ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿ ಬಗ್ಗೆ ಮನು ಭಾಕರ್‌ ಬಳಿ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಟೀಕಿಸಿದ ನೆಟ್ಟಿಗರು!

ಒಲಿಂಪಿಕ್‌ ಪದಕ ವಿಜೇತೆ ಶೂಟರ್‌ ಮನು ಭಾಕರ್‌ ಬಳಿ ಯುವ ಕ್ರಿಕೆಟಿಗ ವೈಭವ್‌ ಸೂರ್ಯವಂಶಿ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನನ್ನು ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮನು ಬಾಕರ್‌ ಶೂಟರ್‌ ಆಗಿದ್ದು, ಅವರ ಬಳಿ ಶೂಟಿಂಗ್‌ಗೆ ಸಂಬಂಧಿಸಿದ ಪ್ರಶ್ನೆಯನ್ನು ಮಾತ್ರ ಕೇಳಬೇಕು, ಅದು ಬಿಟ್ಟು ಕ್ರಿಕೆಟ್‌ ಬಗ್ಗೆ ಪ್ರಶ್ನೆ ಕೇಳಿ ಅವಮಾನಿಸುತ್ತಿದ್ದೀರಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ಮನು ಭಾಕರ್‌ಗೆ ಪ್ರಶ್ನೆ ಕೇಳಿದ ಪತ್ರಕರ್ತ.

ನವದೆಹಲಿ: ಒಲಿಂಪಿಕ್ಸ್‌ ಪದಕ ವಿಜೇತೆ ಮನು ಭಾಕರ್‌ (Manu Bhaker) ಅವರ ಬಳಿ ಭಾರತೀಯ ಕ್ರಿಕೆಟ್‌ನ ಸೆನ್ಸೇಷನಲ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ಬಗ್ಗೆ ಪ್ರಶ್ನೆಯನ್ನು ಕೇಳಿದ ಪತ್ರಕರ್ತನನ್ನು ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನ್ಯಾಷನಲ್‌ ರೈಫಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಬಳಿ ಸುದ್ದಿಗಾರರ ಜೊತೆ ಮನು ಭಾಕರ್‌ ಸಂಭಾಷಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ವೈಭವ್‌ ಬೆಳವಣಿಗೆ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಮನು ಬಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತಮವಾದ ಮೆಂಟರ್‌ ಸಿಕ್ಕರೆ ಅವರು ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೊಡ್ಡ ಸ್ಟಾರ್‌ ಆಗುತ್ತಾರೆಂದು ಹೇಳಿದ್ದಾರೆ.

“ಮೆಂಟರ್‌ಶಿಪ್ ಉತ್ತಮವಾಗಿದ್ದರೆ, ಸುತ್ತಮುತ್ತಲಿನ ವಾತಾವರಣ ಮತ್ತು ಜನರು ಉತ್ತಮರಾಗಿದ್ದರೆ, ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ. ಪ್ರತಿಭೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಮಹತ್ವದ ಸಾಧನೆಗಳು 60 ರಲ್ಲಿಯೂ ಸಂಭವಿಸುತ್ತವೆ, 6ನೇ ವಯಸ್ಸಿನಲ್ಲಿಯೂ ಸಂಭವಿಸುತ್ತವೆ. ಅವರ (ವೈಭವ್‌) ಸುತ್ತಲಿರುವವರು ಸರಿಯಾಗಿ ಮಾರ್ಗದರ್ಶನ ನೀಡಿದರೆ ಮತ್ತು ಉತ್ತಮವಾಗಿ ಮೆಂಟರ್ ಮಾಡಿದರೆ, ಅವರು ಮುಂದಿನ ದೊಡ್ಡ ತಾರೆ ಆಗುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ,” ಎಂದು ಭಾಕರ್ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

IPL 2026 Points Table: ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾದ ಆರ್‌ಸಿಬಿ, ಸೋತ ಡೆಲ್ಲಿ ಲೆಕ್ಕಾಚಾರ ಹೇಗಿದೆ?

ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಲು ಕಾರಣವೇನು?

ವೈಭವ್‌ ಸೂರ್ಯವಂಶಿ ಬಗ್ಗೆ ಕೇಳಿದ ಪ್ರಶ್ನೆಗೆ ಮನು ಭಾಕರ್‌ ಸೂಕ್ತ ಉತ್ತರ ನೀಡಿದ್ದಾರೆ. ಆದರೆ, ಇದರ ಬಗ್ಗೆ ನೆಟ್ಟಿಗರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಕ್ರಿಕೆಟ್‌ ಬಗ್ಗೆ ಪ್ರಶ್ನೆಯನ್ನು ಕೇಳಿ ಒಲಿಂಪಿಕ್ಸ್‌ ಪದಕ ವಿಜೇತೆಗೆ ಅವಮಾನ ಮಾಡಲಾಗಿದೆ ಎಂದೆಲ್ಲಾ ಆರೋಪ ಮಾಡಿದ್ದಾರೆ. ಮನು ಭಾಕರ್‌ ಅವರು ಶೂಟರ್‌, ಹಾಗಾಗಿ ಅವರಿಗೆ ಶೂಟಿಂಗ್‌ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು ಸೂಕ್ತ, ಅದು ಬಿಟ್ಟು ಕ್ರಿಕೆಟ್‌ ಬಗ್ಗೆ ಪ್ರಶ್ನೆ ಕೇಳುವುದು ಅಸಮಂಜಸ ಎಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.



ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದರ. ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಏಕೈಕ ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲೂ ಕಂಚಿನ ಪದಕಗಳನ್ನು ಜಯಿಸಿದ್ದರು.



ಕೆಕೆಆರ್‌ ಮಾಜಿ ನಿರ್ದೇಶಕ ಜಾಯ್‌ ಭಟ್ಟಾಚಾರ್ಜಿ ಟೀಕೆ

ಕೆಕೆಆರ್ ತಂಡದ ಮಾಜಿ ನಿರ್ದೇಶಕ ಜಾಯ್ ಭಟ್ಟಾಚಾರ್ಜಿ ಅವರು, ಒಲಿಂಪಿಕ್ ಪದಕ ವಿಜೇತೆಯಾದ ಮನು ಭಾಕರ್ ಅವರಿಗೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಗ್ಗೆ ಪ್ರಶ್ನಿಸುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ.

“ಸ್ನೇಹಿತರೇ, ಆಕೆ ಒಲಿಂಪಿಕ್ ಪದಕ ವಿಜೇತೆ. ಆಕೆಯನ್ನು ವೈಭವ್ ಸೂರ್ಯವಂಶಿ ಬಗ್ಗೆ ಏನು ಅನಿಸುತ್ತದೆ ಎಂದು ಕೇಳುವುದು ಅವರ ಸಾಧನೆ ಮತ್ತು ಕ್ರೀಡೆಗೆ ಇದು ಅನ್ಯಾಯ. ಕ್ರಿಕೆಟ್ ಈಗಾಗಲೇ ದೇಶದಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಸೂರ್ಯವಂಶಿ ಬಗ್ಗೆ ಶೀರ್ಷಿಕೆ ಮಾಡಲು ನಿಮ್ಮ ಕ್ರೀಡಾ ಸಂಪಾದಕರಿಗೆ ಇನ್ನೊಂದು ಸೆಲೆಬ್ರಿಟಿ ಅಭಿಪ್ರಾಯ ಅಗತ್ಯವಿಲ್ಲ.ಬದಲಾಗಿ, ಮುಂದಿನ ಬಾರಿ ವೈಭವ್ ಸೂರ್ಯವಂಶಿಯನ್ನು ಮನು ಭಾಕರ್ ಬಗ್ಗೆ ಕೇಳಿ, ಆಗ ನಿಮಗೆ ಸಿಗುವ ಪ್ರತಿಕ್ರಿಯೆ ನೋಡಿರಿ,” ಎಂದು ಅವರು ಜಾಡಿಸಿದ್ದಾರೆ.