ಅನ್ನು ಹೊಂದಿದ್ದಾರೆ. ಇದೇ 50 ಎಸೆತಗಳು ಮಾನದಂಡದಲ್ಲಿ, ಡೆತ್ ಓವರ್ಗಳಲ್ಲಿ ಅತ್ಯಂತ ಕಡಿಮೆ ರನ್ ನೀಡಿದ ಬೌಲರ್ ಆಗಿಯೂ ಭುವನೇಶ್ವರ್ ಹೊರಹೊಮ್ಮಿದ್ದಾರೆ.
RCB vs MI: ಮುಂಬೈ ಎದುರು ಕೊನೆಯ ಓವರ್ ಥ್ರಿಲ್ಲರ್ ಗೆದ್ದ ಆರ್ಸಿಬಿಗೆ ಅಗ್ರ ಸ್ಥಾನ!
ಭಾರತ ತಂಡದ ಪರ ಕೊನೆಯದಾಗಿ 2022ರ ನವೆಂಬರ್ನಲ್ಲಿ ಆಡಿದ್ದ ಹಿನ್ನೆಲೆಯಲ್ಲಿ, ತಮ್ಮನ್ನು ತಾವು ಹೇಗೆ ಪ್ರೇರೇಪಿತವಾಗಿಟ್ಟುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಭುವನೇಶ್ವರ್ ಕುಮಾರ್ ಉತ್ತರಿಸಿದರು.
“ನಿಜ ಹೇಳಬೇಕೆಂದರೆ, ‘ಮೋಟಿವೇಶನ್’ ಎನ್ನುವ ಪದ ನನ್ನ ದೃಷ್ಟಿಯಲ್ಲಿ ತುಂಬಾ ಅತಿಯಾಗಿ ಬಳಸಲಾಗುತ್ತದೆ. ನೀವು ಯಾವುದಾದರೂ ಕೋಟಾವನ್ನು ಓದುತ್ತೀರಿ, ಒಂದು ವಿಡಿಯೋ ನೋಡುತ್ತೀರಿ, ಕೆಲವೇ ನಿಮಿಷಗಳ ಕಾಲ ಪ್ರೇರಣೆ ಪಡೆಯುತ್ತೀರಿ. ಆದರೆ ಅದು ಬೇಗವೇ ಕಣ್ಮರೆಯಾಗುತ್ತದೆ. ನನ್ನನ್ನು ನಿರಂತರವಾಗಿ ಮುಂದಕ್ಕೆ ಕೊಂಡೊಯ್ಯುವುದು ಶಿಸ್ತು,” ಎಂದು ಅವರು ಹೇಳಿದರು.
“ಹೌದು, ತಂಡದೊಂದಿಗೆ ಫಿಸಿಯೊಗಳು ಮತ್ತು ಟ್ರೈನರ್ಗಳು ಇದ್ದಾರೆ. ಆದರೆ ನನ್ನ ಮನೆಯಲ್ಲಿಯೂ ಒಬ್ಬ ಫಿಸಿಯೋ ಮತ್ತು ಟ್ರೈನರ್ ಇದ್ದಾರೆ. ಅವರು ಕೂಡ ನನ್ನೊಂದಿಗೆ ಕಠಿಣವಾಗಿ ಕೆಲಸ ಮಾಡುತ್ತಾರೆ. ನನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಆದ್ದರಿಂದ ಅವರಿಗೆ ಕೂಡ ಶ್ರೇಯಸ್ಸು ಸಲ್ಲಬೇಕು,” ಎಂದು ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.