ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್(Riyan Parag) ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪರಾಗ್ ಸುಮಾರು ಎರಡು ವರ್ಷಗಳಿಂದ ಭುಜದ ಗಾಯದಿಂದ ಬಳಲುತ್ತಿದ್ದರು. ಈ ಗಾಯದಿಂದಾಗಿ ಅವರು ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ 'ಎ' ಏಕದಿನ ಸರಣಿಯಿಂದ (Tri Series) ಹೊರಗುಳಿಯಬೇಕಾಯಿತು. ರಿಯಾನ್ ಪರಾಗ್ ತಮ್ಮ ಯಶಸ್ವಿ ಶಸ್ತ್ರಚಿಕಿತ್ಸೆಯ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ತೆಗೆದ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಿಯಾನ್ ಪರಾಗ್, "ಭುಜವು ಅಂತಿಮವಾಗಿ ಗೆದ್ದಿತು. ಕೇಳುವವರಿಗೆ, ಶಸ್ತ್ರಚಿಕಿತ್ಸೆ ಮುಗಿದಿದೆ ಮತ್ತು ಎಲ್ಲವೂ ಚೆನ್ನಾಗಿ ನಡೆಯಿತು. ಕಳೆದ ಎರಡು ವರ್ಷಗಳು ನಾನು ಎಂದಿಗೂ ನಿರೀಕ್ಷಿಸದ ಪರೀಕ್ಷೆಯನ್ನು ಎದುರಿಸಿದೆ. ಒಳ್ಳೆಯ ದಿನಗಳು, ನಿರಾಶಾದಾಯಕ ದಿನಗಳು ಮತ್ತು ಪಂದ್ಯವನ್ನು ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿದ್ದ ದಿನಗಳು ಇದ್ದವು. ಆದರೆ ನನಗೆ ಅದು ಬೇರೆ ರೀತಿಯಲ್ಲಿ ಸಿಗುತ್ತಿರಲಿಲ್ಲ. ಈಗ, ಮುಂದೆ ಬೇರೆಯದೇ ಸವಾಲು ಇದೆ - ಚೇತರಿಕೆ, ಪುನಶ್ಚೇತನ ಮತ್ತು ತಾಳ್ಮೆ. ನಾನು ಶೀಘ್ರದಲ್ಲೇ ನಾನು ಇಷ್ಟಪಡುವುದನ್ನು ಮಾಡಲು ಹಿಂತಿರುಗುತ್ತೇನೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ," ಎಂದು ಬರೆದುಕೊಂಡಿದ್ದಾರೆ.
IND-A vs AFG-A: ಭಾರತ ʻಎʼ ತಂಡಕ್ಕೆ ಭಾರಿ ನಿರಾಶೆ, ಅಫ್ಘಾನಿಸ್ತಾನ ತಂಡಕ್ಕೆ 4 ರನ್ ಜಯ!
ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪರಾಗ್ ಅವರ ಪುನಶ್ವೇತನ ಪ್ರಕ್ರಿಯೆಯನ್ನು ನೋಡಿಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ದೇಶಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಮೊದಲು, ಅವರು ನಿಗದಿತ ಚೇತರಿಕೆ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಮತ್ತು ವೈದ್ಯಕೀಯ ಸಿಬ್ಬಂದಿಯಿಂದ ಅನುಮತಿ ಪಡೆಯಬೇಕು. ಕಳೆದ ಎರಡು ವರ್ಷಗಳಿಂದ ರಿಯಾನ್ ಪರಾಗ್ ಭುಜದ ಗಾಯದಿಂದ ಬಳಲುತ್ತಿದ್ದಾರೆ; ಈ ಗಾಯವು ಅವರನ್ನು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲು ಕಾರಣವಾಯಿತು ಮಾತ್ರವಲ್ಲದೆ ಹಲವಾರು ಐಪಿಎಲ್ ಪಂದ್ಯಗಳಿಂದ ಹೊರಗುಳಿಯುವಂತೆ ಮಾಡಿತ್ತು.
ಪ್ಲೇಆಫ್ಸ್ಗೆ ತಲುಪಿದ್ದ ರಾಜಸ್ಥಾನ್ ರಾಯಲ್ಸ್
2026ರ ಐಪಿಎಲ್ ಟೂರ್ನಿಗೂ ಮುಂಚಿತವಾಗಿ ರಿಯಾನ್ ಪರಾಗ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಅವರು ಆ ಪಾತ್ರದಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಪ್ಲೇಆಫ್ಗೆ ಕರೆದೊಯ್ದರು, ಆದರೆ ಅವರ ಪ್ರಯಾಣ ಗುಜರಾತ್ ಟೈಟನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ನಲ್ಲಿನ ಸೋಲಿನೊಂದಿಗೆ ಕೊನೆಗೊಂಡಿತು. ಲೀಗ್ ಹಂತದಲ್ಲಿ ಪರಾಗ್ ಗಾಯದಿಂದಾಗಿ ಹಲವಾರು ಪಂದ್ಯಗಳಿಂದ ಹೊರಗುಳಿಯಬೇಕಾಯಿತು ಮತ್ತು ಅವರ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ತಂಡದ ನಾಯಕರಾಗಿದ್ದರು.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ 2027ರ ಒಡಿಐ ವಿಶ್ವಕಪ್ ಭವಿಷ್ಯ ನುಡಿದ ಆರ್ ಅಶ್ವಿನ್!
ಬಿಸಿಸಿಐ ಪ್ರತಿಕ್ರಿಯೆ ಏನು?
"ಈಗಿನ ಸನ್ನಿವೇಶವನ್ನು ನೋಡಿದರೆ, ಅವರು ಯಾವ ಸಮಯದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಅವರು ಇದೀಗ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಪ್ರಕ್ರಿಯೆಯ ಕಡೆಗೆ ಗಮನ ನೀಡಬೇಕಾಗಿದೆ," ಎಂದು ಬಿಸಿಸಿಐ ಮೂಲವೊಂದು ಹೇಳಿರುವುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.